ಅಂಗನವಾಡಿ ಮಕ್ಕಳಿಗೆ ಸರ್ಕಾರದ ದೊಡ್ಡ ಶಾಕ್, ಮಾರ್ಚ್ 2ಕ್ಕೆ ಬೆಂಗಳೂರು ಚಲೋ!

Untitled design 2026 02 24T205319.965

ಬೆಂಗಳೂರು: ರಾಜ್ಯ ಸರ್ಕಾರದ ‘ಉಚಿತ ಭಾಗ್ಯ’ಗಳ ನಡುವೆ ಖಜಾನೆ ಖಾಲಿಯಾಗಿದೆಯೇ ಎಂಬ ಪ್ರಶ್ನೆಗೆ ಪುಷ್ಟಿ ನೀಡುವಂತೆ, ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರದ ವಿಚಾರದಲ್ಲಿ ಸರ್ಕಾರ ವಿವಾದಾತ್ಮಕ ಆದೇಶವೊಂದನ್ನು ಹೊರಡಿಸಿದೆ. ದುಬಾರಿ ದುನಿಯಾದಲ್ಲಿ ಮಕ್ಕಳ ತರಕಾರಿ ಖರೀದಿಗೆ ಕೇವಲ 50 ಪೈಸೆ ನಿಗದಿಪಡಿಸಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತರಕಾರಿಗೆ ಕೇವಲ 50 ಪೈಸೆ

ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಕಲಿಯುತ್ತಿರುವ ಪುಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಹೊಣೆ ಸರ್ಕಾರದ ಮೇಲಿದೆ. ಆದರೆ, ತರಕಾರಿ ಖರೀದಿಗೆ ಪ್ರತಿ ಮಗುವಿಗೆ ದಿನಕ್ಕೆ ಕೇವಲ 50 ಪೈಸೆ ಅನುದಾನ ನಿಗದಿಪಡಿಸಲಾಗಿದೆ. ಅಂದರೆ, ಒಂದು ಅಂಗನವಾಡಿ ಕೇಂದ್ರದಲ್ಲಿ 10 ಮಕ್ಕಳಿದ್ದರೆ, ಆ ಇಡೀ ದಿನದ ತರಕಾರಿ ಖರೀದಿಗೆ ಸರ್ಕಾರ ನೀಡುತ್ತಿರುವುದು ಕೇವಲ 5 ರೂಪಾಯಿ.

ಇಂದಿನ ಕಾಲದಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಅಥವಾ ಒಂದು ಸಣ್ಣ ಟೊಮೆಟೊ ಖರೀದಿಸಲು ಸಹ ಕನಿಷ್ಠ 10-20 ರೂಪಾಯಿ ಬೇಕಿರುವಾಗ, ಇಡೀ ಕೇಂದ್ರದ ತರಕಾರಿಗೆ 5 ರೂಪಾಯಿ ನಿಗದಿ ಮಾಡಿರುವುದು ಹಾಸ್ಯಾಸ್ಪದ ಎಂದು ಅಂಗನವಾಡಿ ಕಾರ್ಯಕರ್ತೆಯರು ಕಿಡಿಕಾರಿದ್ದಾರೆ.

ಅನುದಾನದ ಲೆಕ್ಕಾಚಾರ ಹೀಗಿದೆ

ಪ್ರಸ್ತುತ ಪ್ರತಿ ಮಗುವಿಗೆ ಪೂರಕ ಪೌಷ್ಟಿಕ ಆಹಾರಕ್ಕಾಗಿ ದಿನಕ್ಕೆ ಒಟ್ಟು 18.50 ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು 60:40 ಅನುಪಾತದಲ್ಲಿದೆ. ಸಾಮಾನ್ಯ ಮಕ್ಕಳಿಗೆ ಊಟಕ್ಕೆ 8 ರೂಪಾಯಿ, ಅಪೌಷ್ಟಿಕ ಮಕ್ಕಳಿಗೆ 12 ರೂಪಾಯಿ, ಮೊಟ್ಟೆಗೆ 6 ರೂಪಾಯಿ ಮತ್ತು ತರಕಾರಿಗೆ ಕೇವಲ 0.50 ಪೈಸೆ (50 ಪೈಸೆ) ನೀಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 7 ರೂಪಾಯಿ ದಾಟಿದರೂ ಸರ್ಕಾರ ಮಾತ್ರ 6 ರೂಪಾಯಿ ನೀಡುತ್ತಿದೆ. ಹೆಚ್ಚುವರಿ ಹಣವನ್ನು ಕಾರ್ಯಕರ್ತೆಯರೇ ತಮ್ಮ ಕೈಯಿಂದ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸರ್ಕಾರದ ವಿರುದ್ಧ ಮಾರ್ಚ್‌ 2 ಪ್ರತಿಭಟನೆ

ಈ ಅವೈಜ್ಞಾನಿಕ ದರ ನಿಗದಿಯನ್ನು ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಸಂಘವು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಹಣದುಬ್ಬರದ ಈ ಸಂದರ್ಭದಲ್ಲಿ 50 ಪೈಸೆಗೆ ಯಾವ ತರಕಾರಿ ಸಿಗುತ್ತದೆ ? ಮಕ್ಕಳ ಆರೋಗ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಯಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾರ್ಚ್ 2ರಂದು ‘ಬೆಂಗಳೂರು ಚಲೋ’ ಚಳುವಳಿ ನಡೆಸಲು ನಿರ್ಧರಿಸಲಾಗಿದೆ. ಬಾಲ ವಿಕಾಸ ಸಮಿತಿಯ ಮೂಲಕ ಪ್ರತ್ಯೇಕ ಖಾತೆ ತೆರೆದು ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಒತ್ತಾಯವಾಗಿದೆ.

Exit mobile version