ಹೃದಯವಿದ್ರಾವಕ ಘಟನೆ: ಪೋಷಕರ ನಿರ್ಲಕ್ಷ್ಯದಿಂದ ತ್ರಿವಳಿ ಶಿಶುಗಳು ಸಾವು

Untitled design 2025 09 23t161108.712

ಬೆಂಗಳೂರು/ಆನೇಕಲ್ (ಸೆ.23): ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಕುಟುಂಬದಿಂದ ನಿರ್ಲಕ್ಷ್ಯಕ್ಕೊಳಗಾಗಿ ಬೀದಿಗೆ ಬಿದ್ದ ದಂಪತಿಯೊಂದರ ದುರಂತ ಕಥೆಯೊಂದು ಬೆಳಕಿಗೆ ಬಂದಿದೆ. ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗೊಲ್ಲಹಳ್ಳಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. ತಮ್ಮ ಪ್ರೀತಿಯ ಸಂಕೇತವಾಗಿದ್ದ ತ್ರಿವಳಿ ಶಿಶುಗಳು ಸೂಕ್ತ ವೈದ್ಯಕೀಯ ಆರೈಕೆ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಜನಿಸಿದ ಕೂಡಲೇ ಸಾವನ್ನಪ್ಪಿವೆ.

ಆನಂದ್ ಮತ್ತು ಮಂಜುಳಾ ದಂಪತಿ ಸುಮಾರು ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ ಮೂರು ವರ್ಷದ ಹೆಣ್ಣು ಮಗುವೊಂದು ಇದೆ. ಪ್ರೀತಿ ಮದುವೆಯ ಕಾರಣಕ್ಕಾಗಿ ಇಬ್ಬರ ಕುಟುಂಬಗಳು ಇವರನ್ನು ನಿರ್ಲಕ್ಷಿಸಿದ್ದವು. ಆನಂದ್ ಅವರ ಸಹೋದರನೊಂದಿಗೆ ನಡೆದ ಗಲಾಟೆಯಿಂದಾಗಿ ಮನೆಯನ್ನು ಬಿಟ್ಟು ಬಂದಿದ್ದ ಈ ಜೋಡಿ, ನಿಲ್ಲಲು ನೆಲೆಯಿಲ್ಲದೆ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆರ್ಥಿಕ ಸಂಕಷ್ಟದ ನಡುವೆಯೂ ಇವರು ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಆದರೆ, ಮಂಜುಳಾ ಎರಡನೇ ಬಾರಿ ಗರ್ಭಿಣಿಯಾಗಿದ್ದಾಗ, ಹೊಟ್ಟೆಯಲ್ಲಿ ತ್ರಿವಳಿ ಶಿಶುಗಳಿರುವುದು ಅವರಿಗೆ ಗೊತ್ತಿರಲಿಲ್ಲ. ಏಪ್ರಿಲ್ ತಿಂಗಳಲ್ಲಿ ತಾಯಿ ಕಾರ್ಡ್ ಮಾಡಿಸಿದ್ದರೂ, ನಂತರದ ದಿನಗಳಲ್ಲಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಆಶಾ ಕಾರ್ಯಕರ್ತೆಯರು ಹಲವು ಬಾರಿ ತಪಾಸಣೆಗಾಗಿ ಕರೆಯುತ್ತಿದ್ದರೂ, ದಂಪತಿ ಅದನ್ನು ನಿರ್ಲಕ್ಷಿಸಿದ್ದರು. ಕೆಲಸದ ಒತ್ತಡ, ಬಡತನ ಮತ್ತು ಕುಟುಂಬದ ತಿರಸ್ಕಾರದಿಂದಾಗಿ ವೈದ್ಯಕೀಯ ಆರೈಕೆಗೆ ಆದ್ಯತೆ ನೀಡಲು ಸಾಧ್ಯವಾಗಿರಲಿಲ್ಲ. ಕಳೆದ ಶನಿವಾರ ಮಂಜುಳಾ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಒಂದು ಗಂಡು ಮಗು ಜನಿಸಿತು, ಆದರೆ ಅದು ಮೊದಲೇ ಸಾವನ್ನಪ್ಪಿತ್ತು. ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದಾಗ, ಅವರು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ದಂಪತಿ ಮೊದಲು ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದರು. ಅಲ್ಲಿಂದ ಆನೇಕಲ್ ತಾಲೂಕು ಆಸ್ಪತ್ರೆಗೆ ಹೋದಾಗ, ವೈದ್ಯರು ಹೊಟ್ಟೆಯಲ್ಲಿ ಇನ್ನೂ ಎರಡು ಶಿಶುಗಳು ಸಾವನ್ನಪ್ಪಿರುವುದನ್ನು ದೃಢಪಡಿಸಿದರು. ನಂತರ ಆ ಎರಡು ಶಿಶುಗಳನ್ನು ಹೊರತೆಗೆದು ಚಿಕಿತ್ಸೆ ನೀಡಲಾಯಿತು. ಸದ್ಯ ಮಂಜುಳಾ ಅವರ ಆರೋಗ್ಯ ಸ್ಥಿರವಾಗಿದೆ.

Exit mobile version