ಚಿನ್ನ ವಂಚನೆ ಸೇರಿದಂತೆ ಹಲವಾರು ಅಕ್ರಮ ಹಣಕಾಸು ವ್ಯವಹಾರಗಳಲ್ಲಿ ಹೆಸರು ಕೇಳಿಬಂದಿರುವ ಐಶ್ವರ್ಯ ಗೌಡ ಅವರಿಗೆ ಇದೀಗ ಇ.ಡಿ ಬಿಗ್ ಶಾಕ್ ಕೊಟ್ಟಿದೆ. ಬೃಹತ್ ಮಟ್ಟದ ಹಣಕಾಸು ಅವ್ಯವಹಾರ ಹಾಗೂ ವಂಚನೆ ಸಂಬಂಧಿತ ಆರೋಪಗಳ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಐಶ್ವರ್ಯ ಗೌಡ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸಗಳ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಐಶ್ವರ್ಯ ಗೌಡ ಅವರ ಸ್ವಗೃಹ ಹಾಗೂ ಬೆಂಗಳೂರಿನ ಯಶವಂತಪುರದ ಕಾರ್ಡಿನಲ್ ಅಪಾರ್ಟ್ಮೆಂಟ್ ಇ.ಡಿ. ದಾಳಿಗೆ ಗುರಿಯಾದ ಎರಡು ಪ್ರಮುಖ ಸ್ಥಳಗಳಾಗಿವೆ. ಬೆಳಗ್ಗೆ ಇಡೀ ತಂಡ ಎರಡು ಕಾರಿನಲ್ಲಿ ಆಗಮಿಸಿ ಐಶ್ವರ್ಯ ಮನೆಗೆ ನುಗ್ಗಿ ಪರಿಶೀಲನೆ ಪ್ರಾರಂಭಿಸಿತು. ರೇಡ್ ಸಂದರ್ಭದಲ್ಲಿ ಸಿಆರ್ಪಿಎಫ್ ಯೋಧರನ್ನೂ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅಧಿಕಾರಿಗಳು ಮನೆಯ ಇಂಚಿಂಚೂ ಬಿಡದೆ ತಲಾಷು ನಡೆಸಿ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಹಣಕಾಸು ವ್ಯವಹಾರಗಳ ದಾಖಲೆಗಳು, ಆಸ್ತಿ ಹಂಚಿಕೆ ದಾಖಲೆಗಳು ಹಾಗೂ ಕೆಲವು ಬ್ಯಾಂಕ್ ದಾಖಲೆಗಳೂ ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿಯ ಪ್ರಕಾರ, ದಾಳಿ ವೇಳೆ ಕೆಲ ಅಕ್ರಮ ದಾಖಲೆಗಳು ಮತ್ತು ಹಣಕಾಸು ಪ್ರಮಾಣ ಪತ್ರಗಳು ಪತ್ತೆಯಾಗಿದ್ದು, ಇದರಿಂದ ಐಶ್ವರ್ಯ ಗೌಡ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ಬಳಿಕ ಅವರನ್ನು ವಿಚಾರಣೆಗಾಗಿ ಇ.ಡಿ. ಕಚೇರಿಗೆ ಕರೆದೊಯ್ಯಲಾಗಿದೆ. ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಲಾಗಿದೆ.
ವಿನಯ್ ಕುಲಕರ್ಣಿಯವ ನಿವಾಸದಲ್ಲಿ ಇಡಿ ರೇಡ್
ಇದೆ ಸಂದರ್ಭದಲ್ಲಿ, ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲೂ ತೀವ್ರ ಪರಿಶೀಲನೆ ಮುಂದುವರಿದಿದೆ. ಇಡೀ 16 ಗಂಟೆಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಈ ದಾಳಿಯಲ್ಲಿ, 10ಕ್ಕೂ ಹೆಚ್ಚು ಇ.ಡಿ. ಅಧಿಕಾರಿಗಳು ಭಾಗವಹಿಸಿದ್ದು, ನಾಲ್ಕು ಕಾರುಗಳಲ್ಲಿ ಆಗಮಿಸಿದ್ದಾರೆ. ಮೂಲಗಳ ಪ್ರಕಾರ, ಕುಲಕರ್ಣಿಯವರ ವಿವಿಧ ಬ್ಯಾಂಕ್ ಖಾತೆಗಳ ದಾಖಲೆಗಳು, ಹಣ ವರ್ಗಾವಣೆ ಮಾಹಿತಿ ಹಾಗೂ ವ್ಯವಹಾರ ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.