ಮಾವಿನ ಹಣ್ಣಿನಲ್ಲಿ ರಾಸಾಯನಿಕ ಭೀತಿ: ಖರೀದಿಯಲ್ಲಿ ಎಚ್ಚರಿಕೆಗೆ ತಜ್ಞರ ಸಲಹೆ

ಹಣ್ಣುಗಳ ರಾಜ ಮಾವಿನ ಸೀಸನ್ ಆರಂಭವಾಗಿದ್ದು, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಮಾವಿನ ಬೇಡಿಕೆ ಗಗನಕ್ಕೇರಿದೆ. ಬಾದಾಮಿ, ಸಿಂಧೂರ, ರಸಪುರ, ಬೈಗಂಪಲ್ಲಿ, ಕೇಸರ್, ಮಲ್ಲಿಕಾ, ಇಮಾಮ್ ಪಸಂದ್, ಮಲಗೋ ಶುಗರ್ ಬೇಬಿ, ಕಲ ಇಷಾದ್ ಸೇರಿದಂತೆ ವಿವಿಧ ತಳಿಗಳ ಮಾವು ಮಾರುಕಟ್ಟೆಯಲ್ಲಿ ಲಭ್ಯವಾಗಿದ್ದು, ಮಾವು ಪ್ರಿಯರನ್ನು ಆಕರ್ಷಿಸುತ್ತಿವೆ. ಈ ವರ್ಷ ಮಾವಿನ ಬೆಲೆ ಕೊಂಚ ದುಬಾರಿಯಾದರೂ, ವರ್ಷಕ್ಕೊಮ್ಮೆ ಸಿಗುವ ಈ ಸವಿಯನ್ನು ಕೈಬಿಡಲು ಗ್ರಾಹಕರು ಒಲವು ತೋರದೆ ಖರೀದಿಯಲ್ಲಿ ತೊಡಗಿದ್ದಾರೆ.

ರಾಸಾಯನಿಕ ಬಳಕೆಯ ಆತಂಕ
ಆದರೆ, ಆಕರ್ಷಕವಾಗಿ ಕಾಣುವ, ಚೆನ್ನಾಗಿ ಹಣ್ಣಾದ, ಕಡಿಮೆ ಬೆಲೆಯ ಮಾವನ್ನು ಯಾಮಾರಿಯಾಗಿ ಖರೀದಿಸಿದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಮಾವನ್ನು ಕೃತಕವಾಗಿ ಹಣ್ಣಾಗಿಸಲು ರಾಸಾಯನಿಕಗಳನ್ನು ಬಳಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಈ ರಾಸಾಯನಿಕಗಳಿಂದ ಹಣ್ಣಾದ ಮಾವಿನ ಸೇವನೆಯಿಂದ ಗಂಟಲು ಕೆರತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿ ಮತ್ತು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಸಲಹೆ
ಆಹಾರ ತಜ್ಞ ಡಾ. ಕೀರ್ತಿ ಅವರು, “ಮಾವು ಖರೀದಿಸುವಾಗ ಅದು ರಾಸಾಯನಿಕ ಮುಕ್ತವಾಗಿದೆಯೇ ಎಂದು ಪರಿಶೀಲಿಸಿ. ಕೃತಕವಾಗಿ ಹಣ್ಣಾಗಿಸಿದ ಮಾವು ಆರೋಗ್ಯಕ್ಕೆ ಹಾನಿಕಾರಕ. ಗ್ರಾಹಕರು ಮಾವಿನ ಮೇಲ್ಮೈ, ವಾಸನೆ ಮತ್ತು ಸ್ವಾಭಾವಿಕತೆಯನ್ನು ಗಮನಿಸಬೇಕು,” ಎಂದು ಸಲಹೆ ನೀಡಿದ್ದಾರೆ. ನೋಡಲು ತುಂಬಾ ಆಕರ್ಷಕವಾಗಿರುವ, ಅಸಾಮಾನ್ಯವಾಗಿ ಹೊಳೆಯುವ ಅಥವಾ ಅತಿ ಶೀಘ್ರ ಹಣ್ಣಾದ ಮಾವಿನ ಬಗ್ಗೆ ಸಂಶಯ ವ್ಯಕ್ತಪಡಿಸುವಂತೆ ತಿಳಿಸಿದ್ದಾರೆ.

ರಾಸಾಯನಿಕ ಬಳಕೆಯಿಂದ ಗ್ರಾಹಕರ ಆರೋಗ್ಯಕ್ಕೆ ಉಂಟಾಗುವ ಅಪಾಯದ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿದೆ. ಗ್ರಾಹಕರಿಗೆ ರಾಸಾಯನಿಕ ಬಳಕೆಯ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಮಾರುಕಟ್ಟೆಯಲ್ಲಿ ಮಾವಿನ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.

ಗ್ರಾಹಕರಿಗೆ ಮುಂಜಾಗ್ರತೆ

ಮಾವಿನ ಸವಿಯನ್ನು ಆನಂದಿಸುವ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಗ್ರಾಹಕರು ಎಚ್ಚರಿಕೆಯಿಂದ ಖರೀದಿ ಮಾಡುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

    Exit mobile version