ಇಂದಿನ ಜೀವನಶೈಲಿಯಲ್ಲಿ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವುದು, ಅಜೀರ್ಣ, ಆಮ್ಲೀಯತೆ, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಸಾಮಾನ್ಯವಾಗಿವೆ. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಫಾಸ್ಟ್ ಫುಡ್ ಸೇವನೆ, ಒತ್ತಡ ಹಾಗೂ ವ್ಯಾಯಾಮದ ಕೊರತೆ ಈ ಸಮಸ್ಯೆಗಳಿಗೆ ಪ್ರಮುಖ ಕಾರಣಗಳು. ಇಂತಹ ಸಂದರ್ಭಗಳಲ್ಲಿ ಔಷಧಿಗಳ ಬದಲು ನೈಸರ್ಗಿಕ ಮನೆಮದ್ದುಗಳನ್ನು ಪ್ರಯೋಗಿಸುವುದು ಉತ್ತಮ ಆಯ್ಕೆಯಾಗಿದೆ. ಅದರಲ್ಲಿ ಪ್ರಮುಖವಾಗಿ ವೀಳ್ಯದೆಲೆ ಅತ್ಯಂತ ಉಪಯುಕ್ತ ಗಿಡಮೂಲಿಕೆಯಾಗಿದೆ.
ವೀಳ್ಯದೆಲೆಗಳು ಕೇವಲ ಪೂಜಾ ಕಾರ್ಯಗಳಿಗೆ ಮಾತ್ರ ಸೀಮಿತವಲ್ಲ. ಅವುಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಫೈಬರ್ ಹಾಗೂ ವಿಟಮಿನ್ C ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ. ಪೌಷ್ಟಿಕತಜ್ಞೆ ರಾಜಮಣಿ ಪಟೇಲ್ ಅವರ ಪ್ರಕಾರ, ವೀಳ್ಯದೆಲೆಗಳಿಂದ ತಯಾರಿಸುವ ಈ ಸರಳ ಪಾನೀಯವು ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ನೀಡುತ್ತದೆ.
ಬೇಕಾಗುವ ಪದಾರ್ಥಗಳು
-
2 ತಾಜಾ ವೀಳ್ಯದೆಲೆಗಳು
-
1 ಟೀಚಮಚ ಜೇನುತುಪ್ಪ
-
1 ಕಪ್ ಉಗುರು ಬೆಚ್ಚಗಿನ ನೀರು
-
ಅರ್ಧ ಟೀಚಮಚ ನಿಂಬೆ ರಸ
-
2–3 ತುಳಸಿ ಎಲೆಗಳು
ತಯಾರಿಸುವ ವಿಧಾನ
ಮೊದಲು ವೀಳ್ಯದೆಲೆಗಳನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಅವುಗಳನ್ನು ಒಂದು ಕಪ್ ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ಈ ವೇಳೆ ತುಳಸಿ ಎಲೆಗಳನ್ನೂ ಸೇರಿಸಬಹುದು. ಬಳಿಕ ಎಲೆಗಳನ್ನು ನಿಧಾನವಾಗಿ ಹಿಂಡಿ, ಅದರ ರಸವನ್ನು ನೀರಿನಲ್ಲಿ ಹೊರತೆಗೆಯಿರಿ. ನಂತರ ನೀರನ್ನು ಸೋಸಿ, ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಕಲಸಿ. ನಿಮ್ಮ ಆರೋಗ್ಯಕರ ಪಾನೀಯ ಸಿದ್ಧ.
ಈ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ನಂತರ ಸೇವಿಸಬಹುದು.
ಕೆಮ್ಮು ಮತ್ತು ಶೀತಕ್ಕೆ ಪರಿಹಾರ
ವೀಳ್ಯದೆಲೆಗಳಲ್ಲಿ ಯುಜೆನಾಲ್ ಮತ್ತು ಚಾವಿಕೋಲ್ ಎಂಬ ನೈಸರ್ಗಿಕ ಸಂಯುಕ್ತಗಳು ಇರುತ್ತವೆ. ಇವು ಉರಿಯೂತವನ್ನು ಕಡಿಮೆ ಮಾಡುತ್ತವೆ ಹಾಗೂ ಶ್ವಾಸಕೋಶದಲ್ಲಿ ಜಮಾದ ಕಫವನ್ನು ಹೊರಹಾಕಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಈ ಪಾನೀಯವನ್ನು ಸೇವಿಸುವುದರಿಂದ ಶೀತ, ಕೆಮ್ಮು ಮತ್ತು ಗಂಟಲು ನೋವಿನಿಂದ ಶೀಘ್ರ ಪರಿಹಾರ ದೊರೆಯುತ್ತದೆ.
ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಣೆ
ವೀಳ್ಯದೆಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣ ಹೊಂದಿವೆ. ಅವು ಹೊಟ್ಟೆಯಲ್ಲಿ ಜಮಾಗುವ ಅನಿಲವನ್ನು ಕಡಿಮೆ ಮಾಡಿ, ಉಬ್ಬುವಿಕೆ ಮತ್ತು ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತವೆ. ಈ ಪಾನೀಯ ಆಮ್ಲೀಯತೆಯನ್ನು ಕಡಿಮೆ ಮಾಡಿ, ಹೊಟ್ಟೆಯನ್ನು ಹಗುರವಾಗಿರಿಸುತ್ತದೆ.
ಲಿವರ್ ಡಿಟಾಕ್ಸ್
ವೀಳ್ಯದೆಲೆಗಳಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ C ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಲಿವರ್ ಕಿಣ್ವಗಳನ್ನು ಸಕ್ರಿಯಗೊಳಿಸಿ ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕುತ್ತದೆ. ನಿಯಮಿತ ಸೇವನೆಯಿಂದ ಚಯಾಪಚಯ ಕ್ರಿಯೆಯೂ ಸುಧಾರಿಸುತ್ತದೆ.
ಬಾಯಿಯ ಆರೋಗ್ಯಕ್ಕೂ ಲಾಭ
ವೀಳ್ಯದೆಲೆಯಲ್ಲಿರುವ ನೈಸರ್ಗಿಕ ಎಣ್ಣೆಗಳು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ಇದು ಬಾಯಿಯ ದುರ್ವಾಸನೆ, ಒಸಡುಗಳ ಉರಿಯೂತ ಹಾಗೂ ಸಣ್ಣ ದಂತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಗಮನಿಸಬೇಕಾದ ವಿಷಯ
ಅತಿಯಾಗಿ ಸೇವಿಸದೆ, ಮಿತ ಪ್ರಮಾಣದಲ್ಲಿ ಮಾತ್ರ ಈ ಪಾನೀಯವನ್ನು ಸೇವಿಸುವುದು ಉತ್ತಮ. ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.
ವೀಳ್ಯದೆಲೆಗಳಿಂದ ತಯಾರಿಸುವ ಈ ಸರಳ ಪಾನೀಯ ನಿಮ್ಮ ದಿನನಿತ್ಯದ ಆರೋಗ್ಯವನ್ನು ಸುಧಾರಿಸಲು ನೈಸರ್ಗಿಕ ಹಾಗೂ ಸುರಕ್ಷಿತ ಮಾರ್ಗವಾಗಿದೆ.
