ಶ್ವೇತಭವನದ ಬಳಿ ಗುಂಡಿನ ದಾಳಿ: ಓರ್ವ ಭದ್ರತಾ ಸಿಬ್ಬಂದಿ ಸಾ*ವು

Untitled design 2025 11 28T104542.227

ವಾಷಿಂಗ್ಟನ್ ಡಿಸಿ, ನವೆಂಬರ್ 28: ಅಮೆರಿಕದ ಶ್ವೇತಭವನದ ಸಮೀಪದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಭದ್ರತಾ ಪಡೆಯ (National Guard) ಇಬ್ಬರು ಸಿಬ್ಬಂದಿ ಗುರಿಯಾಗಿದ್ದರು. ದುರದೃಷ್ಟವಶಾತ್‌ ದಾಳಿಯಲ್ಲಿ ಸಾರಾ ಬೆಕ್‌ಸ್ಟ್ರೋಮ್ (Sarah Beckstrom) ಎಂಬ ಮಹಿಳಾ ಗಾರ್ಡ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬ  ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ನವೆಂಬರ್ 27ರ ಸಂಜೆ ಶ್ವೇತಭವನದಿಂದ ಕೇವಲ ಕೆಲವು ನೂರು ಮೀಟರ್ ದೂರದಲ್ಲಿರುವ ಪೆನ್ಸಿಲ್ವೇನಿಯಾ ಅವೆನ್ಯೂ ಬಳಿ ಈ ದಾಳಿ ನಡೆದಿದೆ. ಆರಂಭದಲ್ಲಿ ದಾಳಿಗೆ ಸಿಲುಕಿದ ಇಬ್ಬರು ಸಿಬ್ಬಂದಿಯನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಗಾಯಗಳ ತೀವ್ರತೆಯಿಂದ ಸಾರಾ ಬೆಕ್‌ಸ್ಟ್ರೋಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೊಬ್ಬ ಸಿಬ್ಬಂದಿಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಇನ್ನೂ ಏನೂ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

ಅಧ್ಯಕ್ಷ ಟ್ರಂಪ್ ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇರಾಕ್‌ನಲ್ಲಿರುವ ಅಮೆರಿಕ ಸೈನಿಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತಾ, ನಮ್ಮ ರಾಷ್ಟ್ರೀಯ ಭದ್ರತಾ ಪಡೆಯ ಧೀರ ಮಹಿಳಾ ಗಾರ್ಡ್ ಸಾರಾ ಬೆಕ್‌ಸ್ಟ್ರೋಮ್ ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಟ್ರಂಪ್‌ ಬೇಸರ ವ್ಯಕ್ತಪಡಿಸಿದ್ದಾರೆ.

ದಾಳಿ ನಡೆಸಿದ ಆರೋಪಿಯನ್ನು ಸೀಕ್ರೆಟ್ ಸರ್ವಿಸ್ ಮತ್ತು ಡಿಸಿ ಮೆಟ್ರೋ ಪೊಲೀಸ್ ತಕ್ಷಣವೇ ಬಂಧಿಸಿದ್ದಾರೆ. ಆರೋಪಿಯ ಹೆಸರು ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಆ ಪ್ರಾಣಿ ಶೀಘ್ರದಲ್ಲೇ ತನ್ನ ಕೃತ್ಯಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯ ಬೆನ್ನಲ್ಲೇ ರಾಜಧಾನಿ ವಾಷಿಂಗ್ಟನ್‌ನಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಶ್ವೇತಭವನ, ಕ್ಯಾಪಿಟಲ್ ಹಿಲ್, ಪೆಂಟಗನ್ ಸುತ್ತಮುತ್ತ 500 ಹೆಚ್ಚುವರಿ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧ್ಯಕ್ಷೀಯ ಕಚೇರಿ ಘೋಷಿಸಿದೆ. ಡ್ರೋನ್ ಹಾರಾಟಕ್ಕೆ ನಿರ್ಬಂಧ, ರಸ್ತೆಗಳಲ್ಲಿ ಹೆಚ್ಚುವರಿ ಚೆಕ್‌ಪೋಸ್ಟ್‌ಗಳು, ಭದ್ರತಾ ವಲಯ ವಿಸ್ತರಣೆ ಮಾಡಲಾಗಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ನಂತರದ ಉದ್ವಿಗ್ನ ವಾತಾವರಣದಲ್ಲಿ ಈ ಘಟನೆ ನಡೆದಿರುವುದು ದೇಶದ ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದೆ. ಎಫ್‌ಬಿಐ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಸಂಯುಕ್ತವಾಗಿ ತನಿಖೆ ನಡೆಸುತ್ತಿವೆ. ಶ್ವೇತಭವನದ ಬಳಿಯೇ ಇಂತಹ ದಾಳಿ ನಡೆದಿರುವುದು ಅಪರೂಪದ ಘಟನೆಯಾಗಿದ್ದು, ಅಮೆರಿಕದ ರಾಜಕೀಯ ವಲಯದಲ್ಲಿ ಆಂದೋಲನ ಮೂಡಿಸಿದೆ.

Exit mobile version