ಭೀಕರ ಭೂಕಂಪದಿಂದ ನಲುಗಿದ ಥೈಲ್ಯಾಂಡ್​, ಮಯನ್ಮಾರ್​: ಸಾವಿನ ಸಂಖ್ಯೆ 700ಕ್ಕೆ ಏರಿಕೆ

Untitled design 2025 03 29t132832.065

ಥೈಲ್ಯಾಂಡ್ ಮತ್ತು ಮಯನ್ಮಾರ್‌ಗಳಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ಈಗಾಗಲೇ 700 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1,670 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ.

ಈ ಭೂಕಂಪ ಮಯನ್ಮಾರ್‌ನ ಸಗೈಂಗ್ ಪ್ರದೇಶದಲ್ಲಿ ಕೇಂದ್ರಗೊಂಡಿದ್ದು, 7.7 ರಿಕ್ಟರ್ ಮಾಪಕದಲ್ಲಿ ತೀವ್ರತೆಯನ್ನು ದಾಖಲಿಸಿದೆ. ಭೂಕಂಪದಿಂದ ಭೂಮಿಯ ಕಂಪನಗಳು ಮಯನ್ಮಾರ್‌ನ ರಾಜಧಾನಿ ನೇಪಿಡಾವ್ ಹಾಗೂ ಥೈಲ್ಯಾಂಡ್‌ನಲ್ಲೂ ಪರಿಣಾಮ ಬೀರಿದೆ. ಮಯನ್ಮಾರ್‌ನ ಮಂಡಲಾಯ್ ನಗರದ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಜನರ ಮೇಲೆ ಮಸೀದಿ ಕುಸಿದ ಪರಿಣಾಮ ಹಲವರು ಮೃತಪಟ್ಟಿದ್ದಾರೆ. ಅಲ್ಲದೆ, ಮಂಡಲಾಯ್‌ನ ಒಂದು ವಿಶ್ವವಿದ್ಯಾಲಯದ ಕಟ್ಟಡವೂ ಸಂಪೂರ್ಣವಾಗಿ ಕುಸಿದಿದೆ.

ಮೃತ ಹಾಗೂ ಗಾಯಾಳುಗಳ ಸಂಖ್ಯೆ ಹೆಚ್ಚಳ

ಮಯನ್ಮಾರ್‌ನ ಸೇನಾ ಮುಖ್ಯಸ್ಥ ಮಿನ್ ಔಂಗ್ ಹ್ಲಾಂಗ್, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಭೂಕಂಪದ ಪರಿಣಾಮ ಸಾವಿರಾರು ಜನರು ಗಾಯಗೊಂಡಿದ್ದಾರೆ. ಅನೇಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವಾರು ಕಟ್ಟಡಗಳು ಪತನಗೊಂಡಿದ್ದು, ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಯನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸೇನೆ ಸಾರ್ವಜನಿಕರಲ್ಲಿ ರಕ್ತದಾನ ಮಾಡುವಂತೆ ವಿನಂತಿಸಿದೆ.

ಥೈಲ್ಯಾಂಡ್‌ನಲ್ಲಿ ಈ ಭೂಕಂಪದಿಂದ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇಲ್ಲಿಯೂ 22 ಮಂದಿ ಗಾಯಗೊಂಡಿದ್ದು, 101 ಮಂದಿ ನಾಪತ್ತೆಯಾಗಿದ್ದಾರೆ. ಬ್ಯಾಂಕಾಕ್‌ನಲ್ಲಿ ಭೂಕಂಪದ ಪರಿಣಾಮ ದೊಡ್ಡ ಕಟ್ಟಡವೊಂದು ಕುಸಿದು 100 ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಪರಿಸ್ಥಿತಿಯ ತೀವ್ರತೆಯನ್ನು ಮನಗಂಡ ಥೈಲ್ಯಾಂಡ್‌ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ, ತುರ್ತು ಸಭೆ ಕರೆದು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಬಸ್, ಮೆಟ್ರೋ ಮತ್ತು ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಆಂತರರಾಷ್ಟ್ರೀಯ ನೆರವು

ಮಯನ್ಮಾರ್‌ನಿಗೆ ಸಹಾಯ ಹಸ್ತ ವಿಸ್ತರಿಸುವ ಮೊದಲ ದೇಶಗಳಲ್ಲಿ ಭಾರತ ಕೂಡ ಒಂದು. ಭಾರತದ ವಾಯುಸೇನೆ ತನ್ನ ಸಿ-130 ಜೆ ವಿಮಾನದ ಮೂಲಕ ತುರ್ತು ನೆರವು ಸಾಮಗ್ರಿಗಳನ್ನು ಮಯನ್ಮಾರ್ ಮತ್ತು ಥೈಲ್ಯಾಂಡ್‌ಗೆ ಕಳುಹಿಸಿದೆ. ಇಲ್ಲಿ ಟೆಂಟ್, ಹಾಸಿಗೆ ಚೀಲ, ಆಹಾರ ಸಾಮಗ್ರಿ, ಜನರೇಟರ್‌ ಸೆಟ್‌ಗಳು ಸೇರಿವೆ. ಜೊತೆಗೆ ಪ್ಯಾರಾಸಿಟಮಾಲ್, ಆಂಟಿಬಯೋಟಿಕ್, ಸೀರಿಂಜ್, ಬ್ಯಾಂಡೇಜ್‌ಗಳನ್ನೂ ರವಾನಿಸಲಾಗಿದೆ. ಅಮೆರಿಕಾ ಕೂಡ ಮಯನ್ಮಾರ್‌ಗೆ 5 ಮಿಲಿಯನ್ ಡಾಲರ್ ಹಣಸಹಾಯ ನೀಡಲು ನಿರ್ಧರಿಸಿದೆ.

ಇದೇ ವೇಳೆ ಎರಡೂ ದೇಶಗಳ ಸರ್ಕಾರಿ ನಾಯಕರು ತಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಹೆಚ್ಚಿನ ಪ್ರಾಣಹಾನಿ ತಡೆಯಲು ಎಲ್ಲಾ ಸಾಧ್ಯ ಪ್ರಯತ್ನಗಳನ್ನು ಕೈಗೊಳ್ಳುತ್ತಿದ್ದಾರೆ. ಭೂಕಂಪದ ಪರಿಣಾಮ ಮನೆ, ಕಟ್ಟಡಗಳು ನೆಲಸಮವಾಗಿವೆ.

Exit mobile version