ಗ್ರೀನ್ ಕೌಂಟಿ, ಅಮೆರಿಕ: ಅಮೆರಿಕದ ಗ್ರೀನ್ ಕೌಂಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಭಾರತದ ಹೈದರಾಬಾದ್ ಮೂಲದ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ದುರಂತ ಸೋಮವಾರ ನಡೆದಿದೆ. ಮೃತರನ್ನು ಶ್ರೀ ವೆಂಕಟ್ (40), ತೇಜಸ್ವಿನಿ (36), ಮತ್ತು ಅವರ ಇಬ್ಬರು ಮಕ್ಕಳಾದ ಸಿದ್ಧಾರ್ಥ (9) ಹಾಗೂ ಮೃದಾ (7) ಎಂದು ಗುರುತಿಸಲಾಗಿದೆ. ಈ ಕುಟುಂಬವು ಡಲ್ಲಾಸ್ನಲ್ಲಿ ವಾಸವಾಗಿದ್ದು, ರಜೆಯ ನಿಮಿತ್ತ ಅಟ್ಲಾಂಟಾದ ಸಂಬಂಧಿಕರನ್ನು ಭೇಟಿಯಾಗಿ ಡಲ್ಲಾಸ್ಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಪಘಾತವು ಗ್ರೀನ್ ಕೌಂಟಿಯಲ್ಲಿ ರಾಂಗ್ ರೂಟ್ನಲ್ಲಿ ಬಂದ ಮಿನಿ ಟ್ರಕ್ ಒಂದು ಈ ಕುಟುಂಬದ ಕಾರಿಗೆ ಡಿಕ್ಕಿ ಹೊಡೆದಿದೆ. ಘರ್ಷಣೆಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರೂ ಸಜೀವ ದಹನವಾಗಿದ್ದಾರೆ. ಅಪಘಾತದ ತೀವ್ರತೆಯಿಂದಾಗಿ ಶವಗಳು ಗುರುತಿಸಲಾಗದ ಸ್ಥಿತಿಯಲ್ಲಿದ್ದು, ಡಿಎನ್ಎ ಪರೀಕ್ಷೆ ಮತ್ತು ದಂತ ದಾಖಲೆಗಳ ಮೂಲಕ ಗುರುತು ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಗುರುತಿಸಿದ ಬಳಿಕ ಹೈದರಾಬಾದ್ಗೆ ಕೊಂಡೊಯ್ಯಲು ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.
ಈ ಕುಟುಂಬವು ಕಳೆದ ಮೂರು ವರ್ಷಗಳಿಂದ ಡಲ್ಲಾಸ್ನಲ್ಲಿ ವಾಸವಾಗಿತ್ತು. ಜುಲೈ 4ರ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ರಜೆಯ ಸಂದರ್ಭದಲ್ಲಿ ಅಟ್ಲಾಂಟಾದಲ್ಲಿ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ತೆರಳಿದ್ದರು. ಹಿಂದಿರುಗುವಾಗ ಈ ದುರಂತ ಸಂಭವಿಸಿದೆ. ಈ ಘಟನೆಯು ಭಾರತೀಯ ಸಮುದಾಯದಲ್ಲಿ ಆಘಾತವನ್ನು ಉಂಟುಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದುರಂತದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಈ ಘಟನೆಯು ಟೆಕ್ಸಾಸ್ನಲ್ಲಿ ಭಾರತೀಯ ಕುಟುಂಬಗಳನ್ನು ಒಳಗೊಂಡ ಇತ್ತೀಚಿನ ದುರಂತಗಳ ಸರಣಿಯ ಭಾಗವಾಗಿದೆ. ಸೆಪ್ಟೆಂಬರ್ 2024ರಲ್ಲಿ, ಟೆಕ್ಸಾಸ್ನ ಅನ್ನಾದಲ್ಲಿ ನಾಲ್ವರು ಭಾರತೀಯರನ್ನು ಒಳಗೊಂಡ ಒಂದು ಎಸ್ಯುವಿ ವಾಹನವನ್ನು ವೇಗವಾಗಿ ಬಂದ ಟ್ರಕ್ ಡಿಕ್ಕಿಹೊಡೆದಾಗ ಅದು ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಲ್ಲಿ ಆರ್ಯನ್ ರಘುನಾಥ್ ಒರಂಪತಿ, ಫಾರೂಕ್ ಶೇಕ್, ಲೋಕೇಶ್ ಪಾಲಚರ್ಲ ಮತ್ತು ದರ್ಶಿನಿ ವಾಸುದೇವನ್ ಮೃತಪಟ್ಟಿದ್ದರು. ಆಗಸ್ಟ್ 2024ರಲ್ಲಿ ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಮಗಳು ಮೃತಪಟ್ಟಿದ್ದರು. ಈ ಘಟನೆಯ ಕುರಿತು ಸ್ಥಳೀಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.