ಬೆಂಗಳೂರು: ಸುಬ್ರಹ್ಮಣ್ಯಪುರದ ಬಳಿಯ ಪೂರ್ಣಪ್ರಜ್ಞ ಲೇಔಟ್ನ ಓಯೋ ರೂಮ್ನಲ್ಲಿ ತನ್ನ ಪ್ರೇಯಸಿ ಹರಿಣಿಯನ್ನು 17 ಬಾರಿ ಇರಿದು ಹತ್ಯೆ ಮಾಡಿದ ಆರೋಪಿ ಯಶಸ್ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ತನಿಖೆಯಲ್ಲಿ ಯಶಸ್ ಎರಡು ತಿಂಗಳ ಹಿಂದೆಯೇ ಈ ಕೊಲೆಗೆ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಯಶಸ್, ಬಿಸಿಎ ಪದವೀಧರನಾಗಿದ್ದು, ವೈಟ್ಫೀಲ್ಡ್ನ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆತನ ತಂದೆ ಬಿಎಂಟಿಸಿ ನೌಕರ ಮತ್ತು ತಾಯಿ ಶಿಕ್ಷಕಿಯಾಗಿದ್ದಾರೆ. ದಂಪತಿಯ ಏಕೈಕ ಮಗನಾದ ಯಶಸ್ಗೆ ಲಕ್ಷಾಂತರ ರೂಪಾಯಿ ಸಂಬಳವಿತ್ತು. ಆದರೆ, ಎರಡು ತಿಂಗಳ ಹಿಂದೆ ಹರಿಣಿ ತಮ್ಮ ಅನೈತಿಕ ಸಂಬಂಧವನ್ನು ಕುಟುಂಬಕ್ಕೆ ತಿಳಿದಿದೆ ಎಂದು ತಿಳಿಸಿ, ಸಂಬಂಧವನ್ನು ಕೊನೆಗೊಳಿಸುವಂತೆ ಯಶಸ್ಗೆ ಎಚ್ಚರಿಕೆ ನೀಡಿದ್ದಳು. “ನಾವಿಬ್ಬರು ದೂರವಾಗೋಣ, ಮತ್ತೆ ಭೇಟಿಯಾಗಬೇಡ” ಎಂದು ಹೇಳಿದ್ದಳು. ಇದರಿಂದ ವಿಚಲಿತನಾದ ಯಶಸ್, ಅಂದೇ ಹರಿಣಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬುದ್ಧಿವಾದದ ನಂತರವೂ ಬದಲಾಗದ ಯಶಸ್
ಹರಿಣಿಯ ಸಹೋದರನಿಗೆ ಈ ಅನೈತಿಕ ಸಂಬಂಧದ ವಿಷಯ ತಿಳಿದು, ಅವನು ಕೆಂಗೇರಿಯ ಯಶಸ್ನ ಮನೆಗೆ ತೆರಳಿ ಎಚ್ಚರಿಕೆ ನೀಡಿದ್ದ. ಜೊತೆಗೆ, ಯಶಸ್ನ ಪೋಷಕರಿಗೂ ಈ ಬಗ್ಗೆ ತಿಳಿಸಿ, ತಮ್ಮ ಮಗನನ್ನು ಹದ್ದುಬಸ್ತಿನಲ್ಲಿ ಇಡುವಂತೆ ಸೂಚಿಸಿದ್ದ. ಯಶಸ್ನ ಪೋಷಕರು ಕೂಡ “ಹರಿಣಿಯ ಸಹವಾಸವನ್ನು ಬಿಟ್ಟುಬಿಡು, ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡಿಕೊಳ್ಳು” ಎಂದು ಬುದ್ಧಿವಾದ ಹೇಳಿದ್ದರು. ಆದರೂ, ಯಶಸ್ ಹರಿಣಿಯನ್ನು ಭೇಟಿಯಾಗಲು ಹಪಹಪಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊನೆಗೆ, ಈ ಭೇಟಿಯೇ ಆಕೆಯ ಕೊಲೆಗೆ ಕಾರಣವಾಯಿತು.