ಜಮೀನು ವಿಚಾರಕ್ಕಾಗಿ ಹೊಡೆದಾಡಿ‌ ಮೃತಪಟ್ಟ ವ್ಯಕ್ತಿ ಶವವಿಟ್ಟು ಪ್ರತಿಭಟನೆ

123 2025 04 27t131420.371

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆ ಎದುರು ಗೌಡಪ್ಪ ಚವನಭಾವಿ (35) ಎಂಬ ವ್ಯಕ್ತಿಯ ಮೃತದೇಹವಿಟ್ಟು ಕುಟುಂಬಸ್ಥರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗೌಡಪ್ಪನ ಮೇಲೆ ನಡೆದ ದಾಳಿಯಿಂದ ಅವರು ಮೃತಪಟ್ಟಿದ್ದು, ನಾರಾಯಣಪುರ ಪಿಎಸ್‌ಐ ರಾಜಶೇಖರ ರಾಥೋಡ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈ ಪ್ರತಿಭಟನೆ ನಡೆದಿದೆ.

ಗೌಡಪ್ಪ ಚವನಭಾವಿ ತಮ್ಮ ಜಮೀನು ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ನಾರಾಯಣಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಪಿಎಸ್‌ಐ ರಾಜಶೇಖರ ರಾಥೋಡ್ ಅವರು ಗೌಡಪ್ಪನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಗುಂಗಿನಲ್ಲಿದ್ದ ಗೌಡಪ್ಪ, ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ, ಪಕ್ಕದ ಜಮೀನಿನ ಮಾಲೀಕ ನೀಲಪ್ಪ ಸೇರಿದಂತೆ ಮೂವರು ಅವರ ಮೇಲೆ ಮತ್ತೊಮ್ಮೆ ದಾಳಿ ನಡೆಸಿದ್ದಾರೆ ಎಂದು ದೂರಲಾಗಿದೆ.

ಗಂಭೀರವಾಗಿ ಗಾಯಗೊಂಡ ಗೌಡಪ್ಪನನ್ನು ಬಾಗಲಕೋಟದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಗೌಡಪ್ಪನ ಕುಟುಂಬಸ್ಥರು ಮತ್ತು ಸ್ಥಳೀಯರು, ನ್ಯಾಯಕ್ಕಾಗಿ ಠಾಣೆಗೆ ಹೋದ ವ್ಯಕ್ತಿಯ ಮೇಲೆ ಪೊಲೀಸ್ ಅಧಿಕಾರಿಯೇ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್‌ಐ ರಾಜಶೇಖರ ರಾಥೋಡ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ಮೃತನ ಶವವನ್ನು ನಾರಾಯಣಪುರ ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಗೌಡಪ್ಪನ ಕುಟುಂಬಸ್ಥರು ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Exit mobile version