ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಾಟಾಳ್ ಅರೆಸ್ಟ್

Siddu stalin kcr (71)

ರಾಜ್ಯದ ಜನರಿಗೆ ಸಾಲು ಸಾಲು ಬೆಲೆ ಏರಿಕೆ ಬರೆ ಎಳೆದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಗಳು ಶುರುವಾಗಿವೆ. ಇದು ದುಬಾರಿ ದುನಿಯಾ, ಮಹದೇವಪ್ಪಗೂ ಫ್ರೀ, ಕಾಕಾಸಾಹೇಬಗೂ ಫ್ರೀ ಅಂತ ಹೇಳುತ್ತಲೇ ಭರ್ಜರಿ ಗ್ಯಾರಂಟಿ ಘೋಷಿಸಿದ ರಾಜ್ಯ ಸರ್ಕಾರ, ಈಗ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಎಳೆದಿದೆ.

ಬಸ್ ಪ್ರಯಾಣ ದರ, ಮೆಟ್ರೋ ದರ ಏರಿಸಿದ್ದ ರಾಜ್ಯ ಸರ್ಕಾರ, ಬಳಿಕ ಹಾಲು, ವಿದ್ಯುತ್ ದರ, ಡೀಸೆಲ್‌ ಬೆಲೆ ಏರಿಸಿ ಶಾಕ್ ಕೊಟ್ಟಿತ್ತು. ರಾಜ್ಯ ಸರ್ಕಾರ ಈ ಬೆಲೆ ಏರಿಕೆ ನಿರ್ಧಾರಕ್ಕೆ ವಿಪಕ್ಷಗಳಿಂದ, ರಾಜ್ಯದ ಜನರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು ಬೆಲೆ ಏರಿಕೆಯನ್ನು ಖಂಡಿಸಿ ಈಗಾಗಲೇ ಜನಾಕ್ರೋಶ ಯಾತ್ರೆಯನ್ನು ಸಹ ಶುರು ಮಾಡಿದೆ. ಅಲ್ಲದೇ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನಿರಂತರ ಹೋರಾಟ ಮಾಡುತ್ತಲೇ ಇದ್ದರು. ಅದೇ ರೀತಿ ಇಂದು ರಾಮನಗರದಲ್ಲಿ ಬೆಲೆ ಏರಿಕೆ ವಿರುದ್ಧ ಹೋರಾಟದ ಸಂದರ್ಭದಲ್ಲಿ ಪೊಲೀಸರು ವಾಟಾಳ್‌ ನಾಗರಾಜ್‌ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ರಾಮನಗರದ KSRTC ಬಸ್ ನಿಲ್ದಾಣದಲ್ಲಿ ಪೊಲೀಸರು ಇಂದು(ಏಪ್ರಿಲ್10) ಬಂಧಿಸಿದ್ದಾರೆ. ಬೆಲೆ ಏರಿಕೆಯನ್ನು ಖಂಡಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆಯ ವೇಳೆ ಈ ಘಟನೆ ನಡೆದಿದ್ದು, ವಾಟಾಳ್ ನಾಗರಾಜ್ ಅವರು ಸೌದೆ ಒಲೆಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರ ವಿರುದ್ಧ ವಾಟಾಳ್ ಆಕ್ರೋಶ!

ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಜೊತೆಗೆ ಹಲವಾರು ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು. ಆದರೆ, ಪೊಲೀಸರು ಈ ಕಾರ್ಯಕ್ರಮಕ್ಕೆ ಅವಕಾಶ ನೀಡದೆ, ಪ್ರತಿಭಟನಾಕಾರರನ್ನು ಬಂಧಿಸಿದರು. ಈ ಘಟನೆಯನ್ನು “ಪೊಲೀಸರ ದರ್ಬಾರು” ಎಂದು ಕರೆದಿರುವ ವಾಟಾಳ್ ನಾಗರಾಜ್, ಪೊಲೀಸರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇದು ಒಳ್ಳೆಯ ಬೆಳವಣಿಗೆ ಅಲ್ಲ, ಪೊಲೀಸರು ಜನರ ಧ್ವನಿಯನ್ನು ಅಡಗಿಸುತ್ತಿದ್ದಾರೆ. ಧಿಕ್ಕಾರ, ಧಿಕ್ಕಾರ!” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆಯ ವಿರುದ್ಧ ರಾಜ್ಯದಲ್ಲಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ರಾಮನಗರದಲ್ಲಿ ನಡೆದ ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರತಿಭಟನಾಕಾರರು ಸರ್ಕಾರದ ನೀತಿಗಳನ್ನು ಟೀಕಿಸಿ, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನ ಸೆಳೆಯಲು ಈ ಹೋರಾಟವನ್ನು ಆರಂಭಿಸಿದ್ದರು. ಆದರೆ, ಪೊಲೀಸರ ಕ್ರಮದಿಂದಾಗಿ ಈ ಪ್ರತಿಭಟನೆ ಅರ್ಧಕ್ಕೆ ನಿಂತಿದೆ.

ಸ್ಥಳೀಯರು ಈ ಬಂಧನವನ್ನು ಖಂಡಿಸಿದ್ದು, ಪೊಲೀಸರ ಕ್ರಮವು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ. ವಾಟಾಳ್ ನಾಗರಾಜ್ ಅವರು ತಮ್ಮ ಬಂಧನದ ಬಳಿಕವೂ ಹೋರಾಟ ಮುಂದುವರಿಸುವ ತೀರ್ಮಾನವನ್ನು ಪ್ರಕಟಿಸಿದ್ದಾರೆ. “ಜನರ ಹಕ್ಕುಗಳಿಗಾಗಿ ನಾವು ಮತ್ತೆ ಧ್ವನಿ ಎತ್ತುತ್ತೇವೆ,” ಎಂದು ಅವರು ಹೇಳಿದ್ದಾರೆ. 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version