ತುಮಕೂರು: ರಂಗಭೂಮಿಯ ದಿಗ್ಗಜರು, ಹಿರಿಯ ನಟಿ ಹಾಗೂ ಮಾಜಿ ಸಂಸದೆಯೂ ಆಗಿರುವ ಬಿ. ಜಯಶ್ರೀ ಅವರು ತುಮಕೂರಿನ ಗುಬ್ಬಿ ತಾಲೂಕಿನ ಸರ್ಕಾರಿ ಕಚೇರಿಯೊಂದರಲ್ಲಿ ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಭೂಮಿಯನ್ನು ದಾನ ನೀಡಿದ್ದರೂ, ಅದರ ಸರ್ವೆ ಕಾರ್ಯಕ್ಕಾಗಿ ಅಧಿಕಾರಿಗಳು ವಿನಾಕಾರಣ ಅಲೆದಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ಹಿನ್ನೆಲೆ:
ಗುಬ್ಬಿ ತಾಲೂಕಿನ ರಂಗ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಬಿ. ಜಯಶ್ರೀ ಅವರು ಜಿ.ವಿ. ಮಾಲತಮ್ಮ ಆರ್ಟ್ ಟ್ರಸ್ಟ್ ಗೆ ತಮ್ಮ ಐದು ಗುಂಟೆ ಜಮೀನನ್ನು ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಿ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಅವರ ಆಶಯವಾಗಿತ್ತು.
ಜಮೀನಿನ ಹದ್ದುಬಸ್ತು ಮತ್ತು ಸರ್ವೆ ಕಾರ್ಯಕ್ಕಾಗಿ ಬಿ. ಜಯಶ್ರೀ ಅವರು ನಿಯಮಾನುಸಾರ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ ಮೂರುವರೆ ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನೂ ಪಾವತಿಸಲಾಗಿದೆ. ಆದರೆ, ಹಣ ಪಾವತಿಸಿ ದಿನಗಳೇ ಕಳೆದರೂ ಭೂಮಾಪನ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಲು ಮುಂದಾಗಿಲ್ಲ. ಪದೇ ಪದೇ ಗುಬ್ಬಿ ತಾಲೂಕಿನ ಭೂಮಾಪನ ಕಚೇರಿಗೆ ಅಲೆದರೂ ಯಾವೊಬ್ಬ ಅಧಿಕಾರಿಯೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಜಯಶ್ರೀ ಆಕ್ರೋಶ
ನಾನು ವೈಯಕ್ತಿಕ ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ರಂಗಭೂಮಿಯ ಹಿತದೃಷ್ಟಿಯಿಂದ ಜಾಗ ನೀಡಿದ್ದೇನೆ. ಆದರೆ ಒಬ್ಬ ಕಲಾವಿದೆಗೆ ಮತ್ತು ಹಿರಿಯ ನಾಗರಿಕರಿಗೆ ಅಧಿಕಾರಿಗಳು ನೀಡುತ್ತಿರುವ ಗೌರವ ಇದೇನಾ ? ಎಂದು ಜಯಶ್ರೀ ಪ್ರಶ್ನಿಸಿದ್ದಾರೆ. ಸರ್ವೆ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉದಾಸೀನವಾಗಿ ಉತ್ತರ ನೀಡುತ್ತಿದ್ದಾರೆ ಎಂಬುದು ಅವರ ಆರೋಪ.





