ತುಮಕೂರು: ಊರತುಂಬಾ ಪೋಸ್ಟರ್ ಅಂಟಿಸಿ ರೈತನ ಅಪಮಾನಿಸಿದ ಚೀಟ್ ಫಂಡ್ ಕಂಪನಿ!

ರೈತನ ಪೋಸ್ಟ‌ರ್ ಅಂಟಿಸಿ ಅಪಮಾನಿಸಿದ ಚೀಟ್ ಫಂಡ್ ಕಂಪನಿ!

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕುರಂಕೋಟೆ ಗ್ರಾಮದಲ್ಲಿ ರೈತ ಸಿದ್ದರಾಜಯ್ಯ ಅವರನ್ನು ಸಾಲಗಾರ ಎಂದು ಆರೋಪಿಸಿ ಊರಿನಾದ್ಯಂತ ಪೋಸ್ಟರ್ ಅಂಟಿಸಿ ಅವಮಾನಿಸಿರುವ ಘಟನೆ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ಗಳು ರಾತ್ರೋರಾತ್ರಿ ಅಂಟಿಸಲ್ಪಟ್ಟಿದ್ದು, ಕೊರಟಗೆರೆ ಬಸ್ ನಿಲ್ದಾಣ, ನೀರಿನ ಘಟಕ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇಡಲಾಗಿದೆ.

ಪೋಸ್ಟರ್‌ನಲ್ಲಿ ಸಿದ್ದರಾಜಯ್ಯ ಅವರ ಫೋಟೋ ಸಹಿತ “ಸಾಲ ಪಡೆದಿದ್ದಾನೆ” ಎಂದು ದೊಡ್ಡದಾಗಿ ಬರೆಯಲಾಗಿದೆ. ಈ ಕೃತ್ಯದ ಹಿಂದೆ ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಬ್ರಾಂಚ್ ಮ್ಯಾನೇಜರ್ ಗೌತಮ್ ರಾಜ್ ಕೈವಾಡವಿರಬಹುದು ಎಂದು ಸಿದ್ದರಾಜಯ್ಯ ಆರೋಪಿಸಿದ್ದಾರೆ.

ಸಿದ್ದರಾಜಯ್ಯ ಅವರು ಒಂದು ವರ್ಷದ ಹಿಂದೆ ಬಟವಾಡಿಯ ಕೊಡಚಾದ್ರಿ ಚಿಟ್ಸ್‌ನಿಂದ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆ ಸಮಯದಲ್ಲಿ ಗೌತಮ್ ರಾಜ್ ಬ್ರಾಂಚ್ ಮ್ಯಾನೇಜರ್ ಆಗಿದ್ದರು. ಸಿದ್ದರಾಜಯ್ಯ ಪ್ರಕಾರ, ಅವರು ಪ್ರತಿ ತಿಂಗಳು ಫೋನ್‌ಪೇ ಮತ್ತು ನಗದು ಮೂಲಕ ಕಂತುಗಳನ್ನು ನಿಯಮಿತವಾಗಿ ಪಾವತಿಸುತ್ತಿದ್ದರು. ಆದರೆ ಅಪಘಾತದಲ್ಲಿ ಕಾಲು ಮುರಿದ ಪರಿಣಾಮ ನಾಲ್ಕು ತಿಂಗಳು ಕಂತು ಪಾವತಿ ಮಾಡಲು ಸಾಧ್ಯವಾಗಲಿಲ್ಲ. ನಂತರ ಮತ್ತೆ ಪಾವತಿ ಆರಂಭಿಸಿದರೂ, ಕಂಪನಿ ಅಥವಾ ಸಂಬಂಧಿತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದಲ್ಲದೆ, 50 ಸಾವಿರ ರೂಪಾಯಿ ಪಡೆದು ಮತ್ತೊಂದು ಸಾಲ ಕೊಡಿಸುತ್ತೇನೆ ಎಂದು ಹೇಳಿ ನಂತರ ಸಾಲ ನೀಡದೆ ಇರುವುದರಿಂದ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ದೂರಿನ ಸೇಡು ತೀರಿಸಿಕೊಳ್ಳಲು ಈ ರೀತಿ ಮಾನಹಾನಿ ಮಾಡುವ ಪೋಸ್ಟರ್ ಅಂಟಿಸಲಾಗಿದೆ ಎಂದು ಸಿದ್ದರಾಜಯ್ಯ ಹೇಳಿದ್ದಾರೆ.

ಕೊಡಚಾದ್ರಿ ಚಿಟ್ ಫಂಡ್ ಕಚೇರಿಯನ್ನು ಸಂಪರ್ಕಿಸಿದಾಗ, ಕಂಪನಿಯಿಂದ ಯಾವುದೇ ಅಧಿಕೃತ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಯ ಮಾನಹಾನಿ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಘಟನೆ ಕುರಿತು ಪೊಲೀಸ್ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ.

ಈ ಘಟನೆಯಿಂದ ಸ್ಥಳೀಯರಲ್ಲಿ ಚಿಟ್ ಫಂಡ್ ಕಂಪನಿಗಳ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆ ಶುರುವಾಗಿದೆ. ರೈತರು ಮತ್ತು ಸಾಮಾನ್ಯರು ಸಾಲ ಪಡೆಯುವಾಗ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನು ಈ ಘಟನೆ ನೀಡುತ್ತಿದೆ.

Exit mobile version