ಬೆಂಗಳೂರು: ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿಪಿ ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿರುವ ಘಟನೆ ನಡೆದಿದೆ. ಈ ಘಟನೆಯಿಂದ ಕೆಲಕಾಲ ಕಾಂಗ್ರೆಸ್ ಕಚೇರಿ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ರಾಜ್ಯ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದರು. ಈ ವೇಳೆ ಹಲವು ಬಿಜೆಪಿ ನಾಯಕರು ಮತ್ತು ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದರು.
ಈ ಹಿನ್ನೆಲೆಯಲ್ಲೇ ಹರಿಹರ ಕ್ಷೇತ್ರದ ಶಾಸಕ ಬಿಪಿ ಹರೀಶ್ ಅವರಿಗೆ ಪ್ರತಿಭಟನೆ ನಡೆಯುವ ಸ್ಥಳದ ಲೊಕೇಶನ್ ಮೊಬೈಲ್ ಮೂಲಕ ಕಳುಹಿಸಲಾಗಿತ್ತು. ಲೊಕೇಶನ್ ಆಧರಿಸಿ ಅವರ ಚಾಲಕ ಕ್ವೀನ್ಸ್ ರಸ್ತೆ ಸಮೀಪ ಕಾರು ನಿಲ್ಲಿಸಿ ಅವರನ್ನು ಇಳಿಸಿದ್ದಾನೆ. ಬಳಿಕ ಸ್ಥಳವನ್ನು ಗಮನಿಸಿದಾಗ ಅದು ಕಾಂಗ್ರೆಸ್ ಕಚೇರಿ ಸಮೀಪ ಎಂಬುದು ಗೊತ್ತಾಗಿದೆ ಎಂದು ಶಾಸಕ ಹರೀಶ್ ತಿಳಿಸಿದ್ದಾರೆ.
ಕಾರಿನಿಂದ ಇಳಿದ ತಕ್ಷಣ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಸುತ್ತುವರಿದು ಘೋಷಣೆ ಕೂಗಲು ಆರಂಭಿಸಿದರು. ಬಳಿಕ ಕೆಲವರು ಅವರ ಮೇಲೆ ಮೊಟ್ಟೆ ಎಸೆದಿದ್ದು, ತಳ್ಳಾಟ-ನೂಕಾಟ ನಡೆಸಿದರೆಂದು ಆರೋಪಿಸಲಾಗಿದೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಅಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಶಾಸಕ ಬಿಪಿ ಹರೀಶ್ ಅವರನ್ನು ಸುರಕ್ಷಿತವಾಗಿ ಸ್ಥಳದಿಂದ ಹೊರಗೆ ಕರೆದೊಯ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಬಿಪಿ ಹರೀಶ್, “ನಮ್ಮ ನಾಯಕ ಆರ್. ಅಶೋಕ್ ಅವರು ಪ್ರತಿಭಟನೆಗೆ ಕರೆ ನೀಡಿದ್ದರು. ಅವರು ಇಲ್ಲಿಯೇ ಇದ್ದಾರೆ ಎಂದುಕೊಂಡು ಚಾಲಕ ನನ್ನನ್ನು ಇಳಿಸಿದ. ನಾನು ಕಾರಿನಿಂದ ಇಳಿದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಓಡಿಬಂದು ಮೊಟ್ಟೆ ಎಸೆದು ಕೈಯಿಂದ ಹೊಡೆದರು. ನಂತರ ಇದು ಕಾಂಗ್ರೆಸ್ ಕಚೇರಿ ಎಂಬುದು ತಿಳಿಯಿತು,” ಎಂದು ಹೇಳಿದ್ದಾರೆ.
ಇನ್ನು ಮಾತನಾಡಿದ ಅವರು, “ಪ್ರತಿಭಟನೆಗೆ ಹೋಗುತ್ತಿರುವ ಮಾಹಿತಿ ಇದ್ದರೂ, ಸ್ಥಳದ ಬಗ್ಗೆ ಗೊಂದಲ ಉಂಟಾಯಿತು. ಕಾರಿನಿಂದ ಇಳಿದ ನಂತರವೇ ಅದು ಕಾಂಗ್ರೆಸ್ ಕಚೇರಿ ಎಂದು ಗೊತ್ತಾಯಿತು. ಕಾಂಗ್ರೆಸ್ ಕಾರ್ಯಕರ್ತರು ಗುಂಡಾಗಳಂತೆ ವರ್ತಿಸಿ ನನ್ನ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ್ದಾರೆ,” ಎಂದು ಆರೋಪಿಸಿದರು.
