ತುಮಕೂರಿನಲ್ಲಿ ಹಣದ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಕೊಂದ ಅಣ್ಣ!

BeFunky collage (76)

ತುಮಕೂರು: ಮದ್ಯಪಾನದ ಚಟ ಮತ್ತು ಕ್ಷಣಿಕ ಕೋಪ ಏನೆಲ್ಲಾ ಅನಾಹುತ ಮಾಡುತ್ತದೆ ಎಂಬುದಕ್ಕೆ ತುಮಕೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಿಲ್ಲೆಯ ಮಧುಗಿರಿ ತಾಲೂಕಿನ ನಿಟ್ಟರಹಳ್ಳಿಯಲ್ಲಿ ಕುಡಿದ ಮತ್ತಿನಲ್ಲಿ ಅಣ್ಣ-ತಮ್ಮಂದಿರ ನಡುವೆ ನಡೆದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಹಣದ ವಿಚಾರವಾಗಿ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿ, ಅಣ್ಣನೇ ತನ್ನ ಸ್ವಂತ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ.

ಅಜ್ಜಿಯ ಆಶ್ರಯದಲ್ಲಿದ್ದ ಅನಾಥರು :

ಮೃತಪಟ್ಟ ಯುವಕನನ್ನು ಗಂಗರಾಜು ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿ ಅಣ್ಣ ನರಸಿಂಹಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಗೆ ತಂದೆ-ತಾಯಿ ಇಲ್ಲದ ಕಾರಣ ಅಜ್ಜಿಯ ಆಶ್ರಯದಲ್ಲೇ ಬೆಳೆದಿದ್ದರು. ಅಣ್ಣಂದಿರೆಲ್ಲ ಮದುವೆಯಾಗಿ ಬೇರೆ ವಾಸವಿದ್ದರೆ, ಅವಿವಾಹಿತನಾಗಿದ್ದ ಗಂಗರಾಜು ಅಜ್ಜಿಯ ಜೊತೆಗಿದ್ದು ಆಕೆಯನ್ನು ನೋಡಿಕೊಳ್ಳುತ್ತಿದ್ದ. ಆದರೆ ಕುಡಿತದ ಚಟ ಮಾತ್ರ ಇವರನ್ನು ಬಿಟ್ಟಿರಲಿಲ್ಲ.

ಹಣದ ವಿಚಾರಕ್ಕೆ ಶುರುವಾದ ಕಿರಿಕ್ :

ನಿನ್ನೆ ಸಂಜೆ ಗಂಗರಾಜು ಮದ್ಯ ಸೇವಿಸಿ ಮನೆಗೆ ಬಂದಿದ್ದ. ಇದೇ ವೇಳೆ ಅಣ್ಣ ನರಸಿಂಹಮೂರ್ತಿ ಕೂಡ ಕುಡಿದ ಮತ್ತಿನಲ್ಲಿ ಅಲ್ಲಿಗೆ ಬಂದಿದ್ದಾನೆ. ಹಣದ ವಿಚಾರವಾಗಿ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ. ಜಗಳದ ನಡುವೆ ಗಂಗರಾಜು ಕೆಳಗೆ ಬಿದ್ದಾಗ, ಆಕ್ರೋಶಗೊಂಡ ನರಸಿಂಹಮೂರ್ತಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ಆತನ ತಲೆಯ ಮೇಲೆ ಹಾಕಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಗಂಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪೊಲೀಸ್ ತನಿಖೆ ಚುರುಕು :

ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಬ್ಬ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಮೇಲ್ನೋಟಕ್ಕೆ ಇದು ಹಣದ ವಿಚಾರಕ್ಕೆ ನಡೆದ ಕೊಲೆ ಎಂದು ಕಂಡುಬಂದರೂ, ಇದರ ಹಿಂದೆ ಹಳೆಯ ದ್ವೇಷ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

Exit mobile version