ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್ ಶಾಕ್, ತೆರೆದ ಬಸ್‌ನಲ್ಲಿ RCB ಪರೇಡ್ ಇಲ್ಲ: ಜಿ ಪರಮೇಶ್ವರ್ ಸ್ಪಷ್ಟನೆ

ತೆರೆದ ಬಸ್ ಮೆರವಣಿಗೆಗೆ ಕತ್ತರಿ ಹಾಕಿದ ರಾಜ್ಯ ಸರ್ಕಾರ!

Befunky collage 2025 06 04t132811.300

ಬೆಂಗಳೂರು: ಐಪಿಎಲ್ 2025ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಚೊಚ್ಚಲ ಟ್ರೋಫಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಅಭಿಮಾನಿಗಳು ತೆರೆದ ಬಸ್‌ನಲ್ಲಿ ವಿಜಯೋತ್ಸವ ಯಾತ್ರೆಯನ್ನು ಎದುರುನೋಡುತ್ತಿದ್ದರು. ಆದರೆ, ಗೃಹ ಸಚಿವ ಜಿ. ಪರಮೇಶ್ವರ್ ಅವರು ಭದ್ರತೆ ಮತ್ತು ಟ್ರಾಫಿಕ್ ನಿರ್ವಹಣೆಯ ಕಾರಣಗಳಿಂದ ಈ ಯಾತ್ರೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.

ಗೃಹ ಸಚಿವರು, “ಆರ್‌ಸಿಬಿ ಆಟಗಾರರು ತೆರೆದ ಬಸ್‌ನಲ್ಲಿ ವಿಜಯೋತ್ಸವ ಯಾತ್ರೆ ನಡೆಸುವುದಿಲ್ಲ. ಅವರು HAL ವಿಮಾನ ನಿಲ್ದಾಣಕ್ಕೆ ಒಂದು ಬಸ್‌ನಲ್ಲಿ ಆಗಮಿಸಿ, ಅದೇ ಬಸ್‌ನಲ್ಲಿ ತಮ್ಮ ತಾಣಕ್ಕೆ ಮರಳಲಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ. ಆರ್‌ಸಿಬಿ ತಂಡವು ಇಂದು ಮಧ್ಯಾಹ್ನ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗ್ರಾಂಡ್ ಸ್ಟೆಪ್ಸ್‌ನಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ತಂಡದ ಪರವಾಗಿ ಒಬ್ಬರು ಮಾತನಾಡಲಿದ್ದಾರೆ.

ADVERTISEMENT
ADVERTISEMENT

ತೆರೆದ ಬಸ್‌ ಯಾತ್ರೆ ರದ್ದಾದರೂ, ಸಂಜೆ 6:00 ಗಂಟೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಕೃನಾಲ್ ಪಾಂಡ್ಯ ಸೇರಿದಂತೆ ಆರ್‌ಸಿಬಿ ಆಟಗಾರರು ಭಾಗವಹಿಸಿ, ತಮ್ಮ 18 ವರ್ಷಗಳ ಕಾಯುವಿಕೆಯ ಫಲವಾದ ಟ್ರೋಫಿಯ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ತೀರ್ಮಾನವು ಕೆಲವು ಅಭಿಮಾನಿಗಳಿಗೆ ನಿರಾಸೆ ತಂದಿದ್ದರೂ, ವಿಧಾನಸೌಧದ ಸನ್ಮಾನ ಮತ್ತು ಸ್ಟೇಡಿಯಂನ ಕಾರ್ಯಕ್ರಮದ ಮೂಲಕ ಆರ್‌ಸಿಬಿ ತನ್ನ ಗೆಲುವನ್ನು ರಾಜ್ಯದ ಜನತೆಯೊಂದಿಗೆ ಆಚರಿಸಲಿದೆ.

Exit mobile version