ಮೈಸೂರು: ರಾಮನಗರ ಹೆಸರು ಬದಲಾವಣೆಗೆ ಸಹಕಾರವಿಲ್ಲದಿರುವ ಬಗ್ಗೆ ಮಾತನಾಡುತ್ತಾ, “ರಾಮನಗರದ ಹೆಸರನ್ನು ಬದಲಾಯಿಸುವುದು ನನಗೆ ಗೊತ್ತು. ನಾನು ಈಗಾಗಲೇ ಅದನ್ನು ಮಾಡಿದ್ದೇನೆ. ಇದು ಬೆಂಗಳೂರು ದಕ್ಷಿಣವೇ ಆಗಿದೆ. ಯಾರೂ ಹೊರಗಿನವರು ಬಂದು ಹೆಸರು ಕೊಡಿ ಎಂದು ಕೇಳುತ್ತಿಲ್ಲ. ಇದು ನಮ್ಮ ಹಕ್ಕು. ನಮ್ಮ ತಂದೆ-ತಾಯಿ, ಹುಟ್ಟು ಹೆಸರನ್ನು ಬದಲಾಯಿಸಿಕೊಳ್ಳುವುದು ಸಾಧ್ಯವೇ?” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಶ್ನಿಸಿದರು.
ಮೈಸೂರಿನಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಶಿವಕುಮಾರ್ ಅವರನ್ನು ಕಂಡರೆ ಅಸೂಯೆ ಎಂದು ಕೇಳಿದಾಗ, “ಏನೇ ಯೋಚಿಸಲಿ, ನನ್ನನ್ನು ಕಂಡರೆ ಅವರಿಗೆ ಪ್ರೀತಿಯೇ ಹೆಚ್ಚು. ದೇವೇಗೌಡರ ಬಳಿ ನಾನು ನಮ್ರತೆಯಿಂದ ಕೇಳಿಕೊಳ್ಳುತ್ತೇನೆ. ಬಿಡದಿ ಟೌನ್ಶಿಪ್ ಅನ್ನು ನಿಮ್ಮ ಮಗನೇ ನಿಮ್ಮ ಕಾಲದಲ್ಲಿ ಮಾಡಿದ್ದು. ನಾವು ನೀವು ಹಾಕಿದ್ದನ್ನು ಮುಂದುವರೆಸುತ್ತಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ವಿನೂತನ ದಸರಾ: ಕಂಬಳ ಸೇರ್ಪಡೆ
“ನಾಡಹಬ್ಬ ದಸರಾವನ್ನು ವಿನೂತನವಾಗಿ ಆಚರಿಸಲು ಚರ್ಚೆ ನಡೆದಿದೆ. ಕೆಲವು ಹಳೆಯ ಪದ್ಧತಿಗಳನ್ನು ಕೈಬಿಟ್ಟು, ಹೊಸ ಪೀಳಿಗೆಯನ್ನು ಸೆಳೆಯುವಂತೆ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಕಂಬಳವು ಕರಾವಳಿ ಭಾಗದ ವಿಶಿಷ್ಟ ಆಚರಣೆಯಾಗಿದ್ದು, ಇದನ್ನು ದಸರಾದಲ್ಲಿ ಸೇರಿಸಲಾಗುವುದು. ಇದಕ್ಕೆ ಸೂಕ್ತ ಸ್ಥಳ ಹುಡುಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು.
ಕಾಶ್ಮೀರ ವಿಷಯದಲ್ಲಿ ಟೀಕೆಯಿಲ್ಲ
ಕಾಶ್ಮೀರದಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಒಪ್ಪಿಕೊಂಡಿರುವ ವಿಷಯವನ್ನು ಕೇಳಿದಾಗ, “ಕಾಂಗ್ರೆಸ್ ಪಕ್ಷ ಈ ಸಂದರ್ಭದಲ್ಲಿ ಯಾರನ್ನೂ ಟೀಕಿಸುವುದಿಲ್ಲ. ಇದು ಕೆಸರು ಎರಚುವ ಸಂದರ್ಭವಲ್ಲ. ಅವರು ಏನೇ ಹೇಳಿಕೆ ಕೊಟ್ಟರೂ, ನಾನು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ ವಿರುದ್ಧವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಏನು ಮಾತನಾಡಿದರೂ ಅದು ಆಹಾರವಾಗುತ್ತದೆ. ಜನರಿಗೆ ಮೊದಲು ಶಾಂತಿ, ನೆಮ್ಮದಿ ಮುಖ್ಯ. ದುಷ್ಕರ್ಮಿಗಳನ್ನು ಮುಗಿಸುತ್ತೇವೆ ಎಂದು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ನಾವು ಅದನ್ನು ಬೆಂಬಲಿಸುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.