ವ್ಯಾಪಾರ ವಹಿವಾಟಿನ ಮೇಲೆ ಭಾರೀ ಕುಸಿತ
ಮಳೆಯಿಂದ ವ್ಯಾಪಾರ ವಹಿವಾಟು ಕೂಡಾ ಭಾರೀ ಕುಸಿತ ಕಂಡಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆಯಂತಹ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ವ್ಯಾಪಾರ ಥಂಡಾ ಹಿಡಿದಿದೆ. ಹೂವು, ಹಣ್ಣು, ತರಕಾರಿ ಖರೀದಿಗೆ ಬರುತ್ತಿದ್ದ ಗ್ರಾಹಕರು ಮಳೆಯ ಭಯದಿಂದ ಮನೆಯಿಂದ ಹೊರಬರುತ್ತಿಲ್ಲ. ಇದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಚಿಕ್ಕಪೇಟೆಯಂತಹ ಬೆಂಗಳೂರಿನ ವಾಣಿಜ್ಯ ಕೇಂದ್ರದಲ್ಲಿಯೂ ವ್ಯಾಪಾರ ಕುಸಿತಗೊಂಡಿದೆ. “ಕಳೆದ ಎರಡು ದಿನಗಳಿಂದ ಮಳೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ವ್ಯಾಪಾರ ಶೇ.50ರಷ್ಟು ಕುಸಿದಿದೆ,” ಎಂದು ಚಿಕ್ಕಪೇಟೆ ವರ್ತಕರ ಸಂಘಟನೆಯ ಸಜ್ಜನ್ ರಾವ್ ತಿಳಿಸಿದ್ದಾರೆ.
ಆಟೋ ಚಾಲಕರಿಗೆ ಸಂಕಷ್ಟ
ಬೆಂಗಳೂರಿನ ಆಟೋ ಚಾಲಕರಿಗೂ ಮಳೆ ದೊಡ್ಡ ಸವಾಲು ಒಡ್ಡಿದೆ. ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಆಟೋ ಓಡಿಸುವುದು ಕಷ್ಟವಾಗಿದೆ. ಜೊತೆಗೆ, ಜನರು ಮನೆಯಿಂದ ಹೊರಬರುತ್ತಿಲ್ಲದಿರುವುದರಿಂದ ಬುಕ್ಕಿಂಗ್ ಪ್ರಮಾಣವೂ ಕಡಿಮೆಯಾಗಿದೆ. “ಮಳೆಯಿಂದ ರಸ್ತೆಗಳು ಕೆಟ್ಟಿವೆ, ಗ್ರಾಹಕರೂ ಇಲ್ಲ. ಆದಾಯ ಗಣನೀಯವಾಗಿ ಕಡಿಮೆಯಾಗಿದೆ,” ಎಂದು ಆಟೋ ಚಾಲಕರು ಹೇಳಿದ್ದಾರೆ.