ಬೆಂಗಳೂರು ರಣ ಮಳೆಗೆ ಜನಜೀವನ ತತ್ತರ, ವ್ಯಾಪಾರಿಗಳಿಗೆ ಸಂಕಷ್ಟ!

Web 2025 05 21t072734.814
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೂರ್ವ ಮುಂಗಾರಿನ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಣ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಬೀದಿಪಾಲಾಗಿದೆ. ಮಂಗಳವಾರ ಒಂದೇ ದಿನ ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಕಾಂಪೌಂಡ್ ಗೋಡೆ ಕುಸಿತದಿಂದ ಶಶಿಕಲಾ ಎಂಬ ಮಹಿಳೆ ಸಾವನ್ನಪ್ಪಿದರೆ, ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯಲ್ಲಿ ಮಳೆ ನೀರು ತೆರವುಗೊಳಿಸುವಾಗ ಇಬ್ಬರಿಗೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆ.
ವ್ಯಾಪಾರ ವಹಿವಾಟಿನ ಮೇಲೆ ಭಾರೀ ಕುಸಿತ

ಮಳೆಯಿಂದ ವ್ಯಾಪಾರ ವಹಿವಾಟು ಕೂಡಾ ಭಾರೀ ಕುಸಿತ ಕಂಡಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆಯಂತಹ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ವ್ಯಾಪಾರ ಥಂಡಾ ಹಿಡಿದಿದೆ. ಹೂವು, ಹಣ್ಣು, ತರಕಾರಿ ಖರೀದಿಗೆ ಬರುತ್ತಿದ್ದ ಗ್ರಾಹಕರು ಮಳೆಯ ಭಯದಿಂದ ಮನೆಯಿಂದ ಹೊರಬರುತ್ತಿಲ್ಲ. ಇದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಚಿಕ್ಕಪೇಟೆಯಂತಹ ಬೆಂಗಳೂರಿನ ವಾಣಿಜ್ಯ ಕೇಂದ್ರದಲ್ಲಿಯೂ ವ್ಯಾಪಾರ ಕುಸಿತಗೊಂಡಿದೆ. “ಕಳೆದ ಎರಡು ದಿನಗಳಿಂದ ಮಳೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ವ್ಯಾಪಾರ ಶೇ.50ರಷ್ಟು ಕುಸಿದಿದೆ,” ಎಂದು ಚಿಕ್ಕಪೇಟೆ ವರ್ತಕರ ಸಂಘಟನೆಯ ಸಜ್ಜನ್ ರಾವ್ ತಿಳಿಸಿದ್ದಾರೆ.

ಆಟೋ ಚಾಲಕರಿಗೆ ಸಂಕಷ್ಟ

ಬೆಂಗಳೂರಿನ ಆಟೋ ಚಾಲಕರಿಗೂ ಮಳೆ ದೊಡ್ಡ ಸವಾಲು ಒಡ್ಡಿದೆ. ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಆಟೋ ಓಡಿಸುವುದು ಕಷ್ಟವಾಗಿದೆ. ಜೊತೆಗೆ, ಜನರು ಮನೆಯಿಂದ ಹೊರಬರುತ್ತಿಲ್ಲದಿರುವುದರಿಂದ ಬುಕ್ಕಿಂಗ್ ಪ್ರಮಾಣವೂ ಕಡಿಮೆಯಾಗಿದೆ. “ಮಳೆಯಿಂದ ರಸ್ತೆಗಳು ಕೆಟ್ಟಿವೆ, ಗ್ರಾಹಕರೂ ಇಲ್ಲ. ಆದಾಯ ಗಣನೀಯವಾಗಿ ಕಡಿಮೆಯಾಗಿದೆ,” ಎಂದು ಆಟೋ ಚಾಲಕರು ಹೇಳಿದ್ದಾರೆ.

ಮನೆಗಳಿಗೆ, ಅಂಗಡಿಗಳಿಗೆ ಮತ್ತು ಮಾರುಕಟ್ಟೆಗಳಿಗೆ ನೀರು ನುಗ್ಗಿರುವುದರಿಂದ ಒಂದೆಡೆ ಅವಾಂತರವಾದರೆ, ವ್ಯಾಪಾರ ವಹಿವಾಟಿನ ಕೊರತೆಯಿಂದ ಮತ್ತೊಂದೆಡೆ ಸಂಕಷ್ಟ ಶುರುವಾಗಿದೆ. ಬೆಂಗಳೂರಿನ ರಾಜಧಾನಿಯಲ್ಲಿ ಪೂರ್ವ ಮುಂಗಾರಿನ ಮಳೆ ಜನಜೀವನ ಮತ್ತು ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ.
Exit mobile version