ರಾಯಚೂರು ಜಿಲ್ಲೆಯ ಸಿಂಧನೂರು ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ನಾಯಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ಪ್ರಿಯಾಂಕಾ, ಸರ್ಕಾರಿ ಹುದ್ದೆಯ ಆಯ್ಕೆಗಾಗಿ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅವರು, ಸಿಂಧನೂರು ನಗರಸಭೆಯ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ರಾಯಚೂರು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.
ಸಿಂಧನೂರು ನಗರಸಭೆಯ 32 ಸದಸ್ಯ ಬಲದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಬಂದಿತ್ತು. ಕಾಂಗ್ರೆಸ್ನ 20 ಸದಸ್ಯರ ಬಲವಿದ್ದರೂ ಎಸ್ಟಿ ಸದಸ್ಯರಿರಲಿಲ್ಲ. ಜೆಡಿಎಸ್ ಸದಸ್ಯೆಯಾಗಿದ್ದ ಪ್ರಿಯಾಂಕಾ ನಾಯಕ್, ಕಾಂಗ್ರೆಸ್ ಬೆಂಬಲದೊಂದಿಗೆ ಎರಡು ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಬಾರಿ ಕಾಂಗ್ರೆಸ್ ನಾಯಕರು ಕೋರ್ಟ್ಗೆ ಹೋಗಿದ್ದರೂ ಫಲಕೊಡದೇ ಇದ್ದಾಗ, ಪ್ರಿಯಾಂಕಾರನ್ನು ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ, ಎರಡು ತಿಂಗಳ ಅಧಿಕಾರಾವಧಿಯ ಬಳಿಕ, ಸರ್ಕಾರಿ ಹುದ್ದೆಯ ಆಯ್ಕೆಯಿಂದ ಪ್ರಿಯಾಂಕಾ ರಾಜೀನಾಮೆ ನೀಡಿದ್ದಾರೆ.
ಸಾಮಾನ್ಯವಾಗಿ ಸರ್ಕಾರಿ ಹುದ್ದೆಯಿಂದ ರಾಜೀನಾಮೆ ನೀಡಿ ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದರೆ, ಪ್ರಿಯಾಂಕಾ ತದ್ವಿರುದ್ಧ ನಿರ್ಧಾರ ಕೈಗೊಂಡಿದ್ದಾರೆ. ರಾಜಕೀಯದ ಅನಿಶ್ಚಿತತೆ ಮತ್ತು ಮತದಾರರ ಒಲವು-ವಿರೋಧದ ಬದಲು, ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಹುದ್ದೆಯನ್ನು ಆಯ್ಕೆ ಮಾಡಿದ್ದಾರೆ. “ರಾಜಕೀಯಕ್ಕಿಂತ ಸರ್ಕಾರಿ ಕೆಲಸವೇ ಉತ್ತಮ,” ಎಂದು ಆಪ್ತರ ಬಳಿ ತಿಳಿಸಿರುವ ಪ್ರಿಯಾಂಕಾ, ತಮ್ಮ ಈ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ಪಡೆದಿದ್ದಾರೆ.
ಸಿಂಧನೂರು ನಗರಸಭೆಯ ಅಧಿಕಾರಾವಧಿ ಅಕ್ಟೋಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ, ಪ್ರಿಯಾಂಕಾ ರಾಜೀನಾಮೆಯಿಂದ ಮುಂದಿನ ಅಧ್ಯಕ್ಷರ ಆಯ್ಕೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಎಸ್ಟಿ ಮಹಿಳಾ ಸದಸ್ಯರಿಲ್ಲ. ಜೆಡಿಎಸ್ನಿಂದ ಗೆದ್ದಿದ್ದ ಏಕೈಕ ಎಸ್ಟಿ ಸದಸ್ಯೆ ಪ್ರಿಯಾಂಕಾ ರಾಜೀನಾಮೆ ನೀಡಿರುವುದರಿಂದ, ಮೀಸಲಾತಿ ಬದಲಾವಣೆಗೆ ಸರ್ಕಾರದ ಗಮನಕ್ಕೆ ತರಬೇಕಿದೆ. ಈ ವಿಷಯವು ಸಿಂಧನೂರಿನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.