ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಯಾಗಲು ಮುಂದಾಗಿದ್ದ ಯುವಕನ ಮದುವೆಯನ್ನು ಏಳು ತಿಂಗಳ ಗರ್ಭಿಣಿ ಪತ್ನಿ ಮಂಟಪಕ್ಕೆ ಬಂದು ತಡೆದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಬಸವ ಭವನದಲ್ಲಿ ಭಾನುವಾರ ಬೆಳಗ್ಗೆ ನಡೆಯಬೇಕಿದ್ದ ಮದುವೆ ಕಾರ್ಯಕ್ರಮವು ಗರ್ಭಿಣಿ ಪತ್ನಿಯ ಆಗಮನದಿಂದ ಹೈಡ್ರಾಮಾವಾಗಿ ಪರಿವರ್ತನೆಗೊಂಡಿತು.
ಘಟನೆ ವಿವರ :
ಕೇರಳ ಮೂಲದ ಯುವತಿಯನ್ನು ಪ್ರೀತಿಸಿ ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಕುಮಾರ್ ಎಂಬ ಯುವಕ, ಈಗ ತನ್ನ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿರುವ ಸ್ಥಿತಿಯಲ್ಲೂ ಮನೆಯವರ ಒತ್ತಡಕ್ಕೆ ಮಣಿದು ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾನೆ ಎನ್ನಲಾಗಿದೆ.
ತಾನು ಎರಡನೇ ಮದುವೆಯಾಗುತ್ತಿರುವುದನ್ನು ಕುಮಾರ್ ತಡರಾತ್ರಿ ತನ್ನ ಮೊದಲ ಪತ್ನಿಗೆ ತಿಳಿಸಿದ್ದ. ಮನೆಯವರು ಬಲವಂತವಾಗಿ ಮದುವೆ ಮಾಡಿಸುತ್ತಿರುವುದಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ಕಂಗಾಲಾದ ಗರ್ಭಿಣಿ ಪತ್ನಿ ರಾತ್ರಿ ಒಳಗೆ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಧಾವಿಸಿ ಬಂದಿದ್ದಾಳೆ.
ಮದುವೆ ಶಾಸ್ತ್ರಗಳು ಆರಂಭವಾಗುವ ಮುನ್ನವೇ ಗರ್ಭಿಣಿ ಪತ್ನಿ ಬಸವ ಭವನಕ್ಕೆ ಆಗಮಿಸಿ, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ತನ್ನ ಮದುವೆ ದಾಖಲೆಗಳು ಮತ್ತು ಗರ್ಭಿಣಿಯಾಗಿರುವುದನ್ನು ತಿಳಿಸಿ ನ್ಯಾಯ ಕೋರಿದ್ದಾಳೆ.
ಸ್ಥಳದಲ್ಲಿ ಗೊಂದಲ ಉಂಟಾಗುತ್ತಿದ್ದಂತೆ ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ, ವರ ಕುಮಾರ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳೆಯ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ಎರಡನೇ ಮದುವೆಗೆ ಸಿದ್ಧರಾಗಿದ್ದ ವಧುವಿನ ಕುಟುಂಬಸ್ಥರು ಈ ಘಟನೆಯಿಂದ ಕಂಗಾಲಾಗಿದ್ದಾರೆ. ಪೊಲೀಸರು ಕುಮಾರ್ ಅವರ ಮೊದಲ ಮದುವೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮೊದಲ ಪತ್ನಿ ಮತ್ತು ಗರ್ಭಿಣಿಯ ಹಕ್ಕುಗಳನ್ನು ರಕ್ಷಿಸುವಲ್ಲಿ ಪೊಲೀಸ್ ಕ್ರಮವು ಪರಿಣಾಮಕಾರಿಯಾಗಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.





