ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: ಚಾಕು, ಗಾಂಜಾ ಸೇರಿ ನಿಷೇಧಿತ ವಸ್ತು ಪತ್ತೆ

ಸಿಸಿಬಿ ದಾಳಿಯಿಂದ ಬಯಲಾದ ಭದ್ರತಾ ಲೋಪ

Untitled design (69)

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಬಳಕೆಯ ಬಗ್ಗೆ ಮಾಹಿತಿ ಪಡೆದ ಕೇಂದ್ರೀಯ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಸೋಮವಾರ (ಜೂನ್ 16) ದಿಢೀರ್ ದಾಳಿ ನಡೆಸಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆದ ಈ ಶೋಧ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳ ತಂಡವು ಸಜಾಬಂಧಿ ಮತ್ತು ವಿಐಪಿ ಬ್ಯಾರಕ್‌ಗಳನ್ನು ತಪಾಸಣೆ ಮಾಡಿದೆ.

ದಾಳಿಯಲ್ಲಿ ವಶಪಡಿಸಿಕೊಂಡ ವಸ್ತುಗಳಾವುವು?

ಸಿಸಿಬಿ ದಾಳಿಯ ವೇಳೆ ಜೈಲಿನೊಳಗೆ ಅಕ್ರಮವಾಗಿ ಬಳಕೆಯಾಗುತ್ತಿದ್ದ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್‌ಗಳು, ಗಾಂಜಾ, ಗಾಂಜಾ ಚಿಲ್ಲಂ, ಮೊಬೈಲ್ ಚಾರ್ಜರ್‌ಗಳು, ಕತ್ತರಿ, ಚಾಕುಗಳು, ಕಬ್ಬಿಣದ ರಾಡ್‌ಗಳು, ಗುಟ್ಕಾ, ತಂಬಾಕು ಪ್ಯಾಕೆಟ್‌ಗಳು, ಸುಣ್ಣದ ಡಬ್ಬಿ, ನಗದು ಹಣ ಮತ್ತು ಡೈರಿಗಳು ಸೇರಿವೆ.

ನಿಷೇಧಿತ ವಸ್ತುಗಳ ಬಳಕೆ ಮತ್ತು ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ವಸ್ತುಗಳು ಜೈಲಿಗೆ ಹೇಗೆ ಪ್ರವೇಶಿಸಿದವು ಮತ್ತು ಯಾರು ಇದಕ್ಕೆ ಸಹಕಾರ ನೀಡಿದ್ದಾರೆ ಎಂಬುದರ ಕುರಿತು ತನಿಖೆಯನ್ನು ತೀವ್ರಗೊಳಿಸಲಾಗಿದೆ. ಜೈಲು ಅಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಜೈಲಿನ ಭದ್ರತಾ ಕೊರತೆ:

ಪರಪ್ಪನ ಅಗ್ರಹಾರ ಜೈಲು, ಕರ್ನಾಟಕದ ಅತಿದೊಡ್ಡ ಕಾರಾಗೃಹವಾಗಿದ್ದು, 4,000ಕ್ಕೂ ಹೆಚ್ಚು ಕೈದಿಗಳನ್ನು ಹೊಂದಿದೆ. ಆದರೆ, ಈ ಜೈಲಿನಲ್ಲಿ ಗಾಂಜಾ, ಆಯುಧಗಳು ಮತ್ತು ಮೊಬೈಲ್ ಫೋನ್‌ಗಳಂತಹ ನಿಷೇಧಿತ ವಸ್ತುಗಳು ಸುಲಭವಾಗಿ ದೊರಕುತ್ತಿರುವುದು ಭದ್ರತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪವನ್ನು ಸೂಚಿಸುತ್ತದೆ.

Exit mobile version