2015ರ ಡಿಸೆಂಬರ್ನಲ್ಲಿ ಮಂಗಳೂರಿನ ಬಜಪೆಯ ಎಕ್ಕಾರು ಸಮೀಪ ಸುಟ್ಟ ಸ್ಥಿತಿಯಲ್ಲಿ ಉಷಾ ಶೆಟ್ಟಿಯ ಶವ ಪತ್ತೆಯಾಗಿತ್ತು. ಈ ಘಟನೆಯು ರಾಜ್ಯದಾದ್ಯಂತ ಗಮನ ಸೆಳೆದಿದ್ದರೂ, ಒಂದು ದಶಕ ಕಳೆದರೂ ಈ ಸಾವಿನ ಹಿಂದಿನ ಸತ್ಯ ಇನ್ನೂ ಬಯಲಾಗಿಲ್ಲ. ಉಷಾ ಶೆಟ್ಟಿಯ ಸಾವು ಕೊಲೆಯೇ, ಆತ್ಮಹತ್ಯೆಯೇ ಅಥವಾ ಇನ್ನಾವುದೇ ಕಾರಣವೋ? ಇನ್ನೂ ತಿಳಿದು ಬಂದಿಲ್ಲ ಈ ಪ್ರಶ್ನೆಗಳಿಗೆ ಉತ್ತರ ಸಿಗದೆ, ಈ ಪ್ರಕರಣ ಇಂದಿಗೂ ರಹಸ್ಯವಾಗಿಯೇ ಉಳಿದಿದೆ.
2015, ಡಿಸೆಂಬರ್ನಲ್ಲಿ ಆಗಿದ್ದ ಘಟನೆಯ ವಿವರ:
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೋರ್ವಳ ಶವ ಸುಟ್ಟ ರೀತಿಯಲ್ಲಿ ಮಂಗಳೂರಿನ ಬಜಪೆಯ ಎಕ್ಕಾರು ಸಮೀಪ ಪತ್ತೆಯಾಗಿದೆ. ಈ ಪ್ರಕರಣ ಸುತ್ತ ಹಲವಾರು ಸಂಶಯಗಳು ಹುಟ್ಟಿಕೊಂಡಿದ್ದು, ಸರಿಯಾದ ಕಾರಣ ತಿಳಿದು ಬಂದಿಲ್ಲ. ಮೃತ ಮಹಿಳೆ ಉಷಾ ಶೆಟ್ಟಿ ಮಂಗಳೂರು ಜಪ್ಪಿನ ಮೊಗರು ನಿವಾಸಿಯಾಗಿದ್ದು, ಈಕೆ ಮಂಗಳೂರಿನ ಮಂಡೊವಿ ಶೋರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಉಷಾ ಶೆಟ್ಟಿಯವರು ಡಿಸೆಂಬರ್ 17ರ ಗುರುವಾರ ಸುಮಾರು 3ಗಂಟೆಗೆ ಮಧ್ಯಾಹ್ನ ಕಟೀಲು ಕಡೆಯಿಂದ ಬಂದು ಎಕ್ಕಾರಿನ ಅಂಗಡಿಯೊಂದರಲ್ಲಿ ಚಕ್ಕುಲಿ ಬೆಲೆ ಕೇಳಿ ವಾಪಾಸ್ ಹೋಗಿದ್ದಾರೆ. ಎಷ್ಟೇ ಹೊತ್ತಾದರೂ ಮನೆಗೆ ಬಾರದ ಪತ್ನಿಯ ಬಗ್ಗೆ ಹೆದರಿದ ಪತಿ ಅಶ್ವಿನ್ ಶೆಟ್ಟಿಯವರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಟವರ್ ಲೊಕೇಶನ್ ಎಕ್ಕಾರಿನಲ್ಲಿ ಸಾರ್ವಜನಿಕರು ಮತ್ತು ಎಕ್ಕಾರಿನ ಸ್ಥಳೀಯರ ಜೊತೆ ಸೇರಿ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ. ಗುರುವಾರ ಮಧ್ಯಾಹ್ನ ಹುಡುಕಿದರೂ ಮಹಿಳೆ ಬಗ್ಗೆ ಮಾಹಿತಿ ದೊರಕದ ಕಾರಣ ಪತಿ ಅಶ್ವಿನ್ ಶೆಟ್ಟಿ ವಾಪಾಸ್ ಮನೆಗೆ ತೆರಳಿದ್ದರು. ಆದರೆ ಉಷಾಳ ಶವ ಶುಕ್ರವಾರ ಸಂಜೆ ಎಕ್ಕಾರು ಕೊಡಮಣಿತ್ತಾಯ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಶವದ ಹತ್ತಿರ ಪೆಟ್ರೋಲ್ ಬಾಟಲ್, ಬ್ಯಾಗ್, ಮದ್ದಿನ ಚೀಟಿ ಸಿಕ್ಕಿದೆ. ಈ ಸಂಬಂಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
