ಬೆಂಗಳೂರು: ಮೆಟಾ ವೇದಿಕೆಗಳಲ್ಲಿ ಕನ್ನಡ ಸ್ವಯಂ ಅನುವಾದದಲ್ಲಿ ಗಂಭೀರ ದೋಷಗಳಿಂದಾಗಿ ವಿಷಯದ ನೈಜ ಅರ್ಥವೇ ವಿರೂಪಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಫೇಸ್ಬುಕ್ನ ಮಾತೃ ಸಂಸ್ಥೆಯಾದ ಮೆಟಾ ಕ್ಷಮೆಯಾಚಿಸಿದೆ. “ಅನುವಾದದ ದೋಷಕ್ಕೆ ಕಾರಣವಾದ ಅಂಶಗಳನ್ನು ಸರಿಪಡಿಸಿದ್ದೇವೆ ಮತ್ತು ಈ ಘಟನೆಗಾಗಿ ಕ್ಷಮೆಯಾಚಿಸುತ್ತೇವೆ,” ಎಂದು ಮೆಟಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಮೆಟಾದ ಕನ್ನಡ ಸ್ವಯಂ ಅನುವಾದದ ದೋಷಗಳು ಸತ್ಯಾಂಶಗಳನ್ನು ವಿರೂಪಗೊಳಿಸುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. “ಕನ್ನಡ ವಿಷಯಗಳ ತಪ್ಪಾದ ಅನುವಾದವು ಬಳಕೆದಾರರಲ್ಲಿ ತಪ್ಪುಗ್ರಹಿಕೆಗೆ ಕಾರಣವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ,” ಎಂದು ಅವರು ಎಚ್ಚರಿಸಿದ್ದರು. ಈ ಸಂಬಂಧ ಸಿಎಂ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಮೆಟಾಗೆ ಔಪಚಾರಿಕ ಪತ್ರ ಬರೆದು, ತಕ್ಷಣವೇ ದೋಷವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದರು.
ಇತ್ತೀಚೆಗೆ ನಿಧನರಾದ ಹಿರಿಯ ನಟಿ ಮತ್ತು ಬಹುಭಾಷಾ ತಾರೆ ಬಿ. ಸರೋಜಾದೇವಿ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪನಮನ ಸಲ್ಲಿಸಿದ್ದ ವಿಷಯವನ್ನು ಮೆಟಾದ ಸ್ವಯಂ ಅನುವಾದ ವ್ಯವಸ್ಥೆ ಇಂಗ್ಲಿಷ್ನಿಂದ ಕನ್ನಡಕ್ಕೆ ತಪ್ಪಾಗಿ ಅನುವಾದಿಸಿತ್ತು. ಈ ಘಟನೆಯಿಂದ ಕನ್ನಡಿಗರಲ್ಲಿ ಆಕ್ರೋಶ ಮೂಡಿತ್ತು, ಮತ್ತು ಸಿಎಂ ಅವರ ಆಕ್ಷೇಪದ ನಂತರ ಮೆಟಾ ಕ್ಷಮೆಯಾಚಿಸಿ, ಅನುವಾದ ವ್ಯವಸ್ಥೆಯನ್ನು ಸರಿಪಡಿಸಿದೆ ಎಂದು ತಿಳಿಸಿದೆ.
ಮೆಟಾದ ಕ್ರಮ
ಮೆಟಾ ತನ್ನ ಅನುವಾದ ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ, ಸರಿಪಡಿಸಿರುವುದಾಗಿ ತಿಳಿಸಿದೆ. ಕನ್ನಡ ಭಾಷೆಯ ಸ್ವಯಂ ಅನುವಾದದಲ್ಲಿ ಗುಣಮಟ್ಟವನ್ನು ಸುಧಾರಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದೆ. ಈ ಘಟನೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿರುವುದಕ್ಕೆ ಕ್ಷಮೆಯಾಚಿಸಿರುವ ಮೆಟಾ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದೆ.





