ಪಹಲ್ಗಾಮ್ ಉಗ್ರ ದಾಳಿಯ (Pahalgam Terror Attack) ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಭಾರತ ಈಗಾಗಲೇ ಪಾಕ್ಗೆ ತೀವ್ರ ಸಂದೇಶ ನೀಡುವ ನಿಟ್ಟಿನಲ್ಲಿ ಸಿಂಧೂ ನದಿ ನೀರಿನ ಒಪ್ಪಂದವನ್ನು ಅಮಾನತು ಮಾಡಿದಂತೆಯೇ, ಕೋಲಾರದ ರೈತರು ಪಾಕಿಸ್ತಾನಕ್ಕೆ ಟೊಮ್ಯಾಟೊ ರವಾನೆ ನಿಲ್ಲಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರದ ರೈತರು ಪ್ರತಿದಿನ 800 ರಿಂದ 900 ಟನ್ ಟೊಮ್ಯಾಟೊಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದರು. ಆದರೆ, ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರ ದಾಳಿಯ ನಂತರ, “ನಷ್ಟವಾದರೂ ಪರವಾಗಿಲ್ಲ, ಆದರೆ ಪಾಕಿಸ್ತಾನಕ್ಕೆ ಒಂದೂ ಟೊಮ್ಯಾಟೊ ಕೊಡೋಲ್ಲ” ಎಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ರೈತರ ಪ್ರತಿಕ್ರಿಯೆ:
“ಇದುವರೆಗೆ ಮಾನವೀಯತೆ ದೃಷ್ಟಿಯಿಂದ ಟೊಮ್ಯಾಟೊ ರವಾನೆ ಮಾಡುತ್ತಿದ್ದೆವು. ಆದರೆ ಇಂತಹ ಕೃತ್ಯಗಳ ನಂತರ ಸಹನೆ ಸಾಧ್ಯವಿಲ್ಲ” ಎನ್ನುತ್ತಾರೆ ರೈತರು.
“ನಮ್ಮ ಬೆಳೆ ಬೆಲೆ ಕುಸಿದರೂ ಪರವಾಗಿಲ್ಲ. ಆದರೆ ದೇಶದ ಶತ್ರುಗೆ ಬೆಂಬಲವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದಿಂದಾಗಿ ಪಾಕಿಸ್ತಾನಕ್ಕೆ ಇನ್ನೊಂದು ಆರ್ಥಿಕ ಪೆಟ್ಟಾಗಿದ್ದು, ಈ ರೈತರ ದೇಶಭಕ್ತಿ ಭಾರತೀಯರಲ್ಲೇ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ನಿಲುವಿಗೆ ಬೆಂಬಲವಾಗಿ ರೈತರು ತಾವು ದಿಟ್ಟವಾಗಿ ನಿಂತಿದ್ದೇವೆ ಎಂದು ಹೇಳಿದ್ದಾರೆ.
ಕೋಲಾರದ ರೈತರ ಈ ನಿರ್ಧಾರವು ಕೇವಲ ಕೃಷಿ ಉತ್ಪನ್ನ ನಿಲುಗಡೆ ಮಾತ್ರವಲ್ಲ, ದೇಶದ ಭದ್ರತೆಗೆ ದಿಟ್ಟ ಬೆಂಬಲವೂ ಆಗಿದೆ. “ಪಾಕಿಸ್ತಾನಕ್ಕೆ ಒಂದೂ ಟೊಮ್ಯಾಟೊ ನೀಡಲ್ಲ” ಎಂಬ ಈ ಶಪಥ ದೇಶದ ಜನತೆಗೆ ಗರಿಮೆ ತುಂಬಿಸಿದೆ.