ಇಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಗ್ರ್ಯಾಂಡ್ ಸ್ಟೆಪ್ಸ್ನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆಯುಷ್ ಇಲಾಖೆಯಿಂದ ಆಯೋಜಿತವಾದ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಜೊತೆಗೆ ನಟರಾದ ಅನಿರುದ್ಧ್, ಸಾನ್ಯ ಅಯ್ಯರ್, ಮತ್ತು ಶೈನ್ ಶೆಟ್ಟಿ ಸೇರಿದಂತೆ ಸಾವಿರಾರು ಯೋಗಪಟುಗಳು ಭಾಗವಹಿಸಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.
‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಬೆಳಗ್ಗೆ 6 ಗಂಟೆಯಿಂದ 8:30 ರವರೆಗೆ ಯೋಗ ಪ್ರದರ್ಶನ ನಡೆಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜಕೀಯ ನಾಯಕರು, ಗಣ್ಯರು, ಮತ್ತು ವಿವಿಧ ಸಂಸ್ಥೆಗಳ ಯೋಗ ಉತ್ಸಾಹಿಗಳು ಸೇರಿ ಸುಮಾರು 5,000 ಮಂದಿ ಈ ಕಾರ್ಯಕ್ರಮದಲ್ಲಿ ತೊಡಗಿದರು. ಯೋಗವು ದೇಹ ಮತ್ತು ಮನಸ್ಸಿನ ಸಂಯೋಗವಾಗಿದ್ದು, ಜಾತಿ, ಧರ್ಮ, ಮತವನ್ನು ಮೀರಿ ವಿಶ್ವ ಆರೋಗ್ಯ ಮತ್ತು ವಿಶ್ವಕುಟುಂಬದ ಭಾವನೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮವು ಸಾರಿತು.
ರಾಜ್ಯಪಾಲರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡು, “ನಾನು ಚಿಕ್ಕ ವಯಸ್ಸಿನಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗಲೂ ನಿತ್ಯ ಯೋಗ ಮಾಡುತ್ತೇನೆ. ಯೋಗವು ಜೀವನವನ್ನು ಪರಿಪೂರ್ಣಗೊಳಿಸುತ್ತದೆ. ಇದರಿಂದ ಮಾನಸಿಕ ಶಾಂತಿ ಮತ್ತು ದೈಹಿಕ ಆರೋಗ್ಯ ದೊರೆಯುತ್ತದೆ,” ಎಂದು ಹೇಳಿದರು. ಅವರು ಎಲ್ಲರಿಗೂ ನಿತ್ಯ ಯೋಗಾಭ್ಯಾಸವನ್ನು ಜೀವನದ ಭಾಗವಾಗಿಸಿಕೊಂಡು ನಿರೋಗಿಯಾಗಿರುವಂತೆ ಕರೆ ನೀಡಿದರು. “ಎಲ್ಲರೂ ಯೋಗ ಮಾಡೋಣ ಎಂದು ಸಂಕಲ್ಪ ಮಾಡಿ,” ಎಂದು ಸಲಹೆ ನೀಡಿದರು.