ಸಿಲಿಕಾನ್ ಸಿಟಿಯ ಹೆಣ್ಣೂರಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತವೊಂದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಅನಾರೋಗ್ಯದಿಂದಿದ್ದ ತಂದೆಗೆ ಔಷಧಿ ತರಲು ಹೊರಟಿದ್ದ 11 ವರ್ಷದ ಬಾಲಕ ವರುಣ್, ಖಾಸಗಿ ಬಸ್ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾನೆ.
ದುರಂತ ನಡೆದಿದ್ದು ಹೇಗೆ?
ಬೆಳಿಗ್ಗೆ 9 ಗಂಟೆ ಸುಮಾರಿಗೆ ವರುಣ್ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆ ದಾಟಲು ಬ್ಯಾರಿಕೇಡ್ ಬಳಿ ಕಾಯುತ್ತಿದ್ದನು. ಈ ವೇಳೆ ತೀವ್ರ ಬಿಸಿಲಿನ ತಾಪದಿಂದಾಗಿ ಅಥವಾ ಆರೋಗ್ಯ ಸಮಸ್ಯೆಯಿಂದಾಗಿ ಬಾಲಕನಿಗೆ ಇದ್ದಕ್ಕಿದ್ದಂತೆ ತಲೆಸುತ್ತು ಬಂದಿದೆ. ರಸ್ತೆಯಲ್ಲೇ ಆತ ಕುಸಿದು ಬಿದ್ದ ಕ್ಷಣಾರ್ಧದಲ್ಲೇ, ಹಿಂಬದಿಯಿಂದ ಬಂದ ಖಾಸಗಿ ಬಸ್ನ ಚಕ್ರ ಆತನ ಎದೆಯ ಮೇಲೆ ಹರಿದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಎದೆ ಝಲ್ ಎನ್ನಿಸುವಂತಿದ್ದು, ಬಾಲಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಕಾಮಗಾರಿ ಅವ್ಯವಸ್ಥೆಗೆ ಪೋಷಕರ ಆಕ್ರೋಶ :
ಈ ಸಾವು ಕೇವಲ ಆಕಸ್ಮಿಕವಲ್ಲ, ಇದು ಬಿಬಿಎಂಪಿಯ ನಿರ್ಲಕ್ಷ್ಯ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಹೆಣ್ಣೂರು ರಸ್ತೆಯಲ್ಲಿ ನಡೆಯುತ್ತಿರುವ ಆಮೆಗತಿಯ ‘ವೈಟ್ ಟ್ಯಾಪಿಂಗ್’ ಕಾಮಗಾರಿಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗುತ್ತಿದೆ. ಎರಡೂ ಬದಿಯ ವಾಹನಗಳು ಒಂದೇ ಪಥದಲ್ಲಿ ಸಂಚರಿಸುತ್ತಿರುವುದು ಪಾದಚಾರಿಗಳಿಗೆ ಮೃತ್ಯುಪಾಸವಾಗಿ ಪರಿಣಮಿಸಿದೆ. “ವೈಟ್ ಟ್ಯಾಪಿಂಗ್ ಕಾಮಗಾರಿ ವಿಳಂಬವೇ ನನ್ನ ಮಗನನ್ನು ಬಲಿ ಪಡೆದಿದೆ” ಎಂದು ವರುಣ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖೆ ನಡೆಸುತ್ತಿರುವ ಪೊಲೀಸರು:
ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು ಸಂಚಾರಿ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆ. ಅತಿಯಾದ ಬಿಸಿಲಿನಿಂದಾಗಿ ‘ಹೀಟ್ ಸ್ಟ್ರೋಕ್’ (Heat Stroke) ಆಗಿ ಬಾಲಕ ಬಿದ್ದಿರಬಹುದೇ ಅಥವಾ ಬೇರೆನಾದರೂ ಆರೋಗ್ಯ ಸಮಸ್ಯೆ ಇತ್ತೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
