ಹಾಸನದಲ್ಲಿ ಆಘಾತಕಾರಿ ಕೊಲೆ: ತಂದೆಯೇ ಮಗನನ್ನು ಕೊಂದು ಹೂತಿಟ್ಟ ರಹಸ್ಯ

ತಂದೆಯ ಸಾವಿನ ನಂತರ ಬಹಿರಂಗವಾದ ಕೃತ್ಯ

Untitled design 2025 08 13t102753.571

ತಂದೆಯೇ ತನ್ನ ಹಿರಿಯ ಮಗನನ್ನು ಕೊಲೆ ಮಾಡಿ, ಮನೆಯ ಹಿಂಭಾಗದಲ್ಲಿ ಹೂತಿಟ್ಟ ಆಘಾತಕಾರಿ ಘಟನೆ ಈಗ ಬೆಳಕಿಗೆ ಬಂದಿದೆ. 55 ವರ್ಷದ ಗಂಗಾಧರ್ ಎಂಬಾತ ಆಗಸ್ಟ್ 2ರಂದು ಅನಾರೋಗ್ಯದಿಂದ ಮೃತಪಟ್ಟ ನಂತರ, ಈ ರಹಸ್ಯವು ತನಿಖೆಯಲ್ಲಿ ಬಹಿರಂಗವಾಗಿದೆ. ಆಲೂರು ಪೊಲೀಸರು, ವಿಧಿ ವಿಜ್ಞಾನ ತಂಡದ ಸಹಾಯದಿಂದ, ಶವವನ್ನು ಉತ್ಖನನ ಮಾಡಿ ಪತ್ತೆಹಚ್ಚಿದ್ದಾರೆ.

ಗಂಗಾಧರ್‌ಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗ ರಘು ಬೆಂಗಳೂರಿನ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಗಂಗಾಧರ್‌ರವರ ಅಂತ್ಯಕ್ರಿಯೆಗೆ ರಘು ಆಗಮಿಸದಿರುವುದು ಸಂಬಂಧಿಕರಲ್ಲಿ ಅನುಮಾನವನ್ನು ಹುಟ್ಟುಹಾಕಿತು. ಕಿರಿಯ ಮಗ ರೂಪೇಶ್, ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ನೀಡಿದಾಗ, ಸಂಬಂಧಿಕರು ಪೊಲೀಸರಿಗೆ ದೂರು ನೀಡಿದರು. ತನಿಖೆಯಲ್ಲಿ, ರಘುವನ್ನು ಎರಡು ವರ್ಷಗಳ ಹಿಂದೆ ಗಂಗಾಧರ್ ಕೊಲೆ ಮಾಡಿ, ಮನೆಯ ಹಿಂಭಾಗದ ಇಂಗುಗುಂಡಿಯಲ್ಲಿ ಹೂತಿಟ್ಟಿದ್ದ ಭಯಾನಕ ಸತ್ಯ ಬಯಲಾಯಿತು.

ಗಂಗಾಧರ್ ಕುಟುಂಬವು ಆರ್ಥಿಕವಾಗಿ ಸದೃಢವಾಗಿತ್ತು. 5-6 ಎಕರೆ ಫಲವತ್ತಾದ ಜಮೀನು, ಮನೆಯ ಪಕ್ಕದಲ್ಲಿ ಅಂಗಡಿ ಸೇರಿದಂತೆ ಸಾಕಷ್ಟು ಆಸ್ತಿಯನ್ನು ಹೊಂದಿದ್ದರು. ರಘು, ಮದುವೆಯಾದ ನಂತರ ಹೆಂಡತಿಯೊಂದಿಗೆ ವಿಚ್ಛೇದನ ಪಡೆದು, ಅನಾರೋಗ್ಯದಿಂದ ಊರಿಗೆ ಮರಳಿದ್ದ. ಆತ ತಂದೆಯಿಂದ ಹಣಕ್ಕಾಗಿ ಒತ್ತಾಯಿಸಿದಾಗ, ಗಂಗಾಧರ್ ರಘುವಿನ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದ. ಶವವನ್ನು ಎರಡು ದಿನ ಮನೆಯಲ್ಲಿಟ್ಟು, ಮೂರನೇ ದಿನ ಕಿರಿಯ ಮಗ ರೂಪೇಶ್‌ನನ್ನು ಬೆದರಿಸಿ, ಶವವನ್ನು ಇಂಗುಗುಂಡಿಯಲ್ಲಿ ಹೂತಿಟ್ಟಿದ್ದ.

ಆಲೂರು ಪೊಲೀಸರು, ಹಾಸನದ ವಿಧಿ ವಿಜ್ಞಾನ ತಂಡದ ಸಹಾಯದಿಂದ, ರೂಪೇಶ್ ತೋರಿಸಿದ ಸ್ಥಳದಲ್ಲಿ ಉತ್ಖನನ ನಡೆಸಿದರು. ಸಂಪೂರ್ಣ ಅಸ್ಥಿಪಂಜರವನ್ನು ಪತ್ತೆಹಚ್ಚಲಾಗಿದ್ದು, ಇದನ್ನು ಫಾರೆನ್ಸಿಕ್ ತಪಾಸಣೆಗೆ ಕಳುಹಿಸಲಾಗಿದೆ. ರೂಪೇಶ್‌ನನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆಯನ್ನು ಮುಂದುವರೆಸಲಾಗುತ್ತಿದೆ. ಗಂಗಾಧರ್, ರೂಪೇಶ್‌ಗೆ ರಹಸ್ಯ ಬಹಿರಂಗ ಮಾಡಿದರೆ ಕೊಲೆ ಬೆದರಿಕೆ ಹಾಕಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

Exit mobile version