ಬೆಂಗಳೂರು: ಚಾಮುಂಡೇಶ್ವರಿ ದೇವಿ ಎಲ್ಲ ಧರ್ಮದವರ ದೇವರು, ದೇವರಿಗೆ ಜಾತಿ-ಧರ್ಮ ಲೇಪನ ಮಾಡಬೇಡಿ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಎಲ್ಲ ಧರ್ಮದವರಿಗೂ ಆಶೀರ್ವಾದ ನೀಡುವ ಶಕ್ತಿಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಇಂದು (ಬುಧವಾರ) ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಅವರು, ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ತಮ್ಮ ಹೇಳಿಕೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
“ಹೇಗೆ ನೀರಿಗೆ, ಬೆಳಕಿಗೆ, ಗಾಳಿಗೆ ಯಾವ ಜಾತಿ-ಧರ್ಮವಿಲ್ಲವೋ, ಅದೇ ರೀತಿ ದೇವರಿಗೂ ಧರ್ಮವಿಲ್ಲ. ಪ್ರಾರ್ಥನೆ ಯಾರೊಬ್ಬರ ಸ್ವತ್ತೂ ಅಲ್ಲ. ನಾನು ನಂಬಿರುವ ಗುರುಗಳು ಮಾನವ ಧರ್ಮದಿಂದ ವಿಶ್ವಕ್ಕೆ ಶಾಂತಿ ಸಾಧ್ಯ ಎಂದಿದ್ದಾರೆ,” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
“ಚಾಮುಂಡೇಶ್ವರಿಯು ಎಲ್ಲ ಧರ್ಮದವರಿಗೂ ಆಶೀರ್ವಾದ ಮಾಡುವ ದೇವರು. ರಾಜವಂಶಸ್ಥರು ಮತ್ತು ನಂತರದ ಸರ್ಕಾರಗಳು ಚಾಮುಂಡಿಯನ್ನು ನಾಡದೇವಿ ಎಂದು ಕರೆದಿವೆ. ಈ ದೇಗುಲ ಸಾರ್ವಜನಿಕರ ಆಸ್ತಿಯಾಗಿದೆ. ನಾಡದೇವಿ, ನಾಡಧ್ವಜ, ರಾಷ್ಟ್ರಧ್ವಜ ಮತ್ತು ದೇವರಿಗೆ ಜಾತಿ, ಧರ್ಮ, ಬಣ್ಣದ ರಾಜಕೀಯ ಲೇಪನ ಮಾಡುವ ಅಗತ್ಯವಿಲ್ಲ,” ಎಂದು ಡಿಸಿಎಂ ಡಿಕೆಶಿ ಸ್ಪಷ್ಟಪಡಿಸಿದರು.
ದೇವಸ್ಥಾನಕ್ಕೆ ಯಾರನ್ನೂ ತಡೆಯಲು ಆಗದು
“ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕೇವಲ ಹಿಂದೂಗಳು ಮಾತ್ರ ಬರಬೇಕೆಂಬ ನಿಯಮ ಎಲ್ಲಿದೆ? ಒಂದಷ್ಟು ಸಮುದಾಯದವರು ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮಕ್ಕೆ ಸೇರಿಕೊಂಡಿದ್ದಾರೆ. ಅವರನ್ನು ದೇವಾಲಯಕ್ಕೆ ಬರಬೇಡಿ ಎಂದು ಹೇಳಲು ಆಗುತ್ತದೆಯೇ? ತಂದೆ-ತಾಯಿ ಬೇರೆ-ಬೇರೆ ಧರ್ಮಕ್ಕೆ ಸೇರಿರಬಹುದು, ಇಂತಹ ಮಕ್ಕಳ ಆಚರಣೆಯೂ ಬೇರೆ-ಬೇರೆ ಇರಬಹುದು.
ಬ್ಯಾರಿಗಳು ನಮಗಿಂತಲೂ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಅವರನ್ನು ಮುಸ್ಲಿಮರು ಎಂದು ತಳ್ಳಿಬಿಡಲು ಆಗುತ್ತದೆಯೇ? ಮುಸ್ಲಿಮರು ಶ್ಲೋಕವೊಂದನ್ನು ಪಠಿಸುವ ವಿಡಿಯೋ ನಾನು ನೋಡಿದ್ದೇನೆ. ಅವರೂ ನಮ್ಮ ಧರ್ಮದ ಬಗ್ಗೆ ತಿಳಿದುಕೊಂಡಿದ್ದಾರೆ,” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿವರಿಸಿದರು.
“ಮಹಾರಾಜರ ಆಳ್ವಿಕೆಯ ಕಾಲದಲ್ಲೂ ವಿದೇಶಗಳಿಂದ ಅತಿಥಿಗಳನ್ನು ದಸರಾಕ್ಕೆ ಆಹ್ವಾನಿಸಲಾಗುತ್ತಿತ್ತು. ವಿದೇಶಿ ಧರ್ಮಿಯರೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಚರ್ಚ್, ಮಸೀದಿ, ಜೈನ ಬಸದಿ, ಗುರುದ್ವಾರದಂತಹ ಸ್ಥಳಗಳಲ್ಲಿ ನಮ್ಮನ್ನು ಒಳಗೆ ಬಿಡುವುದಿಲ್ಲವೇ? ಈ ಹಿಂದೆ ಕವಿ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದರು. ಆದರೆ ಈಗ ಬಾನು ಮುಷ್ತಾಕ್ ಬೆಟ್ಟವನ್ನೇ ಹತ್ತಬಾರದು, ಉದ್ಘಾಟನೆ ಮಾಡಬಾರದು ಎನ್ನುವುದು ಎಷ್ಟು ಸರಿ?” ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಯದುವೀರ್ಗೆ ತಿರುಗೇಟು:
ಸಂಸದ ಯದುವೀರ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಯದುವೀರ್ ಈಗ ಬಿಜೆಪಿಯೊಂದಿಗೆ ಸೇರಿಕೊಂಡಿದ್ದಾರೆ. ಆ ಕಾರಣಕ್ಕೆ ಇತಿಹಾಸವನ್ನೇ ಮರೆತಿದ್ದಾರೆ. ನಾನೊಬ್ಬ ಹಿಂದೂ. ಚಾಮುಂಡಿ ತಾಯಿಗೆ ಎರಡು ಸಾವಿರ ಕಾಣಿಕೆ ಕೊಟ್ಟು, ನಾನು ಮತ್ತು ಸಿದ್ದರಾಮಯ್ಯನವರು ಎಲ್ಲ ತಾಯಂದಿರಿಗೂ ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದೇವೆ. ಆ ತಾಯಿ ನಮಗೆ ಆಶೀರ್ವಾದ ಮಾಡಿದ್ದಾಳೆ. ಈಗ ಕೇವಲ ಹಿಂದೂಗಳಿಗೆ ಮಾತ್ರ ಹಣ ಕೊಡುತ್ತಿದ್ದೇವೆಯೇ? ಪಾರ್ಸಿ, ಸಿಖ್, ಮುಸ್ಲಿಂ, ಜೈನ, ಬೌದ್ಧರಿಗೆ ಹಣ ಕೊಡುತ್ತಿಲ್ಲವೇ?” ಎಂದು ಕೇಳಿದರು.
ಬಿಜೆಪಿಯ ಹಿಂದುತ್ವದ ಮೇಲಿನ ದಾಳಿ ಮತ್ತು ಬಾನು ಮುಷ್ತಾಕ್ ಆಯ್ಕೆಯ ಟೀಕೆಗೆ, “ನಾವು ಆಚರಣೆ ಮಾಡುವಷ್ಟು ಹಿಂದೂ ಪದ್ಧತಿಯನ್ನು ಬಿಜೆಪಿಯವರು ಎಲ್ಲಿ ಆಚರಣೆ ಮಾಡುತ್ತಾರೆ? ನಾನು ಯಾರ ವಿರುದ್ಧವೂ ಇಲ್ಲ, ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು. ಯಾವ ಹಿಂದೂ ದೇವಸ್ಥಾನದಲ್ಲಿ ಬೇರೆ ಧರ್ಮದವರು ಬರಬಾರದು ಎಂದು ಹೇಳಿರುವ ಉದಾಹರಣೆ ಇದ್ದರೆ ತೋರಿಸಿ,” ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದರು.
ಬಿಜೆಪಿ-ಜೆಡಿಎಸ್ನ ರಾಜಕೀಯ ಅಜೆಂಡಾ
ಬಿಜೆಪಿಯ ರಾಜಕೀಯ ಆರೋಪಗಳ ಬಗ್ಗೆ, “ಇದು ಬಿಜೆಪಿಯ ರಾಜಕೀಯ ಅಜೆಂಡಾ. ಇಂತಹ ಬಿಜೆಪಿಯವರು ಅಲ್ಪಸಂಖ್ಯಾತ ಇಲಾಖೆಯನ್ನೇ ಮುಚ್ಚಿಬಿಡಲಿ. ನಮ್ಮ ದೇಶದ ನಿವಾಸಿಗಳೆಲ್ಲರನ್ನೂ ನಾವು ಒಪ್ಪಿಕೊಳ್ಳಲೇಬೇಕು. ಅವರನ್ನು ದೇಶದಿಂದ ಓಡಿಸಲು ಆಗುತ್ತದೆಯೇ?” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಜೆಡಿಎಸ್ನ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರ ಹರಿಬಿಟ್ಟಿರುವ ಬಗ್ಗೆ, “ಜೆಡಿಎಸ್ ಯಾವತ್ತೂ ಫೇಕ್ ಕೆಲಸಗಳನ್ನೇ ಮಾಡುತ್ತದೆ. ನಾನು ಹೆದರಿಕೊಂಡು ರಣಹೇಡಿಯಂತೆ ಇದ್ದರೆ ಟೀಕೆ ಮಾಡಿಕೊಳ್ಳಲಿ. ಅವರ ದೊಡ್ಡ ನಾಯಕರಿಗೂ ನಾನು ಹೆದರುವವನಲ್ಲ. ಈ ಟ್ವೀಟ್ಗಳಿಗೆ ಈಗ ಹೆದರಿಕೊಳ್ಳುತ್ತೇನೆಯೇ? ವಿಜಯೇಂದ್ರ ಮತ್ತು ಅಶೋಕ್ ತಮ್ಮ ಸಮಾಧಾನಕ್ಕೆ ಮಾತನಾಡುತ್ತಿದ್ದಾರೆ,” ಎಂದು ತಿರುಗೇಟು ನೀಡಿದರು.
ಧರ್ಮಸ್ಥಳ ಚಲೋ ಬಗ್ಗೆ ಕೇಳಿದಾಗ, “ಅದು ರಾಜಕೀಯ ಚಲೋ, ಧರ್ಮದ ಚಲೋ ಅಲ್ಲ,” ಎಂದು ಸ್ಪಷ್ಟಪಡಿಸಿದರು.