ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣಕ್ಕೆ ಸರ್ಕಾರವು ₹200 ಕೋಟಿ ಬಿಡುಗಡೆ ಮಾಡಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ಜನ-ಜಾನುವಾರುಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ತಿಳಿಸಿದ್ದಾರೆ.
ನವಲಗುಂದ ತಾಲೂಕಿನ ಯಮನೂರು ಗ್ರಾಮದ ಸೇತುವೆ ಬಳಿಯ ಬೆಣ್ಣಿಹಳ್ಳವನ್ನು ವೀಕ್ಷಿಸಿದ ನಂತರ ಸಚಿವರು ಮಾತನಾಡಿದರು. ಬೆಣ್ಣಿಹಳ್ಳವು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ 6 ತಾಲೂಕುಗಳ 56 ಹಳ್ಳಿಗಳನ್ನು ಪ್ರವಾಹದಿಂದ ಬಾಧಿಸುತ್ತದೆ. ಈ ಹಳ್ಳವು 148 ಕಿ.ಮೀ ಉದ್ದದಲ್ಲಿ ಹರಿಯುತ್ತದೆ ಮತ್ತು 4800 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ. 2012ರಲ್ಲಿ ಡಾ. ಜಿ.ಎಸ್. ಪರಮಶಿವಯ್ಯ ಅವರ ಅಧ್ಯಯನ ವರದಿಯ ಆಧಾರದಲ್ಲಿ, ಪ್ರವಾಹ ನಿಯಂತ್ರಣ ಮತ್ತು ನೀರಿನ ಸದ್ಬಳಕೆಗೆ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ನು ನೀರಾವರಿ ನಿಗಮದ ವರದಿಯೊಂದಿಗೆ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಹಾಗೂ ಇಂಗಳಹಳ್ಳಿ ಸಮೀಪ ಬೆಣ್ಣೆ ಹಳ್ಳ ಪ್ರವಾಹದಿಂದ ಹಾನಿಯಾಗಬಹುದಾದ ಪ್ರದೇಶವನ್ನು ಇಂದು ವೀಕ್ಷಣೆ ಮಾಡಲಾಯಿತು. ಪ್ರವಾಹದಿಂದ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇನೆ.
ಈ ವೇಳೆ ಶಾಸಕರಾದ ಶ್ರೀ @nhkonaraddy,… pic.twitter.com/XHBjX5ULxD
— Santosh Lad Official (@SantoshSLadINC) May 28, 2025
ಸ್ಥಳೀಯ ಶಾಸಕ ಎನ್.ಎಚ್. ಕೋನರಡ್ಡಿ ಅವರ ಪ್ರಯತ್ನದಿಂದ 2024-25ನೇ ಸಾಲಿನ ಬಜೆಟ್ನಲ್ಲಿ ₹200 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದೆ. ಯಮನೂರು ಸೇತುವೆ ಬಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸ್ನಾನಘಟ್ಟ, ಉತ್ತಮ ರಸ್ತೆಗಳು ಮತ್ತು ಹೂಳು ತಡೆಗಟ್ಟುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಮುಂದಿನ ಮೂರು ತಿಂಗಳ ಮಳೆಗಾಲದಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಜಿಲ್ಲಾಡಳಿತವು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ಕರ್ತವ್ಯದಲ್ಲಿ ನಿಷ್ಕಾಳಜಿಯಿಲ್ಲದಂತೆ ಸೂಚನೆ ನೀಡಲಾಗಿದೆ.
ನವಲಗುಂದದಲ್ಲಿ ತಾತ್ಕಾಲಿಕ ಅಗ್ನಿಶಾಮಕ ದಳದ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಬೋಟ್ಗಳು ಸೇರಿದಂತೆ ಜೀವ ರಕ್ಷಕ ಪರಿಕರಗಳನ್ನು ಸಿದ್ಧಪಡಿಸಲಾಗಿದೆ. ಸ್ಥಳೀಯ ಈಜುಗಾರರು ಮತ್ತು ಸ್ವಯಂಸೇವಕರ ತಂಡಗಳನ್ನು ಗ್ರಾಮಮಟ್ಟದಲ್ಲಿ ರಚಿಸಲಾಗಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದಾರೆ. ನವಲಗುಂದ ತಾಲೂಕಿನಲ್ಲಿ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಒಂದಾಗಿ ಗದಗ ಜಿಲ್ಲೆಗೆ ಹರಿಯುವುದರಿಂದ ಪ್ರವಾಹದ ತೀವ್ರತೆ ಹೆಚ್ಚಾಗಿರುತ್ತದೆ. ಇದಕ್ಕಾಗಿ 10 ತಂಡಗಳನ್ನು ರಚಿಸಲಾಗಿದೆ. ಜನ-ಜಾನುವಾರುಗಳ ಸುರಕ್ಷತೆಗಾಗಿ ಐದು ತಂಡಗಳು 24 ಗಂಟೆ ಕಾರ್ಯನಿರ್ವಹಿಸಲಿವೆ.
ಶಾಸಕ ಎನ್.ಎಚ್. ಕೋನರಡ್ಡಿ ಅವರು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ವರ್ಷ ಧಾರವಾಡದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಸೂಚನೆಯಂತೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದಾರೆ. ಬೆಣ್ಣಿಹಳ್ಳದ ಶಾಶ್ವತ ಪರಿಹಾರಕ್ಕೆ ₹1600 ಕೋಟಿ ಅಗತ್ಯವಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಮೂಲಕ ಕೇಂದ್ರದಿಂದ ಅನುದಾನ ತರಲಾಗುವುದು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಮುಂಗಾರು ಪೂರ್ವ ಮಳೆಯಿಂದ ಬಿತ್ತನೆ ಆರಂಭವಾಗದಿರುವುದರಿಂದ ರೈತರಿಗೆ ಬೀಜ ಮತ್ತು ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.