ಭದ್ರೆ ನೀರು ಡೈವರ್ಟ್ ಮಾಡಲು ಕಾಲುವೆಯೇ ಒಡೆದ ಕಿಡಿಗೇಡಿಗಳು

ಡೈವರ್ಟ್

ಚಿತ್ರದುರ್ಗ ಸೆ. 19: ಚಿತ್ರದುರ್ಗ ಜಿಲ್ಲೆಗೆ ಹರಿದು ಬರುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಕಿಡಿಗೇಡಿಗಳು ಅಕ್ರಮವಾಗಿ ಬೇರೆಡೆಗೆ ತಿರುಗಿಸಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಬಳಿ ಮುಖ್ಯ ಕಾಲುವೆಯನ್ನು ಒಡೆದು ನೀರಿನ ಮಾರ್ಗವನ್ನು ಬದಲಿಸಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಚಿತ್ರದುರ್ಗ ಶಾಲಾ ಕಾಲುವೆ ಮೂಲಕ ಭದ್ರೆ ನೀರು ಹರಿಯುತ್ತಿದ್ದು, ಇದೇ ಸಂದರ್ಭದಲ್ಲಿ ಕಿಡಿಗೇಡಿಗಳು ಮುಖ್ಯ ಕಾಲುವೆಯನ್ನು ಕಡಿದು ನೀರನ್ನು ಡೈವರ್ಟ್ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಭಾರಿ ಪ್ರಮಾಣದ ಭದ್ರೆ ನೀರು ಪೋಲಾಗಿದ್ದು, ನೀರಾವರಿ ವ್ಯವಸ್ಥೆಗೆ ಹಾನಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮುಖ್ಯ ಕಾಲುವೆಯನ್ನು ಒಡೆದು ನೀರು ಬೇರೆಡೆಗೆ ಹರಿಸಿರುವುದರಿಂದ ಸರ್ಕಾರದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಮಗಾರಿಗೆ ಹಾನಿಯಾಗಿದೆ. ಸುಮಾರು ರೂ. 50 ಲಕ್ಷ ಮೌಲ್ಯದ ಕಾಮಗಾರಿಯನ್ನು ಹಾನಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ನೀರಿನ ಹರಿವಿನ ಮಾರ್ಗವನ್ನು ಬದಲಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯನ್ನು ಹಾನಿಗೊಳಿಸಿ ನೀರನ್ನು ಬೇರೆಡೆಗೆ ಹರಿಸಿರುವ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಅವರು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ಸ್ವೀಕರಿಸಿದ ಬಳಿಕ ಹೊಸದುರ್ಗ ಪೊಲೀಸ್ ಠಾಣೆಯ ಪಿಐ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಲುವೆಗೆ ಯಾವ ರೀತಿಯಲ್ಲಿ ಹಾನಿ ಮಾಡಲಾಗಿದೆ, ನೀರನ್ನು ಯಾವ ಉದ್ದೇಶಕ್ಕಾಗಿ ಬೇರೆಡೆಗೆ ತಿರುಗಿಸಲಾಗಿತ್ತು ಹಾಗೂ ಘಟನೆಗೆ ಯಾರು ಕಾರಣ ಎಂಬ ಬಗ್ಗೆ ಪರಿಶೀಲನೆ ಮುಂದುವರಿದಿದೆ.

ಸರ್ಕಾರಿ ನೀರಾವರಿ ಕಾಮಗಾರಿಗೆ ಹಾನಿ ಮಾಡಿ ನೀರನ್ನು ಅಕ್ರಮವಾಗಿ ತಿರುಗಿಸಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಕಾಲುವೆ ಹಾನಿಯಿಂದ ಭದ್ರೆ ನೀರು ಪೋಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Exit mobile version