ಬೆಂಗಳೂರಿನಲ್ಲೀಗ ಮತ್ತೆ ಟೋಯಿಂಗ್ ಕಿರಿಕಿರಿ ಶುರುವಾಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಯಾಕಂದ್ರೆ, ನಿನ್ನೆಯಷ್ಟೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಟೋಯಿಂಗ್ ಶುರುವಾಗುತ್ತೆ ಅಂತಾ ಹೇಳಿದ್ರು. ಇದರ ಜೊತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಕೂಡ ಟೋಯಿಂಗ್ ಮತ್ತೆ ಆರಂಭಿಸ್ತೀವಿ ಅಂತಾ ತಿಳಿಸಿದ್ರು. ಮಹಾನಗರದ ಸಂಚಾರ ಸುಗಮಕ್ಕೆ ಹಾಗೂ ವಾಹನ ಸವಾರರ ಒಳಿತಿಗಾಗಿ ಟೋಯಿಂಗ್ ಆರಂಭವಾಗಲಿದೆ ಅಂತಾ ಸರ್ಕಾರವೇ ಹಿಂಟ್ ಕೊಟ್ಟಿತ್ತು. ಆದ್ರೀಗ ಅದೇ ಟೋಯಿಂಗ್ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ಜನರ ಈ ಸಿಟ್ಟಿಗೆ ಈ ಆಕ್ರೋಶಕ್ಕೆ ಮೂಲ ಕಾರಣ ಈ ಹಿಂದೆ ಟೋಯಿಂಗ್ ಮಾಡೋರ ವರ್ತನೆ ರೌಡಿಗಳಂತೆ ಓಡೋಡಿ ಬಂದು ನಿಂತ ಬೈಕ್ಗಳನ್ನ ಧರ ಧರನೇ ಎಳೆದೊಯ್ಯುತ್ತಿದ್ರು. ಕಾರುಗಳನ್ನೂ ಕೂಡ ಏನ್ ಡ್ಯಾಮೇಜ್ ಆದ್ರೂ ತಲೆಕೆಡಿಸಿಕೊಳ್ಳುತ್ತಿರ್ಲಿಲ್ಲ. ಜೊತೆಗೆ ವಿನಾಕಾರಣ ಯರ್ರಾ ಬಿರ್ರಿ ವಸೂಲಿ ಮಾಡ್ತಿದ್ರು. ಇದರಿಂದ ಹಲವು ಬಾರಿ ಟೋಯಿಂಗ್ ಗ್ಯಾಂಗ್ ಜೊತೆ ಜನರಿಗೆ ದೊಡ್ಡ ಜಗಳನೇ ನಡೆದುಹೋಗಿದೆ. ಹೀಗಾಗಿ ಮತ್ತೆ ಆರಂಭವಾದ್ರೆ ಸುಮ್ಮನಿರಲ್ಲ ಅಂತಾ ಜನ ಎಚ್ಚರಿಕೆ ಕೊಟ್ಟಿದ್ದಾರೆ.
ಸದ್ಯಕ್ಕಿರೋ ಬೆಂಗಳೂರು ಸಂಚಾರಿ ರೂಲ್ಸ್ನ್ನ ಸರಿಯಾಗಿ ಅನುಷ್ಠಾನಗೊಳಿಸಿ. ಜೊತೆಗೆ ಪೊಲೀಸರ ಭ್ರಷ್ಟಾಚಾರ ನಿಲ್ಲಿಸಿ. ಅಷ್ಟೇ ಅಲ್ಲ, ಸಾರ್ವಜನಿಕರ ಜೊತೆ ಸಂಯಮದಿಂದ ಹಾಗೂ ಸೌಜನ್ಯದಿಂದ ವರ್ತಿಸಲಿ. ಬಳಿಕವಷ್ಟೇ ಟೋಯಿಂಗ್ ಶುರು ಮಾಡಲಿ ಅನ್ನೋದು ಜನರ ಒತ್ತಾಯ.
ಬೆಂಗಳೂರು ಪೊಲೀಸ್ ಆಯುಕ್ತರು ಟೋಯಿಂಗ್ ಶುರು ಮಾಡ್ತೀವಿ. ಆದ್ರೆ, ಯಾವಾಗ ಅಂತಾ ಇನ್ನೂ ಡಿಸೈಡ್ ಆಗಿಲ್ಲ ಅಂತಾ ಹೇಳಿದ್ದಾರೆ. ಸರ್ಕಾರ ಮಟ್ಟದಲ್ಲಿ ಚರ್ಚೆ ನಡಸಲಾಗಿದೆ. ಜೊತೆಗೆ ಟೋಯಿಂಗ್ ಅನ್ನು ಗುತ್ತಿಗೆ ಕೊಡದೇ, ನಾವೇ ನಮ್ಮ ವಾಹನ ಬಳಸಿ ಟೋಯಿಂಗ್ ಮಾಡೋಕೆ ಚಿಂತನೆ ನಡೆಸಲಾಗಿದೆ ಅಂತಾ ತಿಳಿಸಿದ್ದಾರೆ. ಏನೇ ಆದ್ರೂ ಯಾವುದೇ ರೂಲ್ ಜಾರಿಗೆ ತಂದ್ರೂ ಪಬ್ಲಿಕ್ಗೆ ಯಾವುದೇ ಕಿರಿಕಿರಿ ಆಗದಂತೆ, ಸಂಚಾರಕ್ಕೂ ತೊಡಕಾಗದಂತೆ ಅನುಷ್ಠಾನಗೊಳಿಸಲಿ ಅನ್ನೋದೇ ಎಲ್ಲರ ಆಶಯ.