ಬೆಂಗಳೂರು: ಬನ್ನೇರುಘಟ್ಟ-ಕನಕಪುರ ನೈಸ್ ರಸ್ತೆಯಲ್ಲಿ ವಕೀಲ ಜಗದೀಶ್ರವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯಿಂದ ಕೊಲೆಯ ಶಂಕೆ ವ್ಯಕ್ತವಾಗಿದ್ದು, ಕೆಂಗೇರಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಜಗದೀಶ್ರವರ ಕಾರು ನಿಂತಿದ್ದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಅವರ ಮೃತದೇಹ ಬಿದ್ದಿತ್ತು. ಕಾರಿನ ಮೇಲೆ ಅಪಘಾತದ ಗುರುತುಗಳು ಕಂಡುಬಂದಿವೆ. ಘಟನೆಯು ನಿನ್ನೆ (ಮೇ 2, 2025) ಸಂಜೆ 7:30 ರಿಂದ 8:00 ಗಂಟೆಯ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ.
ಕಾರು ಟಚ್ ಆಗಿರುವ ವಿಚಾರಕ್ಕೆ ಗಲಾಟೆಯಾಗಿ ಕೊಲೆ ನಡೆದಿರಬಹುದೇ, ಉದ್ದೇಶಪೂರ್ವಕ ಕೊಲೆಯಾಗಿದೆಯೇ, ಅಥವಾ ಅಪಘಾತವೇ ಆಗಿದೆಯೇ ಎಂಬುದನ್ನು ಖಚಿತಪಡಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಕೊಲೆಯಂತೆ ಕಾಣುತ್ತಿದ್ದು, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.