ಗ್ರೇಟರ್ ಬೆಂಗಳೂರು ಈಗ ವಾಟರ್ ಬೆಂಗಳೂರು: ಆರ್ ಅಶೋಕ್ ಟೀಕೆ

ಸುರಂಗ ಮಾರ್ಗಕ್ಕೆ ಹಣ ಮೀಸಲಿಟ್ಟಿದ್ದಕ್ಕಾಗಿ, ಬೆಂಗಳೂರು ರಸ್ತೆಗಳು ಸುರಂಗವಾಗಿದೆ’

Befunky collage 2025 05 20t180816.309

ಬೆಂಗಳೂರು: “ಬಿಜೆಪಿ ಆಡಳಿತದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 1,600 ಕೋಟಿ ರೂ. ಮೀಸಲಿಟ್ಟಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಆ ಕಾಮಗಾರಿಗಳನ್ನು ರದ್ದುಗೊಳಿಸಿತು. ಆ ಕಾಮಗಾರಿಗಳು ನಡೆದಿದ್ದರೆ, ಬೆಂಗಳೂರು ಇಂತಹ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿರಲಿಲ್ಲ,” ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಆರೋಪಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ತೀವ್ರವಾಗಿ ಟೀಕಿಸಿದರು. “ಬೆಂಗಳೂರು ಮಳೆಯಿಂದ ಮುಳುಗಿದೆ, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯಿಂದ ಐವರು ಸಾವನ್ನಪ್ಪಿದ್ದಾರೆ. ಇಂತಹ ದುರಂತದ ನಡುವೆಯೂ ಕಾಂಗ್ರೆಸ್ ಸಾಧನೆಯ ಸಮಾವೇಶ ನಡೆಸುತ್ತಿದೆ. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಈ ಸಮಾವೇಶವನ್ನು ರದ್ದುಗೊಳಿಸಬೇಕಿತ್ತು,” ಎಂದು ಕಿಡಿಕಾರಿದರು.

ADVERTISEMENT
ADVERTISEMENT

ಕಾಂಗ್ರೆಸ್‌ನ ವೈಫಲ್ಯ

“ಡಿಸಿಎಂ ಡಿ.ಕೆ. ಶಿವಕುಮಾರ್ ಸಾಯಿ ಬಡಾವಣೆಗೆ ಭೇಟಿ ನೀಡಿ ಅಭಿವೃದ್ಧಿಗೆ ಭರವಸೆ ನೀಡಿದ್ದರು. ಸಿಲ್ಕ್ ಬೋರ್ಡ್‌ನಲ್ಲಿ ಕಳೆದ ವರ್ಷವೂ ಪ್ರವಾಹವಾಗಿತ್ತು, ಆದರೆ ಒಂದು ಪೈಸೆಯೂ ಅಭಿವೃದ್ಧಿಗೆ ಬಿಡುಗಡೆಯಾಗಿಲ್ಲ. ಬಿಜೆಪಿ ಆಡಳಿತದಲ್ಲಿ ರಾಜಕಾಲುವೆ ಮತ್ತು ರಸ್ತೆ ಅಭಿವೃದ್ಧಿಗೆ 1,600 ಕೋಟಿ ರೂ. ಮಂಜೂರಾಗಿತ್ತು, ಆದರೆ ಕಾಂಗ್ರೆಸ್ ಅದನ್ನು ರದ್ದುಗೊಳಿಸಿತು. ಈ ಹಣವನ್ನು ಸುರಂಗ ಮಾರ್ಗ ಯೋಜನೆಗೆ ಮಾತ್ರ ಬಳಸಲಾಗಿದೆ, ಇದರಿಂದ ಎಲ್ಲ ರಸ್ತೆಗಳೇ ಸುರಂಗವಾಗಿವೆ,” ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ದೂರಿದರು.

ಮುಂಜಾಗ್ರತಾ ಕ್ರಮಗಳ ಕೊರತೆ

“ಸರ್ಕಾರವು ಪ್ರವಾಹದ ಸ್ಥಳಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸುವುದಾಗಿ ಭರವಸೆ ನೀಡಿತ್ತು, ಆದರೆ ಯಾವುದೇ ಕೆಲಸವಾಗಿಲ್ಲ. ಏಪ್ರಿಲ್ 15ರಂದು ಹವಾಮಾನ ಇಲಾಖೆ ಭಾರಿ ಮಳೆಯ ಎಚ್ಚರಿಕೆ ನೀಡಿತ್ತು, ಆದರೆ ಬಿಬಿಎಂಪಿಯಿಂದ ಒಂದು ತಿಂಗಳಲ್ಲಿ ಯಾವುದೇ ಮುಂಜಾಗ್ರತಾ ಸಭೆ ನಡೆದಿಲ್ಲ. ಕಾಂಗ್ರೆಸ್ 14,000 ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ, ಆದರೆ ಜನರು ಈಗ ಕಾಂಗ್ರೆಸ್ ಪಕ್ಷವನ್ನೇ ಮುಚ್ಚಲು ಗುಂಡಿಗಳನ್ನು ತೆಗೆಯುತ್ತಿದ್ದಾರೆ,” ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ವ್ಯಂಗ್ಯವಾಡಿದರು.

ಬೆಂಗಳೂರಿನ ಸ್ಥಿತಿ

“ಗ್ರೇಟರ್ ಬೆಂಗಳೂರು ಈಗ ವಾಟರ್ ಬೆಂಗಳೂರು ಆಗಿದೆ. ಮನೆ-ಬಾಗಿಲಿಗೆ ಅವಾಂತರ, ಸಾವುಗಳು ಸಂಭವಿಸುತ್ತಿವೆ. ಬಿಜೆಪಿ ಆಡಳಿತದಲ್ಲಿ ಪ್ರತಿ ವರ್ಷ 7-8 ಸಾವಿರ ಕೋಟಿ ರೂ. ಬೆಂಗಳೂರಿಗೆ ಮೀಸಲಿಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಹಣವನ್ನು ಸುರಂಗ ಯೋಜನೆಗೆ ಮಾತ್ರ ಬಳಸಿದೆ. ಬೆಂಗಳೂರು ಮುಳುಗುತ್ತಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ,” ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಆಕ್ಷೇಪಿಸಿದರು.

“ಸರ್ಕಾರ ಯುದ್ಧಕ್ಕೆ ಸಾಕ್ಷಿ ಕೇಳುತ್ತದೆ, ಆದರೆ ಜನರು ಸಾಯುತ್ತಿರುವುದಕ್ಕೆ ಯಾವ ಸಾಕ್ಷಿಯ ಅಗತ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಬೆಂಗಳೂರು ಈ ಸ್ಥಿತಿಗೆ ತಲುಪಿದೆ,” ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ತಿಳಿಸಿದರು.

Exit mobile version