ವರದಿ: ಮೂರ್ತಿ. ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರು ನಗರದ 8ನೇ ಎಸಿಎಂಎಂ (ACMM) ನ್ಯಾಯಾಲಯವು ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡಲು ಯತ್ನಿಸಿದ್ದ ಆರೋಪಿಗೆ ತೀವ್ರ ತೀರ್ಪು ನೀಡಿದ್ದು, ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ತೀರ್ಪು ಪ್ರಕಟವಾದ ತಕ್ಷಣವೇ ಆರೋಪಿಯನ್ನು ಜೈಲಿಗೆ ಕಳಿಸಿದ ನ್ಯಾಯಾಲಯ, ನ್ಯಾಯದ ತೀಕ್ಷ್ಣತೆಯ ಮೂಲಕ ಸತ್ಯವನ್ನು ಬಯಲಿಗೆ ತಂದಿದೆ.
ಶಿಕ್ಷೆಯಾದ ವ್ಯಕ್ತಿ ಚಿಕ್ಕಬೈಲಪ್ಪ, ಬೆಂಗಳೂರು ದಾಸರಹಳ್ಳಿ ವ್ಯಾಪ್ತಿಯ ಲಕ್ಷ್ಮಿಪುರ ಗ್ರಾಮದ 192/12ರಲ್ಲಿ ಇರುವ 1 ಎಕರೆ 11 ಗುಂಟೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಲೀಕತ್ವದ ಹಕ್ಕು ಹೊಂದಿರುವಂತೆ ತೋರಿಸಿ ಕೋಟ್ಯಂತರ ರೂಪಾಯಿ ಮೋಸ ನಡೆಸಲು ಮುಂದಾಗಿದ್ದನು. ಈ ಕುರಿತಂತೆ ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ 2009ರಲ್ಲಿಯೇ ಪ್ರಕರಣ ದಾಖಲಾಗಿತ್ತು.
16 ವರ್ಷಗಳಾದ ನ್ಯಾಯದ ಹಾದಿ
ಪ್ರಕರಣ ದಾಖಲಾದ ಬಳಿಕ 16 ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಕೊನೆಗೂ ನ್ಯಾಯಾಲಯವು ಚಿಕ್ಕಬೈಲಪ್ಪನ ವಿರುದ್ದ ವಿಧಿಸಿದ ತೀರ್ಪು ಸಮಾಜಕ್ಕೆ ಸ್ಪಷ್ಟವಾದ ಸಂದೇಶವನ್ನು ಒದಗಿಸಿದೆ. ಇವನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳು 447 (ಅಕ್ರಮ ಪ್ರವೇಶ), 427 (ಹಾನಿ), 506 (ಧಮಿಕೆ), 465, 468, 471 (ನಕಲಿ ದಾಖಲೆ ಸೃಷ್ಟಿಸುವುದು ಮತ್ತು ಬಳಕೆ) ಅಡಿ ಪ್ರಕರಣ ದಾಖಲಾಗಿತ್ತು.
ಗೋಮುಖ ವ್ಯಾಘ್ರರಿಗೆ ಎಚ್ಚರಿಕೆ
ಚಿಕ್ಕಬೈಲಪ್ಪ ತನ್ನನ್ನು ಸಮಾಜದಲ್ಲಿ ಗಣ್ಯ ವ್ಯಕ್ತಿಯಂತೆ ತೋರ್ಪಡಿಸಿಕೊಳ್ಳುತ್ತಿದ್ದರೂ, ನ್ಯಾಯಾಲಯದಲ್ಲಿ ಸತ್ಯದ ಮುಖವಾಡ ಬಯಲಾಗಿ, ಇವನ ಅಸಲಿಯಾದ ಮುಖ ಕಾಣಿಸಿಕೊಂಡಿದೆ. ಹೀಗಾಗಿ, ನಕಲಿ ದಾಖಲೆಗಳ ಮೂಲಕ ಭೂ ಕಬಳಿಕೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ಏಜೆಂಟ್ಗಳು ಹಾಗೂ ‘ಗೋಮುಖ ವ್ಯಾಘ್ರ’ಗಳಿಗೆ ಈ ತೀರ್ಪು ಎಚ್ಚರಿಕೆಯ ಘಂಟೆಯಾಗಿದೆ.
ವಿದೇಶದಲ್ಲಿರುವ ಭಾರತೀಯರ ಜಮೀನನ್ನು ಗುರಿಯಾಗಿಸುತ್ತಿದ್ದರು. ಚಿಕ್ಕಬೈಲಪ್ಪ ಮತ್ತು ಅವರ ತಂಡ ಸ್ಥಳೀಯವಾಗಿ ವಾಸವಿಲ್ಲದ, ವಿದೇಶದಲ್ಲಿ ನೆಲೆಸಿರುವ ಭಾರತೀಯರ ಜಮೀನನ್ನು ಗುರಿಯಾಗಿಸಿ, ಅಂತಹ ಸ್ವತ್ತುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು ಎಂಬುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣ ದಾಖಲಿಸಿದವರು ಸಜ್ಜನ್ ಮತ್ತು ಥಾಮಸ್
ಈ ಪ್ರಕ್ರಿಯೆಯಲ್ಲಿ ಧೈರ್ಯದಿಂದ ಮುಂದೆ ಬಂದ ಸಜ್ಜನ್ ಮತ್ತು ಥಾಮಸ್ ಎಂಬವರು ಪ್ರಕರಣ ದಾಖಲಿಸುವ ಮೂಲಕ ನ್ಯಾಯದ ದಾರಿಯನ್ನು ತೆರೆಯಲು ಸಹಕಾರಿಯಾಗಿದ್ದಾರೆ.
ನ್ಯಾಯಾಲಯದ ಈ ತೀರ್ಪು, ಕಾನೂನು ಮೊರೆ ಹೋದವರಿಗೆ ನ್ಯಾಯ ಸಿಗುತ್ತದೆ ಮತ್ತು ಸುಳ್ಳು ದಾಖಲೆಗಳ ಆಧಾರದ ಮೇಲೆ ಭೂ ಸ್ವತ್ತುಗಳ ಕಬಳಿಕೆ ಮಾಡಲು ಯತ್ನಿಸುವವರ ನಿಗೂಢ ತೆರೆ ಮರೆಯ ನಾಟಕಗಳು ನೆರವಿಗೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸತ್ಯದ ಎದುರು ಸುಳ್ಳು ಎಷ್ಟು ಕಾಲವಾದರೂ ನಿಲ್ಲಲಾರದು, ಕಾನೂನು ತಡವಾದರೂ ತಪ್ಪುಮಾಡಿದವರನ್ನು ಕ್ಷಮಿಸುವುದಿಲ್ಲ ಎಂಬುದನ್ನು ಈ ತೀರ್ಪು ಪುನಃ ಸಾಬೀತುಪಡಿಸಿದೆ.
ವರದಿ: ಮೂರ್ತಿ. ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ. ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ