ಬೆಳಗಾವಿಯಲ್ಲಿ ಘೋರ ದುರಂತ: ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ನೀರುಪಾಲು!

BeFunky collage 2026 04 22T144304.067

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಹರಿಯುವ ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ಪಾರು ಮಾಡಲು ಹೋದ ತಾಯಿ, ಮಗನೊಂದಿಗೆ ತಾವೂ ಕೂಡ ಜಲಸಮಾಧಿಯಾದ ಕರುಣಾಜನಕ ಘಟನೆ ಹಿರಣ್ಯಕೇಶಿ ನದಿಯಲ್ಲಿ ನಡೆದಿದೆ.

ಘಟನೆಯ ವಿವರ:

ಸಂಕೇಶ್ವರದ ಶಂಕಲಿಂಗ ದೇವಸ್ಥಾನದ ಹಿಂಭಾಗದಲ್ಲಿ ಹರಿಯುವ ಹಿರಣ್ಯಕೇಶಿ ನದಿಗೆ ನಿನ್ನೆ ಸುಪ್ರೀತ್ ಕುಠೋಳಿ (10) ಎಂಬ ಬಾಲಕ ಇಳಿದಿದ್ದನು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಬಾಲಕ ಮುಳುಗಲಾರಂಭಿಸಿದ್ದಾನೆ. ಇದನ್ನು ಕಂಡ ತಾಯಿ ಲಕ್ಷ್ಮಿ ಕುಠೋಳಿ (27), ತನ್ನ ಪ್ರಾಣದ ಹಂಗು ತೊರೆದು ಮಗನನ್ನು ರಕ್ಷಿಸಲು ನದಿಗೆ ಜಿಗಿದಿದ್ದಾರೆ. ಆದರೆ ದುರದೃಷ್ಟವಶಾತ್ ನೀರಿನ ವೇಗ ಹೆಚ್ಚಿದ್ದರಿಂದ ಇಬ್ಬರೂ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿಯ ವೇಳೆಗೆ ತಾಯಿ ಲಕ್ಷ್ಮಿ ಅವರ ಮೃತದೇಹ ಪತ್ತೆಯಾಗಿದ್ದು, ನದಿಯಿಂದ ಹೊರತೆಗೆಯಲಾಗಿದೆ. ಆದರೆ, ಮಗ ಸುಪ್ರೀತ್‌ಗಾಗಿ ಶೋಧ ಕಾರ್ಯ ಇಂದೂ ಕೂಡ ಮುಂದುವರೆದಿದೆ. ಬೋಟ್ ಮತ್ತು ನುರಿತ ಈಜುಗಾರರ ಸಹಾಯದಿಂದ ನದಿಯ ಉದ್ದಕ್ಕೂ ಬಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂಕೇಶ್ವರ ಪಟ್ಟಣದಲ್ಲಿ ಶೋಕದ ಛಾಯೆ ಆವರಿಸಿದೆ.

Exit mobile version