ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025-26ನೇ ಸಾಲಿನ ಆಯವ್ಯಯವನ್ನು ಇಂದು ಮಂಡಿಸಲಿದೆ. ಈ ಬೃಹತ್ ಬಜೆಟ್ನ ಒಟ್ಟು ಗಾತ್ರ ₹20,000 ಕೋಟಿಯಾಗಿದ್ದು, ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. “ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆಯಡಿ ರೂಪಿಸಲಾದ ಈ ಆಯವ್ಯಯಕ್ಕೆ ರಾಜ್ಯ ಸರ್ಕಾರ ದಾಖಲೆಯ ₹7,000 ಕೋಟಿ ಅನುದಾನ ನೀಡುವ ನಿರೀಕ್ಷೆಯಿದೆ.
ಇಂದು ಬೆಳಗ್ಗೆ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಮತ್ತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮ್ಮುಖದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಬಜೆಟ್ ಮಂಡಿಸಲಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಶಾಸಕರು, ಸಚಿವರು, ಮತ್ತು ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ, ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಆಯವ್ಯಯ ಸಿದ್ಧಪಡಿಸಲಾಗಿದೆ.
ಪ್ರಮುಖ ಅಂಶಗಳು
ಮೂಲಸೌಕರ್ಯಕ್ಕೆ ಒತ್ತು:
“ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆಯಡಿ ಸುಗಮ ಸಂಚಾರಿ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು ಸೇರಿದಂತೆ ಎಂಟು ಆದ್ಯತೆಗಳಲ್ಲಿ ಬಜೆಟ್ ರೂಪಿಸಲಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ರಸ್ತೆಗಳ ಯೋಜನೆಗೆ ಈ ಬಾರಿ ಭರ್ಜರಿ ಅನುದಾನ ಮೀಸಲಿಡಲಾಗಿದೆ. ರಸ್ತೆಗಳ ವೈಟ್-ಟಾಪಿಂಗ್, ರಾಜಕಾಲುವೆ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ, ಫ್ಲೈಓವರ್, ಮತ್ತು ಅಂಡರ್ಪಾಸ್ ನಿರ್ಮಾಣ ಆದ್ಯತೆ ನೀಡಲಾಗಿದೆ.
ಬಿಬಿಎಂಪಿ ಆದಾಯ ನಿರೀಕ್ಷೆ:
ಬಿಬಿಎಂಪಿಯ ದೊಡ್ಡ ಆದಾಯ ಮೂಲವಾದ ಆಸ್ತಿ ತೆರಿಗೆಯಿಂದ ಸುಮಾರು ₹6,500 ಕೋಟಿ, ಘನತ್ಯಾಜ್ಯ ಶುಲ್ಕದಿಂದ ₹700 ಕೋಟಿ, ಜಾಹೀರಾತು ಶುಲ್ಕದಿಂದ ₹750 ಕೋಟಿ, ಪ್ರೀಮಿಯಂ ಎಫ್ಎಆರ್ನಿಂದ ₹1 ಸಾವಿರ ಕೋಟಿ, ರಾಜ್ಯ ಸರ್ಕಾರದ ₹7 ಸಾವಿರ ಕೋಟಿ, ವಿಶ್ವಬ್ಯಾಂಕ್ ನೆರವು ₹2 ಸಾವಿರ ಕೋಟಿ, ಬಿಬಿಎಂಪಿ ಆಸ್ತಿಗಳ ಗುತ್ತಿಗೆ ದರ ಪರಿಷ್ಕರಣೆ ಹೀಗೆ, ಸುಮಾರು ₹19 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿ ಗಾತ್ರದ ಆಯವ್ಯಯ ಮಂಡಿಸುವುದಕ್ಕೆ ನಿರ್ಧರಿಸಲಾಗಿದೆ.
5ನೇ ಬಾರಿ ಅಧಿಕಾರಿಗಳ ಮಂಡನೆ:
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಅವಧಿ 2020ರ ಸೆಪ್ಟಂಬರ್ನಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಆಯವ್ಯಯವನ್ನು ಪಾಲಿಕೆ ಅಧಿಕಾರಿಗಳೇ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯೂ ಹಣಕಾಸು ವಿಭಾಗದ ವಿಶೇಷ ಆಯುಕ್ತರೇ ಮಂಡಿಸಲಿದ್ದಾರೆ. ಈ ಮೂಲಕ ಸತತ ಐದು ಬಾರಿ ಅಧಿಕಾರಿಗಳಿಂದ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ.
ಆರೋಗ್ಯ ಮತ್ತುಶಿಕ್ಷಣ :
ಆರೋಗ್ಯ, ಶಿಕ್ಷಣ ಹಾಗೂ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕೆಲವು ಹೊಸ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ.ಬಿಬಿಎಂಪಿ ಆಸ್ಪತ್ರೆಯಲ್ಲಿ ಡಯಗ್ನಸ್ಟಿಕ್ ಲ್ಯಾಬ್ ಗಳನ್ನು ಆರಂಭಿಸುವುದು. ಈ ಮೂಲಕ ಬಿಬಿಎಂಪಿಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅತಿ ಕಡಿಮೆ ದರದಲ್ಲಿ ಸೌಲಭ್ಯ ನೀಡುವುದಕ್ಕೆ ಚಿಂತನೆ ನಡೆಸಲಾಗಿದೆ. ಉಳಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಆಯಂಬುಲೆನ್ಸ್ ಖರೀದಿ, ಡೆಂಟಲ್ ಕ್ಲಿನಿಕ್ ಆರಂಭ, ‘ಸೇವ್ ಮಾಮ್’ ಕಾರ್ಯಕ್ರಮದ ಮೂಲಕ ತಾಯಿ-ಮಗುವಿನ ಸಾವು ತಡೆಗಟ್ಟುವುದು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದೊಂದು ಇವಿ ಬೈಕ್, ಪಿಜಿಯೋ ಥೆರಪಿ ಚಿಕಿತ್ಸೆ ಆರಂಭಿಸುವುದು ಸೇರಿದಂತೆ ಮೊದಲಾದ ಸೇವೆಗಳನ್ನು ಆರಂಭಿಸಲಾಗುತ್ತದೆ. ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ರೆಫರಲ್ ಆಸ್ಪತ್ರೆ, ರೆಫರಲ್ ಆಸ್ಪತ್ರೆಗಳ ಹಾಸಿಗೆ ಸಂಖ್ಯೆ ಹೆಚ್ಚಿಸುವುದು, ತುರ್ತು ಚಿಕಿತ್ಸಾ ಕೇಂದ್ರ ಆರಂಭಸೇರಿದಂತೆ ಮೊದಲಾದ ಕಾರ್ಯಕ್ರಮ ನಿರೀಕ್ಷೆ ಇದೆ.
ಪ್ರಾಣಿಚಿಕಿತ್ಸಾಲಯ ಸ್ಥಾಪನೆ:
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಪ್ರಾಣಿ ಪಕ್ಷಿಗಳ ಚಿಕಿತ್ಸೆಗೆ ಸರ್ಕಾರಿ ಚಿಕಿತ್ಸಾಲಯ ಇರಲಿಲ್ಲ. ಈ ಹಿಂದೆ ಸರ್ಕಾರ ಪಶುಸಂಗೋಪನೆ ಇಲಾಖೆ ನಡೆಯುತ್ತಿದ್ದ ಚಿಕಿತ್ಸಾಲಯಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ ಮೇಲೆ ಮುಚ್ಚಿವೆ. ಹೀಗಾಗಿ, ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್ನಲ್ಲಿ ಪಾಲಿಕೆಯ 8 ವಲಯದಲ್ಲಿ ತಲಾ ಒಂದು ಸಮುದಾಯ ಪ್ರಾಣಿ ಚಿಕಿತ್ಸಾಲಯ ಸ್ಥಾಪಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಜತೆಗೆ, ಪ್ರಾಣಿಗಳ ಮೃತದೇಹಗಳನ್ನು ಗೌರವಿತವಾಗಿ ಅಂತ್ಯಕ್ರಿಯೆಗೆ ಹೆಚ್ಚುವರಿ ಮೂರು ಚಿತಾಗಾರ ಸ್ಥಾಪನೆ, ಎಬಿಸಿ ಕೇಂದ್ರದ ಕೆನಲ್ ಸಾಮರ್ಥ್ಯ ಹೆಚ್ಚಳಕ್ಕೆ ಪ್ರಿ ಫ್ಯಾಬ್ರಿಕೇಟೆಡ್ ಕಂಟೈನರ್ ಖರೀದಿ, ಆಕ್ರಮಣಕಾರಿ ಬೀದಿನಾಯಿಗಳ ವೀಕ್ಷಣಕೇಂದ್ರ ಸ್ಥಾಪನೆ ಸೇರಿದಂತೆ ಮೊದಲಾದ ಯೋಜನೆ ಜಾರಿ ಸಾಧ್ಯತೆ ಇದೆ.
ಪ್ರತ್ಯೇಕ ಕಂಪನಿ ಸ್ಥಾಪನೆ :
ರಾಜ್ಯ ಸರ್ಕಾರದ ಬಜೆಟ್ನಲ್ಲಿ ನಗರ ವಿವಿಧ ಅನುಷ್ಠಾನ ಮಾಡಲಾಗಿದೆ. ಆ ನಿಟ್ಟಿನಲ್ಲಿ ಸುರಂಗ ರಸ್ತೆ, ಸ್ಕೈಡಕ್, ವೈಟ್-ಟಾಪಿಂಗ್ ಮತ್ತು ಫ್ಲೈಓವರ್ಗಳಂತಹ ದೊಡ್ಡ ಯೋಜನೆಗಳಿಗೆ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಪ್ರತ್ಯೇಕ ಕಂಪನಿ ಸ್ಥಾಪಿಸುವ ಬಗ್ಗೆ ಅಧಿಕೃತ ಘೋಷಣೆ ಸಾಧ್ಯತೆ ಇದೆ.