ಹಾಸನ: ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರು ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿ, ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ ಮತ್ತು ಅಭಿಮಾನದ ಮುಂದೆ ಒಂದಿಬ್ಬರ ನಕಾರಾತ್ಮಕ ಟೀಕೆಗಳು ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ಕೋಟ್ಯಾಂತರ ಕನ್ನಡಿಗರು ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲೋ ಒಂದಿಬ್ಬರು ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ನೀಡಬೇಕು? ಅದರ ಅಗತ್ಯವೇ ಇಲ್ಲ. ಈ ಟೀಕೆಗೆ ಜನರೇ ಪ್ರತಿಕ್ರಿಯೆ ಕೊಡುತ್ತಾರೆ,” ಎಂದರು.
ರಾಜಕೀಯ ಟೀಕೆಗೆ ಉತ್ತರ
ರಾಜಕೀಯ ಮಾಡೋದಕ್ಕೆ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಅಗತ್ಯವಿದೆಯಾದರೂ, ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕೋ ಅದರಲ್ಲಿ ಮಾಡಬೇಕು. ಆ ಬಗ್ಗೆ ಪ್ರಜ್ಞೆ ಸಕ್ರೀಯ ರಾಜಕಾರಣದಲ್ಲಿರುವವರಿಗೆ ಇರಬೇಕು ಎಂದು ಟೀಕಿಸಿದ ರಾಜಕಾರಣಿಗಳಿಗೆ ಕುಟುಕಿದರು.
“ನಾನು ಬಿಜೆಪಿ ಪಕ್ಷದಲ್ಲಿ ಮೈಸೂರು ಸಂಸದ ಯದುವೀರ್ ಅವರಂತಹ ಸಂತತಿ ಹೆಚ್ಚಾಗಲಿ ಎಂಬುದಾಗಿ ಆಶಿಸುತ್ತೇನೆ. ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದಂತೆ ಹೇಳಿಕೆ ನೀಡಬೇಕು. ಅವರವರ ಮಟ್ಟಕ್ಕೆ ತಕ್ಕಂತೆ ಅವರು ಮಾತನಾಡುತ್ತಾರೆ. ಮಾತನಾಡಲಿ ಬಿಡಿ,” ಎಂದು ತಿರುಗೇಟು ನೀಡಿದರು.
ವಿವಾದದ ಹಿನ್ನೆಲೆ:
ಮೈಸೂರು ದಸರಾ 2025 ರ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದು ಬಿಜೆಪಿ ನಾಯಕರಿಂದ ಟೀಕೆಗೆ ಗುರಿಯಾಗಿದೆ. ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, ಕೆಲವರು ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು. ಆದರೆ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಮತೋಲಿತ ಪ್ರತಿಕ್ರಿಯೆ ನೀಡಿ, “ದೇವತೆಯನ್ನು ಗೌರವಿಸಿದರೆ ಯಾವುದೇ ಆಕ್ಷೇಪಣೆಯಿಲ್ಲ,” ಎಂದಿದ್ದರು.
ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧರಾಗಿದ್ದು, 2025 ರಲ್ಲಿ ಬೂಕರ್ ಪ್ರಶಸ್ತಿ ಗೆದ್ದಿದ್ದಾರೆ. ಅವರ ಕೃತಿ ‘ಹಾರ್ಟ್ ಲ್ಯಾಂಪ್’ ಕನ್ನಡದಿಂದ ಇಂಗ್ಲಿಷ್ಗೆ ಅನುವಾದಗೊಂಡು ಪ್ರಶಸ್ತಿ ಪಡೆದಿದೆ.





