ಮೃತ್ಯುರೂಪಿಯಾಗಿ ಬಂದ ಮಳೆ: ಚಲಿಸುತ್ತಿದ್ದ ವ್ಯಾನ್ ಮೇಲೆ ಬಿದ್ದ ಬೃಹತ್ ಮರ, ಚಾಲಕನ ಸ್ಥಿತಿ ಗಂಭೀರ!

BeFunky collage (3)

ಸಿಲಿಕಾನ್ ಸಿಟಿಯಲ್ಲಿ ವರುಣನ ಅಟ್ಟಹಾಸ ಮುಂದುವರಿದಿದ್ದು, ಇಂದು ಸಂಜೆ ಸಂಭವಿಸಿದ ಭೀಕರ ಅಪಘಾತವೊಂದು ನಗರವನ್ನು ಬೆಚ್ಚಿಬೀಳಿಸಿದೆ. ರಾಮಕೃಷ್ಣ ಆಶ್ರಮದ ಬಳಿ ಚಲಿಸುತ್ತಿದ್ದ ಈಕೊ ವ್ಯಾನ್ (Eeco Van) ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಖಂಗೊಂಡ ವಾಹನ, ಚಾಲಕನ ಸ್ಥಿತಿ ಚಿಂತಾಜನಕ:

ಮರ ಬಿದ್ದ ತೀವ್ರತೆಗೆ ಈಕೊ ವ್ಯಾನ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಬ್ಬಿಣದ ಶೀಟ್‌ಗಳ ನಡುವೆ ಚಾಲಕ ಸಿಲುಕಿಕೊಂಡಿದ್ದರು. ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಚಾಲಕನನ್ನು ತಕ್ಷಣವೇ ಹೊರತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಚಾಲಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಸಿ ಜನರಲ್ ಆಸ್ಪತ್ರೆ ಬಳಿಯೂ ಮರ ಪತನ :

ಮಳೆಯ ಆರ್ಭಟ ಕೇವಲ ರಾಮಕೃಷ್ಣ ಆಶ್ರಮಕ್ಕೆ ಸೀಮಿತವಾಗಿಲ್ಲ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿಯೂ ಬೃಹತ್ ಗಾತ್ರದ ಮರವೊಂದು ಧರೆಗುರುಳಿದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಆಂಬ್ಯುಲೆನ್ಸ್ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ.

ಹೈರಾಣಾದ ಸವಾರರು: 

ಮರ ಬಿದ್ದ ಪರಿಣಾಮ ಶ್ರೀರಾಂಪುರ ಹಾಗೂ ರಾಜಾಜಿನಗರ ಕಡೆಗೆ ಹೋಗುವ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಬೈಕ್ ಸವಾರರ ಪರದಾಟ: ಮಳೆಯಲ್ಲಿ ನೆನೆಯುತ್ತಲೇ ಬೈಕ್ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವಂತಾಗಿದೆ.

ಟ್ರಾಫಿಕ್ ಜಾಮ್: ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳನ್ನು ಸುಗಮಗೊಳಿಸಲು ಸಂಚಾರ ಪೊಲೀಸರು ಮಳೆಯಲ್ಲೇ ಹರಸಾಹಸ ಪಡುತ್ತಿದ್ದಾರೆ.

ಸಿಲಿಕಾನ್ ಸಿಟಿ ಮಂದಿ ಮಳೆಯ ಈ ರೌದ್ರಾವತಾರಕ್ಕೆ ಕಂಗಾಲಾಗಿದ್ದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಸೂಚಿಸಲಾಗಿದೆ.

Exit mobile version