ಬೆಂಗಳೂರು: ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ ಜಯಂತಿಯ ಪ್ರಯುಕ್ತ ಆಯೋಜಿಸಲಾದ ಬೆಂಗಳೂರು ಬಂಡಿದೇವರ ಉತ್ಸವ ಮೂರು ದಿನಗಳ ಕಾಲ ನಗರದಲ್ಲಿ ವಿಜೃಂಭಣೆಯಿಂದ ನಡೆಯಿತು. ಎರಡನೇ ದಿನವಾದ ಜೂನ್ 26ರಂದು, ನಗರದ ಹೃದಯಭಾಗದಲ್ಲಿ ಈ ಉತ್ಸವವು ಸಡಗರ-ಸಂಭ್ರಮದಿಂದ ಆಚರಿಸಲ್ಪಟ್ಟಿತು. ಬಿಬಿಎಂಪಿ ಕಚೇರಿ ಆವರಣದಲ್ಲಿರುವ ಕೆಂಪೇಗೌಡರ ಪುತ್ಥಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಉತ್ಸವದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ರೈತಾಪಿ ವರ್ಗವನ್ನು ಪ್ರತಿನಿಧಿಸುವ 20ಕ್ಕೂ ಹೆಚ್ಚು ಅಲಂಕೃತ ಎತ್ತಿನ ಬಂಡಿಗಳು ಭಾಗವಹಿಸಿದವು. ಈ ಬಂಡಿಗಳಲ್ಲಿ ಕೆಂಪೇಗೌಡರ ಪೂರ್ವಿಕರಾದ ಕೆಂಪಣ್ಣಸ್ವಾಮಿ ಮತ್ತು ಶ್ರೀ ವೀರಣ್ಣ ಸ್ವಾಮಿಯ ಉತ್ಸವ ಮೂರ್ತಿಗಳನ್ನಿಟ್ಟು, ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಿಸಲಾಯಿತು. ತದನಂತರ, ಮೆರವಣಿಗೆಯು ಹಡ್ಸನ್ ಸರ್ಕಲ್, ಕಬ್ಬನ್ ಪಾರ್ಕ್ನ ಸೆಂಟ್ರಲ್ ಲೈಬ್ರರಿ, ಹೈಕೋರ್ಟ್ ಆವರಣ, ಗೋಪಾಲ್ ಗೌಡ ಸರ್ಕಲ್ ಮೂಲಕ ಸಾಗಿ ವಿಧಾನಸೌಧದ ಬಳಿಯ ಕೆಂಪೇಗೌಡರ ಪ್ರತಿಮೆಯ ಬಳಿ ಸಮಾಪ್ತಿಯಾಯಿತು. ಸುಮಾರು 2,000 ಜನ ಈ ವೈಭವದ ಮೆರವಣಿಗೆಯಲ್ಲಿ ಭಾಗವಹಿಸಿದರು.
ವಿಧಾನಸೌಧದ ಆವರಣದ ಕೆಂಪೇಗೌಡರ ಪ್ರತಿಮೆಗೆ ಮೆರವಣಿಗೆ ತಲುಪಿದ ಬಳಿಕ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾತನಾಡಿ, “ಬಂಡಿದೇವರ ಉತ್ಸವವು ನಮ್ಮ ಸಂಸ್ಕೃತಿಯ ಬೇರುಗಳೊಂದಿಗೆ ನಮ್ಮನ್ನು ಸಂಪರ್ಕಿಸುವ ಆಚರಣೆಯಾಗಿದೆ. ಈ ಉತ್ಸವವು ಗ್ರಾಮೀಣ ಪ್ರದೇಶಗಳಿಂದ ಈಗ ನಗರಕ್ಕೂ ವಿಸ್ತರಿಸಿರುವುದು ಸಂತಸದಾಯಕ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸೋಣ,” ಎಂದರು.
“ರೈತ ಬಾಂಧವರು ಸಂಭ್ರಮದಿಂದ ಈ ಬಂಡಿದೇವರ ಉತ್ಸವವನ್ನು ಆಯೋಜಿಸಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಈ ಪ್ರಯತ್ನ ಸಂತೋಷದಾಯಕ. ಸುಮ್ಮನಹಳ್ಳಿಯ 5 ಎಕರೆ ಜಾಗದಲ್ಲಿ ಕೆಂಪೇಗೌಡರ ಭವನಕ್ಕೆ ಶಂಕುಸ್ಥಾಪನೆ ಶೀಘ್ರದಲ್ಲಿ ನಡೆಯಲಿದೆ. ಈ ಯೋಜನೆಗೆ 100 ಕೋಟಿ ರುಪಾಯಿ ಮೀಸಲಿಡಲಾಗಿದ್ದು, ಕೆಂಪೇಗೌಡರ ಹೆಸರಿನಲ್ಲಿ ಗ್ರಂಥಾಲಯಗಳನ್ನು ತೆರೆಯಲು ಯೋಜಿಸಿದ್ದೇವೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಂಡಿದೇವರ ಉತ್ಸವವು ಬೆಂಗಳೂರಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಗೌರವಿಸುವ ಕಾರ್ಯಕ್ರಮವಾಗಿದೆ. ಈ ಉತ್ಸವವು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸುವ ಜೊತೆಗೆ, ರೈತಾಪಿ ಸಮುದಾಯದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸಹಾಯಕವಾಗಿದೆ. ಈ ಆಚರಣೆಯು ಗ್ರಾಮೀಣ ಮತ್ತು ನಗರ ಸಂಪರ್ಕವನ್ನು ಬಲಗೊಳಿಸುವ ಸೇತುವೆಯಾಗಿದೆ.
ಕಾರ್ಯಕ್ರಮದಲ್ಲಿ ಗಣ್ಯರು, ರೈತರು ಮತ್ತು ಸ್ಥಳೀಯರು ಸೇರಿದಂತೆ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಉತ್ಸವದಲ್ಲಿ ಮಾಜಿ ಸಚಿವ ಮತ್ತು ಮಹಾಲಕ್ಷ್ಮಿಪುರ ಶಾಸಕ ಗೋಪಾಲಯ್ಯ, ಹಿರಿಯ ಐಆರ್ಎಸ್ ಅಧಿಕಾರಿ ಹಾಗೂ ಉತ್ಸವ ಸಮಿತಿಯ ಗೌರವಾಧ್ಯಕ್ಷ ಜಯರಾಮ್ ರಾಯಪುರ, ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಕಾರ್ಯದರ್ಶಿ ಎಂ. ಅಮರೇಶ್, ಉಪಾಧ್ಯಕ್ಷ ನಾಗರಾಜ್ (ನಿವೃತ್ತ ಎಸ್ಪಿ), ಹಿರಿಯ ಉಪಾಧ್ಯಕ್ಷ ಗೋವಿಂದೇಗೌಡ, ಕೆಂಪೇಗೌಡ ಸಂಶೋಧನಾ ಪರಿಷತ್ನ ಪ್ರಧಾನ ಕಾರ್ಯದರ್ಶಿ ಜೆ. ನಾಗರಾಜ್, ಡಾ. ಬಿ.ಎಸ್. ಪುಟ್ಟಸ್ವಾಮಿ, ದಿವ್ಯಾ ರಂಗೇನಹಳ್ಳಿ, ಡಾ. ಸುನಿತಾ, ದಿವ್ಯಾ ಹರ್ಷ, ಡಾ. ಬಿ. ಪಾಂಡುಕುಮಾರ್, ಎನ್. ಆರ್. ಧನಂಜಯ, ಮ್ಯಾಗೇರಿ ನಾರಾಯಣಸ್ವಾಮಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಪ್ರೊ. ಜಯಪ್ರಕಾಶಗೌಡ, ಎಸ್. ಎ. ಪುಟ್ಟರಾಜು, ಎಂ. ಎ. ಮದನ್ ಕುಮಾರ್, ಹಳ್ಳಿಕಾರ್ ದೊಡ್ಡಗೌಡ, ಉಮಾ ಬಸವರಾಜ್, ಭಾರತಿ ಜಯರಾಮ್ ಮತ್ತು ಫಸ್ಟ್ ಸರ್ಕಲ್ ಸಂಘಟನೆಯವರು ಉಪಸ್ಥಿತರಿದ್ದರು.