ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ನಂತರ ನಗರದಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತಿರುವಾಗಲೇ ಮತ್ತೊಮ್ಮೆ ಕಿಲ್ಲಾ ಓಣಿ ಪ್ರದೇಶದಲ್ಲಿ ಕಲ್ಲು ಎಸೆತ ಘಟನೆ ಸಂಭವಿಸಿದೆ. ಇಂದು ಹಿಂದು ಮುಖಂಡರ ಸಭೆ ನಡೆದ ನಂತರ ಕಾರ್ಯಕರ್ತರು ಅಂಗಡಿ-ಮುಂಗಟ್ಟು ಬಂದ್ ಮಾಡಿಸಲು ಹೊರಟಾಗ ಕಲ್ಲು ತೂರಾಟ ನಡೆದಿದೆ. ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ್ದಾರೆ.
ಘಟನೆಯ ವಿವರ ಇಂದು ಬೆಳಿಗ್ಗೆ ಹಿಂದು ಸಂಘಟನೆಗಳ ಮುಖಂಡರು ಸಭೆ ನಡೆಸಿ ನಗರದಲ್ಲಿ ಬಂದ್ ಮಾಡಿಸಲು ಯೋಜನೆ ಹಾಕಿಕೊಂಡಿದ್ದರು. ಸಭೆ ಮುಗಿದ ನಂತರ ಕಾರ್ಯಕರ್ತರು ಕಾಯಿಪಲ್ಲೆ (ತರಕಾರಿ) ಮಾರುಕಟ್ಟೆಯತ್ತ ತೆರಳಿದ್ದರು. ಈ ವೇಳೆ ಕಿಲ್ಲಾ ಓಣಿ ಬಳಿ ಮತ್ತೊಮ್ಮೆ ಕಲ್ಲು ತೂರಾಟ ನಡೆದಿದೆ. ಕಲ್ಲುಗಳು ತರಕಾರಿ ಮಾರಾಟಕ್ಕೆ ಬಂದವರ ಬಳಿ ಬಿದ್ದಿವೆ. ಘಟನೆಯಿಂದ ಆಕ್ರೋಶಗೊಂಡು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರು ಉದ್ರಿಕ್ತರನ್ನು ತಡೆಯಲು ರಸ್ತೆಯಲ್ಲಿ ಅಟ್ಟಾಡಿಸಿ ಲಾಠಿ ಬೀಸಿದ್ದಾರೆ. ಲಾಠಿಚಾರ್ಜ್ನಿಂದ ಹಲವರು ಚದುರಿ ಹೋಗಿದ್ದು, ಸ್ಥಳದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಹೆಚ್ಚುವರಿ ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದೆ.
ಹಿಂದಿನ ಘಟನೆಯ ನೆನಪು ಇದಕ್ಕೂ ಮೊದಲು ಶಿವಾಜಿ ಜಯಂತಿ ಮೆರವಣಿಗೆ ವೇಳೆ ಪಂಕಾ ಮಸೀದಿ ಬಳಿ ಕಲ್ಲು-ಚಪ್ಪಲಿ ತೂರಾಟ ನಡೆದಿತ್ತು. ಆ ಘಟನೆಯಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದ್ದು, ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈಗ ಮತ್ತೊಮ್ಮೆ ಅದೇ ಪ್ರದೇಶದಲ್ಲಿ ಘಟನೆ ಪುನರಾವರ್ತನೆಯಾಗುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.
ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು, ಕಲ್ಲು ಎಸೆದವರನ್ನು ಗುರುತಿಸಿ ಬಂಧಿಸುವ ಕಾರ್ಯಾಚರಣೆ ಮುಂದುವರೆದಿದೆ. ಸಾರ್ವಜನಿಕರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.