ಪತ್ನಿ ಅನೈತಿಕ ಸಂಬಂಧ ಶಂಕೆ: ಮದ್ಯ ಕುಡಿಸಿ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಂದ ಯುವಕ

BeFunky collage 2026 02 03T123733.185

ಪತ್ನಿಯೊಂದಿಗೆ ಸ್ನೇಹಿತನಿಗೆ ಅನೈತಿಕ ಸಂಬಂಧವಿದೆ ಎಂಬ ಶಂಕೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖಾನಾಪುರ ಎಸ್‌ಕೆ ಗ್ರಾಮದ ಸಮೀಪದ ಮಾವಿನ ತೋಟದಲ್ಲಿ ಭಾನುವಾರ ನಡೆದ ಭೀಕರ ಘಟನೆಯಲ್ಲಿ ಸ್ನೇಹಿತನೇ ಆತನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.

ಮೃತ ವ್ಯಕ್ತಿ ಖಾನಾಪುರ ಎಸ್‌ಕೆ ಗ್ರಾಮದ ಸೋಮಶೇಖರ್ ಕಿಳ್ಳಿಕೇತರ (45). ಆರೋಪಿ ಸಂಜೀವ್ ಕಿಳ್ಳಿಕೇತರ (28), ಬಾದಾಮಿ ತಾಲ್ಲೂಕಿನ ಕಾಕನೂರು ಗ್ರಾಮದ ನಿವಾಸಿ. ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು ಮತ್ತು ಮದ್ಯಪಾನಕ್ಕೆ ಜೊತೆಯಾಗುತ್ತಿದ್ದರು.

ಸಂಜೀವ್‌ಗೆ ತನ್ನ ಪತ್ನಿಯೊಂದಿಗೆ ಸೋಮಶೇಖರ್ ಅತಿಯಾದ ಸಲುಗೆ ತೋರುತ್ತಿದ್ದ ಮತ್ತು ಫೋನ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದ ಎಂಬ ಅನುಮಾನ ಬಂತು. ಈ ಬಗ್ಗೆ ಸೋಮಶೇಖರ್‌ಗೆ ಎಚ್ಚರಿಕೆ ನೀಡಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ.

ಆದರೂ ಭಾನುವಾರ ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮಾವಿನ ತೋಟದಲ್ಲಿ ಮದ್ಯಪಾನ ಮಾಡುತ್ತಿದ್ದರು. ಸೋಮಶೇಖರ್‌ಗೆ ಕಂಠಪೂರ್ತಿ ಮದ್ಯ ಕುಡಿಸಿದ ಸಂಜೀವ್, ಆತ ಪೂರ್ತಿ ನಶೆಯಲ್ಲಿದ್ದಾಗ ಕಲ್ಲಿನಿಂದ ತಲೆ ಮತ್ತು ಮುಖವನ್ನು ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಭಾನುವಾರದಿಂದ ಸೋಮಶೇಖರ್ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಶೋಧ ನಡೆಸಲಾಗಿತ್ತು. ಸೋಮವಾರ ಮಾವಿನ ತೋಟದಲ್ಲಿ ರಕ್ತಮುಚ್ಚಿದ ಶವ ಪತ್ತೆಯಾಗಿ ಕೊಲೆ ದೃಢಪಟ್ಟಿದೆ. ಬಾದಾಮಿ ಪೊಲೀಸರು ಮತ್ತು ಬಾಗಲಕೋಟೆ ಜಿಲ್ಲಾ ಪೊಲೀಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಸಂಜೀವ್ ಕಿಳ್ಳಿಕೇತರ್‌ನ್ನು ಪೊಲೀಸರು ಬಂಧಿಸಿದ್ದು, ಬಾದಾಮಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ.

Exit mobile version