ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಹಿತಾ ಪಾತ್ರದಲ್ಲಿ ನಟಿಸಿರುವ ಬಾಲಕಿ ಮಹಿತಾ, ತನ್ನ ಭಾವನಾತ್ಮಕ ಮತ್ತು ಮೂಕಿಯಾಗಿರುವ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾಳೆ. “ಅಮ್ಮಾ” ಎಂದು ಕೂಗುವ ದೃಶ್ಯದಲ್ಲಿ ಈ ಪುಟಾಣಿಯ ನಟನೆ ಎಂತಹವರ ಕಣ್ಣಲ್ಲೂ ನೀರು ತರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಯ ಮಹಾಪೂರವೇ ಹರಿದುಬಂದಿದ್ದು, ಮಹಿತಾಳ ಪ್ರತಿಭೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ನಾ ನಿನ್ನ ಬಿಡಲಾರೆ:
ನಾ ನಿನ್ನ ಬಿಡಲಾರೆ ಧಾರಾವಾಹಿಯ ಕಥೆ ಶರತ್ ಮತ್ತು ಅಂಬಿಕಾ ದಂಪತಿಗಳ ಸುತ್ತ ಸುತ್ತುತ್ತದೆ. ಇವರ ಮಗಳು ಹಿತಾಳೇ ಈ ಕುಟುಂಬದ ಕೇಂದ್ರಬಿಂದು. ಆದರೆ, ಶರತ್ನನ್ನು ತನ್ನ ವಶಪಡಿಸಿಕೊಳ್ಳಲು ಯತ್ನಿಸುವ ಮಾಯಾ ಎಂಬ ಖಳನಾಯಕಿ, ಅಂಬಿಕಾಳನ್ನು ಕೊಂದುಬಿಡುತ್ತಾಳೆ. ತಾಯಿಯ ಸಾವಿನ ಆಘಾತದಿಂದ ಹಿತಾ ಮೂಕಿಯಾಗುತ್ತಾಳೆ. ತಂದೆಯೇ ತಾಯಿಯ ಸಾವಿಗೆ ಕಾರಣ ಎಂದು ತಪ್ಪಾಗಿ ಭಾವಿಸಿ, ಮಾತನಾಡುವುದನ್ನೇ ಬಿಡುತ್ತಾಳೆ. ಇತ್ತ, ಮಾಯಾ ಹಿತಾಳನ್ನು ತನ್ನ ದಾರಿಯಿಂದ ತೆಗೆದುಹಾಕಲು ಕೊಲೆಗೆ ಸಂಚು ರೂಪಿಸುತ್ತಾಳೆ.
ಆದರೆ, ಸತ್ತ ತಾಯಿ ಅಂಬಿಕಾಳ ಆತ್ಮವು ಮಗಳ ರಕ್ಷಣೆಗೆ ಬಂದು ನಿಲ್ಲುತ್ತದೆ. ಶರತ್ನ ಕಚೇರಿಯಲ್ಲಿ ಕೆಲಸ ಮಾಡುವ ದುರ್ಗಾಳ ಗುಣಮುಗ್ಧಳಾದ ಹಿತಾ, ಆಕೆಯಿಂದ ತಾಯಿಯ ಪ್ರೀತಿಯನ್ನು ಪಡೆಯುತ್ತಾಳೆ. ಆದರೆ, ದುರ್ಗಾಗೆ ಈ ಸಂಗತಿಯ ಅರಿವಿರುವುದಿಲ್ಲ. ಇದೀಗ, ದುರ್ಗಾಳನ್ನು ಅಪಘಾತದಿಂದ ರಕ್ಷಿಸಲು ಹೋಗಿ ಆಕೆಯೇ ಅಪಘಾತಕ್ಕೀಡಾಗುತ್ತಾಳೆ. ದೇವಿಯೊಬ್ಬಳು ಅಜ್ಜಿಯ ರೂಪದಲ್ಲಿ ಬಂದು, “ದುರ್ಗಾಳನ್ನು ರಕ್ಷಿಸಲು ನೀನು ಮಾತನಾಡಲೇಬೇಕು” ಎಂದು ಹಿತಾಳಿಗೆ ಹೇಳುತ್ತಾಳೆ. ಈ ಭಾವನಾತ್ಮಕ ದೃಶ್ಯದಲ್ಲಿ ಹಿತಾಳ ಮಾತನಾಡುವ ಪ್ರಯತ್ನವು ವೀಕ್ಷಕರ ಕಣ್ಣೀರಿಗೆ ಕಾರಣವಾಗಿದೆ.
ಮಹಿತಾ: ಪುಟ್ಟ ತಾರೆಯ ಕತೆ
ಹಿತಾ ಪಾತ್ರದಲ್ಲಿ ನಟಿಸಿರುವ ಮಹಿತಾ, ಕನ್ನಡ ಟೆಲಿವಿಷನ್ನ ಉದಯೋನ್ಮುಖ ತಾರೆಯಾಗಿದ್ದಾಳೆ. ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸೇರಿದಂತೆ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಆಕೆ, ಚುಕ್ಕಿತಾರೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದಳು. ಇದೀಗ, ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ತನ್ನ ಸಹಜವಾದ ನಟನೆಯಿಂದ ಎಲ್ಲರ ಮನಗೆದ್ದಿದ್ದಾಳೆ.
ಮಹಿತಾಳ ತಾಯಿ ತನುಜಾ, ಮಾಧ್ಯಮದೊಂದಿಗೆ ಮಾತನಾಡಿ, “ಕೋವಿಡ್ ಸಮಯದಲ್ಲಿ ಅರಿವು ಮೂಡಿಸುವ ವಿಡಿಯೋಗಳನ್ನು ತಯಾರಿಸುವಾಗ ಮಹಿತಾಳ ನಟನೆಯ ಪ್ರತಿಭೆಯನ್ನು ಗುರುತಿಸಿದೆ. ಆಕೆಯ ಆಸಕ್ತಿಗೆ ನಾನು ಯಾವತ್ತೂ ಒತ್ತಡ ಹಾಕದೆ, ಬೆಂಬಲ ನೀಡಿದೆ. ಒಳ್ಳೆಯ ವೇದಿಕೆ ಸಿಕ್ಕಿದ್ದರಿಂದ ಆಕೆ ಇಂದು ಈ ಸ್ಥಾನದಲ್ಲಿದ್ದಾಳೆ” ಎಂದಿದ್ದಾರೆ. ಮಹಿತಾ ಶಾಲೆ ಮತ್ತು ಧಾರಾವಾಹಿಯ ಚಿತ್ರೀಕರಣ ಎರಡನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾಳೆ.
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಶರತ್ ಪಾತ್ರದಲ್ಲಿ ಪಾರು ಧಾರಾವಾಹಿಯಿಂದ ಖ್ಯಾತಿಗಳಿಸಿದ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದಾರೆ. ಅಂಬಿಕಾಳಾಗಿ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ಗೆ ಜೋಡಿಯಾಗಿದ್ದ ನೀತಾ ಅಶೋಕ್, ದುರ್ಗಾಳಾಗಿ ರಿಷಿಕಾ, ಮತ್ತು ಖಳನಾಯಕಿ ಮಾಯಾಳಾಗಿ ರುಹಾನಿ ಶೆಟ್ಟಿ ನಟಿಸಿದ್ದಾರೆ. ಕುಟುಂಬದ ಯಜಮಾನಿಯ ನಕಾರಾತ್ಮಕ ಪಾತ್ರದಲ್ಲಿ ವೀಣಾ ಸುಂದರ್ ಮತ್ತು ರಂಗಭೂಮಿ ಕಲಾವಿದ ಬಾಬು ಹಿರಣ್ಯ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.