ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮತ್ತೆ ಅಶ್ಲೀಲ ಕಾಮೆಂಟ್ ಕಾಟ: ನಕಲಿ ಖಾತೆ ವಿರುದ್ಧ ದೂರು

Untitled design 2026 06 10T170732.111

ಬೆಂಗಳೂರು, ಜೂನ್ 10: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ನಕಲಿ ಖಾತೆಗಳ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಪದಗಳನ್ನು ಬಳಸಿ ನಿಂದಿಸುತ್ತಿರುವ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ವಿಜಯಲಕ್ಷ್ಮಿ ಅವರು ಸೈಬರ್ ಪೊಲೀಸರಿಗೆ (Cyber Police) ದೂರು ನೀಡಿದ್ದಾರೆ. ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

“ಜಲಗಾರ ಯೂನಿವರ್ಸಿಟಿ” ಹೆಸರಿನ ನಕಲಿ ಖಾತೆ ಸೃಷ್ಟಿ

ವಿಜಯಲಕ್ಷ್ಮಿ ಅವರನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು “ಜಲಗಾರ ಯೂನಿವರ್ಸಿಟಿ” (Jalagara University) ಎಂಬ ಹೆಸರಿನ ಇನ್ಸ್ಟಾಗ್ರಾಮ್ ನಕಲಿ ಖಾತೆಯನ್ನು ತೆರೆದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಅವರು ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗಿದ್ದ ವಿಡಿಯೋವನ್ನು ಇಟ್ಟುಕೊಂಡು ಅತ್ಯಂತ ವಿಕೃತ ಹಾಗೂ ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡಲಾಗಿದೆ.

ಧನ್ವೀರ್ ವಿಡಿಯೋಗಳನ್ನು ಬಳಸಿ ತೇಜೋವಧೆ

ಇಷ್ಟೇ ಅಲ್ಲದೆ, ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಅವರ ತೇಜೋವಧೆ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ ಎಂದು ಬರೆದು, ರ್ಯಾಪಿಡ್ ಡ್ರೈವರ್ (Rapid Driver) ಕಾರಿನಲ್ಲಿ ಓಡಾಟ ನಡೆಸುತ್ತಿದ್ದಾರೆ ಎಂದು ನಿಂದನಾತ್ಮಕ ಪೋಸ್ಟ್‌ಗಳನ್ನು ಹರಿಬಿಡಲಾಗಿದೆ.

“ದೂರು ನೀಡಬೇಡಿ” ಎಂದು ಫೀಸ್ ಕೇಳುವ ಕಿಡಿಗೇಡಿಗಳು

ಅದೇ ಪೋಸ್ಟ್ ನ ಕೊನೆಯಲ್ಲಿ ಕಿಡಿಗೇಡಿಗಳು ವಿಜಯಲಕ್ಷ್ಮಿಗೆ ಕಂಪ್ಲೇಂಟ್ ಕೊಡಬೇಡಿ ಎಂದು ಹೇಳಿ, ಫೀಸ್ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಗಂಡ ಜೈಲಿನಲ್ಲಿದ್ದಾನೆ ಎಂದು ಬರೆದು ಮಾನಸಿಕವಾಗಿ ಕೆಡವಲು ಯತ್ನಿಸಲಾಗುತ್ತಿದೆ. ಆದರೆ, ಸತತವಾಗಿ ನಡೆಯುತ್ತಿರುವ ಈ ಟ್ರೋಲಿಂಗ್, ಅಶ್ಲೀಲ ನಿಂದನೆಯಿಂದ ಬೇಸತ್ತಿರುವ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ.

ಸೈಬರ್ ಪೊಲೀಸರ ಬಲೆ: ನಕಲಿ ಖಾತೆಗಳ ಪತ್ತೆಗೆ ತನಿಖೆ

ವಿಜಯಲಕ್ಷ್ಮಿ ಅವರ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರುವ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರು, ನಕಲಿ ಅಕೌಂಟ್‌ಗಳ ಮೂಲಕ ಅಶ್ಲೀಲ ಕಾಮೆಂಟ್ ಮಾಡುತ್ತಿರುವ ಐಪಿ ಅಡ್ರೆಸ್‌ಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಹಾಗೂ ಮಾನಹಾನಿಕರ ಪೋಸ್ಟ್‌‌ಗಳನ್ನು ಹಾಕುವ ಇಂತಹ ಟ್ರೋಲ್ ಪೇಜ್‌ಗಳ ಅಡ್ಮಿನ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಹಿಂದೆಯೂ ನೀಡಿದ್ದ ದೂರು: 15 ಐಡಿ, 150+ ಕಾಮೆಂಟ್‌ಗಳು

ಈ ಹಿಂದೆಯೂ ವಿಜಯಲಕ್ಷ್ಮಿ ಅವರನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಕೆಟ್ಟ ಕಾಮೆಂಟ್‌ಗಳನ್ನು ಹಾಕುತ್ತಿದ್ದರು. ಆಗಲೂ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದರು. ಕಳೆದ ಡಿಸೆಂಬರ್‌‌ನಲ್ಲಿ ದರ್ಶನ್ ಇದ್ದಾಗ ಯಾರೂ ಮಾತನಾಡುತ್ತಿರಲಿಲ್ಲ. ಈಗ ವೇದಿಕೆ, ಟಿವಿ ಚಾನೆಲ್‌ಗಳಲ್ಲಿ ಮಾತನಾಡುತ್ತಾರೆ. “ದರ್ಶನ್ ಇದ್ದಾಗ ಇವರೆಲ್ಲ ಇದ್ರೋ? ಇರಲಿಲ್ಲವೋ?” ಎಂದು ಪ್ರಶ್ನಿಸಿದ್ದರು. ಆಗ ಅವರು 15 ಇನ್ಸ್ಟಾಗ್ರಾಮ್ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಾಮೆಂಟ್‌ಗಳ ವಿರುದ್ಧ ಫೋಟೋ ಸಮೇತ ದೂರು ದಾಖಲಿಸಿದ್ದರು. ಈಗ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಿಜಯಲಕ್ಷ್ಮಿ ಆಕ್ರೋಶ

ದುಷ್ಕರ್ಮಿಗಳ ಕೃತ್ಯದ ಬಗ್ಗೆ ವಿಜಯಲಕ್ಷ್ಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ವೈಯಕ್ತಿಕ ಜೀವನ, ನನ್ನ ಗಂಡ ಮತ್ತು ನನ್ನ ಕುಟುಂಬದ ಬಗ್ಗೆ ಇಷ್ಟೊಂದು ಕೆಟ್ಟ ರೀತಿಯಲ್ಲಿ ಮಾತನಾಡುವುದು ಅಮಾನವೀಯ. ನಾನು ಮೌನವಾಗಿದ್ದೆ ಎಂದು ಇವರು ಇನ್ನಷ್ಟು ಧೈರ್ಯ ಮಾಡುತ್ತಿದ್ದಾರೆ. ಇನ್ನು ಮುಂದೆ ಯಾರಿಗೂ ಬಿಟ್ಟುಕೊಡುವುದಿಲ್ಲ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಸೈಬರ್ ಕಿರುಕುಳಕ್ಕೆ ಕಡಿವಾಣ ಹಾಕುವಂತೆ ಮನವಿ

ಸೈಬರ್ ಕ್ರೈಮ್ ಪೊಲೀಸರಿಗೆ ಮನವಿ ಸಲ್ಲಿಸಿರುವ ವಿಜಯಲಕ್ಷ್ಮಿ, ಮಹಿಳೆಯರ ಸೈಬರ್ ಕಿರುಕುಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅಪರಾಧಿಗಳು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. 

Exit mobile version