‘ದರ್ಶನ್ ಫ್ಯಾನ್ಸ್‌‌ಗೆ ಮಹಿಳೆಯರನ್ನು ಗೌರವಿಸೋದು ಗೊತ್ತು’: ವಿಜಯಲಕ್ಷ್ಮಿ

Untitled design 2025 12 14T100351.054

ನಟ ದರ್ಶನ್ ತೂಗುದೀಪ ಅವರು ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೂ ಅವರ ನಟನೆಯ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಮೊದಲ ದಿನವೇ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ದರ್ಶನ್ ಅನುಪಸ್ಥಿತಿಯಲ್ಲೂ ಅಭಿಮಾನಿಗಳು ಸಿನಿಮಾವನ್ನು ತಲೆಮೇಲೆ ಹೊತ್ತುಕೊಂಡು ಯಶಸ್ವಿಗೊಳಿಸಿದ್ದಾರೆ. ಕುಟುಂಬ ಸದಸ್ಯರು ಮತ್ತು ಫ್ಯಾನ್ಸ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಇಷ್ಟು ದಿನ ಮೌನವಾಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇದೇ ಮೊದಲ ಬಾರಿಗೆ ಸಂದರ್ಶನ ನೀಡಿ ಮಾತನಾಡಿದ್ದಾರೆ. ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ‘ದಿ ಡೆವಿಲ್’ ಸಿನಿಮಾದ ನಟಿ ರಚನಾ ರೈ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ವೀಡಿಯೋ ಹಂಚಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಪೂರ್ಣ ಸಂದರ್ಶನ ಬಿಡುಗಡೆಯಾಗಲಿದೆ.

ವಿಜಯಲಕ್ಷ್ಮಿ ಅವರು ಸಂದರ್ಶನದಲ್ಲಿ ದರ್ಶನ್ ಬದುಕಿನ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ‘ದಿ ಡೆವಿಲ್’ ಸಿನಿಮಾದ ಯಶಸ್ಸು ತಮಗೆ ಅಪಾರ ಖುಷಿ ನೀಡಿದೆ ಎಂದು ಹೇಳಿದ್ದಾರೆ. “ದರ್ಶನ್ ಇಲ್ಲದಿದ್ದರೂ ಅಭಿಮಾನಿಗಳು ಅವರ ಸಿನಿಮಾವನ್ನು ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಾರೆ ಅನ್ನೋದಕ್ಕೆ ಇದೊಂದು ಉದಾಹರಣೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಹಿ ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ನಾವು ಅದನ್ನು ನಿರೀಕ್ಷಿಸಿರಲಿಲ್ಲ” ಎಂದು ಭಾವುಕರಾಗಿದ್ದಾರೆ.

ನೆಗೆಟಿವ್ ಕಮೆಂಟ್‌ಗಳ ಬಗ್ಗೆ ಮಾತನಾಡಿ, “ಜನರು ನೆಗೆಟಿವ್ ಆಗಿ ಮಾತನಾಡಿದರೂ ನನಗೆ ಪರಿಣಾಮ ಬೀಳಲ್ಲ. ಶೇಕಡ 90ರಷ್ಟು ಜನರು ಪ್ರೀತಿ ತೋರಿಸುತ್ತಾರೆ, ಅದು ಸಾಕು. ನೆಗೆಟಿವ್ ಕಮೆಂಟ್‌ಗಳನ್ನು ನಾನು ಓದುವುದೇ ಇಲ್ಲ” ಎಂದು  ಹೇಳಿದ್ದಾರೆ.

ಅಭಿಮಾನಿಗಳ ಬಗ್ಗೆ ವಿಜಯಲಕ್ಷ್ಮಿ ಅವರ ಮಾತುಗಳು ವೈರಲ್ ಆಗಿದ್ದು, “ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದು ದರ್ಶನ್ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ” ಎಂದು ಹೇಳಿದ್ದಾರೆ. ಇದಲ್ಲದೇ, ಅಭಿಮಾನಿಗಳನ್ನು ‘ಅನಕ್ಷರಸ್ಥರು’ ಎಂದು ಕರೆದವರಿಗೆ ತಿರುಗೇಟು ನೀಡಿದ್ದಾರೆ. “ನಮ್ಮ ಸೆಲೆಬ್ರಿಟಿಸ್ (ಫ್ಯಾನ್ಸ್) ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ” ಎಂದು ಸವಾಲು ಹಾಕಿದ್ದಾರೆ.

Exit mobile version