ಉದಯಪುರ: ಭಾರತೀಯ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವವು ರಾಜಸ್ಥಾನದ ಉದಯಪುರದಲ್ಲಿ ಸಪ್ತಪದಿ ತುಳಿಯಲು ಸಜ್ಜಾಗಿದೆ. ಫೆಬ್ರವರಿ 26ರ ಗುರುವಾರ ಈ ಜೋಡಿ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಕಾಲಿಡಲಿದ್ದು, ಮದುವೆಯ ವಿಶೇಷತೆಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.
ಎರಡು ಸಂಪ್ರದಾಯ, ಎರಡು ವಿವಾಹ
ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೂ, ತಮ್ಮ ಕುಟುಂಬದ ಆಚರಣೆಗಳಿಗೆ ಗೌರವ ನೀಡುವ ಸಲುವಾಗಿ ಒಂದೇ ದಿನ ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಫೆಬ್ರವರಿ 26ರ ಬೆಳಿಗ್ಗೆ ವಿಜಯ್ ದೇವರಕೊಂಡ ಅವರ ಕುಟುಂಬದ ಪದ್ಧತಿಯಂತೆ ತೆಲುಗು ಬ್ರಾಹ್ಮಣ ಸಂಪ್ರದಾಯದಲ್ಲಿ ವಿವಾಹ ಕಾರ್ಯಗಳು ಜರುಗಲಿವೆ. ಬಳಿಕ ಸಂಜೆ ವೇಳೆಗೆ ರಶ್ಮಿಕಾ ಮಂದಣ್ಣ ಅವರ ಕೊಡಗು ಮೂಲದ ವಿಶಿಷ್ಟ ‘ಕೊಡವ’ ಸಂಪ್ರದಾಯದಂತೆ ಮದುವೆ ನಡೆಯಲಿದೆ. ರಶ್ಮಿಕಾ ಕೊಡವ ಶೈಲಿಯ ಸೀರೆಯಲ್ಲಿ ಮಿಂಚಲಿದ್ದು, ಕೊಡಗಿನ ಸಾಂಪ್ರದಾಯಿಕ ಆಚರಣೆಗಳು ಇಲ್ಲಿ ಗಮನ ಸೆಳೆಯಲಿವೆ.
ಈಗಾಗಲೇ ಉದಯಪುರದಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ಆರಂಭವಾಗಿವೆ. ಇಡೀ ಕುಟುಂಬವು ಕ್ರಿಕೆಟ್ ಪಂದ್ಯವನ್ನು ಆಡುವ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಿದೆ. ಇಂದು (ಫೆಬ್ರವರಿ 25) ಬುಧವಾರ ಮೆಹಂದಿ ಮತ್ತು ಸಂಗೀತ ಸಮಾರಂಭಗಳು ನಡೆಯಲಿದ್ದು, ಬಾಲಿವುಡ್ ಮತ್ತು ಸೌತ್ ಶೈಲಿಯ ಹಾಡುಗಳಿಗೆ ಈ ಜೋಡಿ ಹೆಜ್ಜೆ ಹಾಕಲಿದೆ.
ಮದುವೆಗೆ ಕೇವಲ 100 ಜನ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್, ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗಾ, ತರುಣ್ ಭಾಸ್ಕರ್, ರಾಹುಲ್ ರವೀಂದ್ರನ್ ಮತ್ತು ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಸೇರಿದಂತೆ ಹಲವು ಗಣ್ಯರು ಈಗಾಗಲೇ ಸ್ಥಳಕ್ಕೆ ತಲುಪಿದ್ದಾರೆ. ತೆಲುಗು ರಾಜ್ಯಗಳ ಕೆಲವು ಪ್ರಮುಖ ರಾಜಕಾರಣಿಗಳು ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಗಣ್ಯರ ಭದ್ರತೆಯ ದೃಷ್ಟಿಯಿಂದ ಉದಯಪುರ ವಿಮಾನ ನಿಲ್ದಾಣ ಮತ್ತು ಹೋಟೆಲ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹೈದರಾಬಾದ್ನಲ್ಲಿ ಭರ್ಜರಿ ಆರತಕ್ಷತೆ
ಉದಯಪುರದಲ್ಲಿ ಖಾಸಗಿಯಾಗಿ ಮದುವೆ ಮುಗಿಸಿದ ನಂತರ, ಈ ಜೋಡಿ ಚಿತ್ರರಂಗದ ಎಲ್ಲರಿಗಾಗಿ ಮಾರ್ಚ್ 4, 2026 ರಂದು ಹೈದರಾಬಾದ್ನ ತಾಜ್ ಕೃಷ್ಣಾ ಹೋಟೆಲ್ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿ ಟಾಲಿವುಡ್ನ ಮತ್ತು ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳು ಭಾಗವಹಿಸುವ ಸಾಧ್ಯತೆ ಇದೆ.





