‘ಊರಬ್ಬ’ ಚಿತ್ರದಲ್ಲಿ ಗ್ಯಾರಂಟಿ ನ್ಯೂಸ್..ತನಿಷಾ ಹೇಳಿದ್ದೇನು?

ಉಜ್ಜಿನಿ ಚೌಡೇಶ್ವರಿ ಜಾತ್ರೆಯ ನೈಜ ದೃಶ್ಯಕ್ಕೆ ಸಿನಿಮಾ ರೂಪ..!!

Untitled design 2026 06 10T191210.505

ಹಳ್ಳಿಗಳ ತವರು ನಮ್ಮ ಕರುನಾಡು. ಅದ್ರಲ್ಲೂ ಆ ಗ್ರಾಮಗಳಲ್ಲಿನ ವೈವಿಧ್ಯಮಯ ಆಚಾರ, ವಿಚಾರಗಳು, ಸಂಸ್ಕೃತಿಗಳು ಜಾತ್ರೆಗಳು, ಊರ ಹಬ್ಬಗಳ ಮೂಲಕ ಜನರಿಗೆ ಪರಿಚಯ ಆಗುತ್ತೆ. ಸದ್ಯ ಮಾಗಡಿಯ ಉಜ್ಜನಿಯಲ್ಲಿ ನಡೆಯೋ ಚೌಡೇಶ್ವರಿ ಜಾತ್ರೆ ಮೇಲೆ ಒಂದು ಸಿನಿಮಾ ತಯಾರಾಗಿದೆ. ಅದೇ ಊರಬ್ಬ. ಸುಮಾರು 40ಕ್ಕೂ ಅಧಿಕ ನುರಿತ ಕಲಾವಿದರಿರೋ ಈ ಸಿನಿಮಾದ ಜಾತ್ರೆಯಲ್ಲೇ ಸೆರೆ ಹಿಡಿದಿರೋದು ಅಚ್ಚರಿ. ಅದ್ರ ಟ್ರೈಲರ್ ರಿಲೀಸ್ ಆಗಿದ್ದು ಇಂಪ್ರೆಸ್ಸೀವ್ ಆಗಿದೆ. ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ..

ಇದು ಊರಬ್ಬ ಅನ್ನೋ ಹೊಚ್ಚ ಹೊಸ ಸಿನಿಮಾದ ಟ್ರೈಲರ್ ಝಲಕ್. ಮಾಗಡಿ ತಾಲ್ಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ.. ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆ ಇಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್  ಊರಬ್ಬ ಅನ್ನೋ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ, ಸಿದ್ದು ಮೂಲಿಮನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್‌‌ನ ಕುಣಿಗಲ್ ಶಾಸಕ ರಂಗನಾಥ್ ಬಿಡುಗಡೆ ಮಾಡಿ, ಟೀಂಗೆ ಶುಭ ಹಾರೈಸಿದ್ರು.

ಜಾತ್ರೆಯ ನೈಜ ದೃಶ್ಯಗಳನ್ನು ನಿರ್ದೇಶಕರುಗಳಾದ ಎಂ. ಡಿ. ಶ್ರೀಧರ್, ಹೆಚ್. ವಾಸು, ಎ. ವಿ. ಕೃಷ್ಣಕುಮಾರ್, ಬಾಹುಬಲಿ, ಈಶ್ವರ್.. ಹೀಗೆ 5 ಜನ ಸೇರಿ, ಬರೋಬ್ಬರಿ 8 ಕ್ಯಾಮೆರಾಗಳನ್ನ ಬಳಸಿಕೊಂಡು ಚಿತ್ರಿಸಿರೋದು ವಿಶೇಷ. ವೇದಿಕೆಯಲ್ಲಿ ಹೆಚ್. ವಾಸು ಮಾತನಾಡಿ ನಾವೆಲ್ಲಾ ಗೌಡ್ರ ಊರಿಗೆ ಹಬ್ಬಕ್ಕೆ ಅಂತಾನೇ ಹೋಗ್ತಿದ್ದೆವು. ಅಲ್ಲಿ ನಡೆಯುವ ಒಂದಷ್ಟು ತಪ್ಪುಗಳನ್ನು ಇಟ್ಕೊಂಡು ಸಿನಿಮಾ ಮಾಡಿದ್ದೇವೆ. ಎಲ್ಲರೂ ಸೇರಿ ಡೈಲಾಗ್ ಬರೆದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಕಿ ಶಂಕರ್ ಇದು ನಾನು ಮಾಡಿದ್ದಲ್ಲ. ಆ ತಾಯಿ ಚೌಡೇಶ್ವರಿಯೇ ಮಾಡಿಸಿದ್ದು. ಆಕೆಯ ಶಕ್ತಿಯನ್ನು ನಂಬಿ ಈ ಚಿತ್ರ ಮಾಡಿದ್ದೇನೆ. ಹಿಂದಿನಿಂದ ಕಂಟೆಂಟ್ ಬೇಸ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಏನಾದ್ರೂ ವೆರೈಟಿ ಮಾಡೋಣ ಎಂದಾಗ ಈ ಕಾನ್ಸೆಪ್ಟ್ ಹೊಳೆಯಿತು. ಶೂಟಿಂಗ್ ಮಾಡುವಾಗ ಊರ ಜನರ ಸಹಕಾರ ತುಂಬಾ ಇತ್ತು. ಈ ತರಹದ ಪ್ರಾಜೆಕ್ಟ್ ಮಾಡಲು ನಿರ್ಮಾಪಕ ನರೇಶ್ ಗೌಡ್ರು ಸಾಥ್ ನೀಡಿದರು. ಯುಗಾದಿ ಹಬ್ಬದ 15 ದಿನಗಳ ನಂತರ ಈ ಜಾತ್ರೆ ಪ್ರಾರಂಭವಾಗುತ್ತೆ. ಡೈಲಾಗ್ ಬರೆದ ವಾಸು, ಶ್ರೀಧರ್ ಅವರೇ ನಿಜವಾದ ಡೈರೆಕ್ಟರ್. ಅವರ ಸಲಹೆ ತಗೊಂಡು ಇಡೀ ಜಾತ್ರೆಯನ್ನ ಲೈವ್ ಆಗಿ ಶೂಟ್ ಮಾಡಿದ್ದೇವೆ. ಈ ಪ್ರಯತ್ನ ಭಾರತದಲ್ಲೇ ಮೊದಲು. ಸಾವಿರಾರು ವರ್ಷಗಳ ಹಿಂದೆ ನಡೆದ ಇತಿಹಾಸವನ್ನು ತಿಳಿದುಕೊಂಡು ಸಿನಿಮಾ ಮಾಡಿದ್ದೇನೆ ಎಂದರು.

ಪ್ರಮುಖ ಪಾತ್ರಧಾರಿ ಹಾಗೂ ನಿರ್ಮಾಪಕರಾದ ನರೇಶ್ ಗೌಡ್ರು ಮಾತನಾಡಿ ಈ ಸಿನಿಮಾ ಆಗಲು ಮುಖ್ಯ ಕಾರಣ ಲಕ್ಕಿ ಶಂಕರ್. ಸಿನಿಮಾನೇ ಮಾಡಬಾರದು ಎಂದುಕೊಂಡಿದ್ದೆ. ಮಂಗಳವಾರ ಚೌಡೇಶ್ವರಿ ದೇವಿಯ ವಾರ. ಚಿತ್ರದ ಎಲ್ಲಾ ಕೆಲಸಗಳು ಇದೇ ದಿನ ಆಗುತ್ತಿವೆ. ಆರು ಜನ ದಲಿತರಿಗೆ ಜನಿವಾರ ಹಾಕಿಸಿ, ಅಗ್ನಿಕುಂಡ ದಾಟಿಸುತ್ತಾರೆ. ಈ ಚಿತ್ರದಲ್ಲಿ 30 ರಿಂದ 40 ಜನ‌ ಕಲಾವಿದರು ಆ್ಯಕ್ಟ್ ಮಾಡಿದ್ದಾರೆ. ನಾನೂ ಒಂದು ಪಾತ್ರ ಮಾಡಿದ್ದೇನೆ. ಚಿತ್ರಕ್ಕೆ ತುಂಬಾ ಜನ ತಂತ್ರಜ್ಞರು ಕೈ ಜೋಡಿಸಿದ್ದಾರೆ. ನಿಡಸಾಲೆ ಪುಟ್ಟಸ್ವಾಮಯ್ಯ, ಮಿಮಿಕ್ರಿ ಗೋಪಿ, ಸೇರಿದಂತೆ ಬಹಳಷ್ಟು ಸ್ನೇಹಿತರು ನನಗಾಗಿ ಬಂದಿದ್ದಾರೆ ಎಂದರು.

ನಟಿ ತನಿಷಾ ಕುಪ್ಪಂಡ ಮಾತನಾಡುತ್ತಾ.. ಎಲ್ಲರ ಪರಿಶ್ರಮದಿಂದ ಈ ಸಿನಿಮಾ ಆಗಿದೆ. ಊರಬ್ಬಕ್ಕೆ ಹೋಗಿ ಅಲ್ಲಿನ ಪಾತ್ರಧಾರಿಗಳಾಗಿ ನಾವು ಕೆಲಸ ಮಾಡಿದ್ದೇವೆ ಎಂದರು. ಅಲ್ಲದೆ, ನಮ್ಮ ಗ್ಯಾರಂಟಿ ನ್ಯೂಸ್‌ ಆ ಜಾತ್ರೆಯನ್ನ ಕವರೇಜ್ ಮಾಡುವಲ್ಲಿ ಯಶಸ್ವಿಯಾಗಿದೆ. ನಮ್ಮ ಸಿನಿಮಾ ವರದಿಗಾರ್ತಿ ಕೀರ್ತಿ ಪಾಟೀಲ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಅದನ್ನ ನಟಿ ತನಿಷಾ ಕುಪ್ಪಂಡ ವೇದಿಕೆ ಮೇಲೆಯೇ ಹಂಚಿಕೊಂಡಿರೋದು ಇಂಟರೆಸ್ಟಿಂಗ್.

ಆಯುಷ್ ಎಂಟರ್ ಪ್ರೈಸಸ್ ಬ್ಯಾನರ್‌‌ನಡಿ ನರೇಶ್ ಗೌಡ್ರು ನಿರ್ಮಿಸಿರುವ ಈ ಚಿತ್ರದಲ್ಲಿ ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಸಿದ್ದು ಮೂಲಿಮನಿ, ಮಿತ್ರ, ಪಾಯಲ್ ಚಂಗಪ್ಪ, ಡಾ. ನಂಜಪ್ಪ, ಅರವಿಂದ್ ರಾವ್ ಹೀಗೆ ಬಹುದೊಡ್ಡ ಕಲಾವಿದರ ದಂಡೇ ಇದೆ. ಅಕ್ಷಯ್ ಎಸ್. ರಿಷಬ್ ಸಂಗೀತ, ಕೃಷ್ಣಕುಮಾರ್ ಸಿನಿಮಾಟೋಗ್ರಫಿ, R D ರವಿ ಸಂಕಲನ ಈ ಚಿತ್ರಕ್ಕಿದೆ. ಒಟ್ಟಾರೆ ಈ ಊರಬ್ಬ ಸಿನಿಮಾ ಮಾಗಡಿ ಭಾಗದ ಜನರಿಗೆ ಒಂಥರಾ ಟ್ರಿಬ್ಯೂಟ್. ಕಲ್ಚರ್‌ನ ಎಕ್ಸ್‌‌ಪ್ಲೋರ್ ಮಾಡುವಂತಹ ಊರಬ್ಬ ಶೈಲಿಯ ಚಿತ್ರಗಳು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನ ಮತ್ತಷ್ಟು ಗಟ್ಟಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version