ಪುತ್ರನ ವಿಯೋಗದಲ್ಲಿ ಕಣ್ಣೀರಿಟ್ಟ ಭಾ.ಮಾ. ಹರೀಶ್..!

ಪ್ರವಾಸಕ್ಕೆ ಹೋದ ಉಲ್ಲಾಸ್ ಹೆಣವಾಗಿ ವಾಪಸ್..!

Untitled design 2026 06 28T174620.894

ಹಸೆಮಣೆ ಏರಬೇಕಿದ್ದ ಮಗ, ಹೆಣವಾಗಿ ಮನೆಗೆ ಬಂದಾಗ ಆ ಹೆತ್ತವರ ಕರುಳು ಅನುಭವಿಸುವ ನರಕಯಾತನೆ ಯಾವ ಶತ್ರುವಿಗೂ ಬೇಡ. ಹೌದು, ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಭಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನ ದುರಂತ ಅಂತ್ಯ ಇಡೀ ಸ್ಯಾಂಡಲ್‌ವುಡ್ ಅನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ.

ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗನ ಸಾವು ಹೆತ್ತವರಿಗೆ ತುಂಬಲಾಗದ ನಷ್ಟ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡಗೆ ಕೇವಲ 28ವರ್ಷ,  ಕೊಡಚಾದ್ರಿ ಚಾರಣದ ವೇಳೆ ಹಠಾತ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತಂದೆಯ ಹೆಗಲಿಗೆ ಹೆಗಲಾಗಿ ನಿಂತು, ಇಡೀ ಕುಟುಂಬಕ್ಕೆ ಆಸರೆಯಾಗಬೇಕಿದ್ದ  ಮಗ ಹೀಗೆ ಪ್ರವಾಸಕ್ಕೆ ಹೋಗಿ ಹೆಣವಾಗಿ ಮರಳುತ್ತಾನೆ ಎಂದು ಆ ತಂದೆ ಕನಸಿನಲ್ಲೂ ಯೋಚಿಸಿರಲಿಲ್ಲ. ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗನ ಪಾರ್ಥಿವ ಶರೀರ ಬೆಂಗಳೂರಿನ ವಿಜಯನಗರದ ನಿವಾಸಕ್ಕೆ ಬರುತ್ತಿದ್ದಂತೆ, ಮಗನನ್ನು ನೋಡಿ ತಂದೆ ಭಾ.ಮಾ. ಹರೀಶ್ ಹಾಗೂ ಕುಟುಂಬಸ್ಥರು ಹಾಕಿದ ಆಕ್ರಂದನ ಕಲ್ಲೆದೆಯವರನ್ನೂ ಕಣ್ಣೀರಿಸುವಂತಿತ್ತು.

ಇದೆ ಡಿಸೆಂಬರ್ 24ರಂದು ಉಲ್ಲಾಸ್ ಗೌಡ ಹಸೆಮಣೆ ಏರಬೇಕಿತ್ತು, ಮದುವೆಗೆ ಮುಂಚಿತವಾಗಿ ನಡೆಯುವ ಕೆಲವು ಸಾಂಪ್ರದಾಯಿಕ ಶಾಸ್ತ್ರಗಳೂ ಕೂಡ ಮುಗಿದಿದ್ದವು. ಆಗಸ್ಟ್ ತಿಂಗಳಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿಸಲು ಎರಡು ಕುಟುಂಬಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದವು. ಆದರೆ, ವಿಧಿಯ ಕ್ರೂರ ಆಟಕ್ಕೆ ಹಸನ್ಮುಖಿ ಮಗನ ಮದುವೆ ನೋಡಬೇಕಾಗಿದ್ದ ಮನೆಯಲ್ಲಿ ಇಂದು ಮರಣ ಮೃದಂಗ ಬಾರಿಸಿದೆ. ಮಗನ ಮದುವೆಯ ಅರಕ್ಷತೆಯ ಸಂಭ್ರಮದಲ್ಲಿರಬೇಕಿದ್ದ ಎರಡು ಕುಟುಂಬಗಳಲ್ಲಿ ಈಗ ಕೇವಲ ನೋವು ಮತ್ತು ಸೂತಕದ ಛಾಯೆ ಆವರಿಸಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಕೇವಲ 28 ವರ್ಷದ ಉಲ್ಲಾಸ್ ಗೌಡ ಆರೋಗ್ಯವಂತ ಹಾಗೂ ಫಿಟ್ ಆ್ಯಂಡ್ ಫೈನ್ ಆಗಿದ್ದ ಯುವಕ. ಜಿಮ್‌ಗೆ ಹೋಗುತ್ತಾ, ಡ್ಯಾನ್ಸ್ ಕ್ಲಾಸ್ ನಡೆಸುತ್ತಾ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಉಲ್ಲಾಸ್. ಇಷ್ಟೊಂದು ಕಾಳಜಿಯುಳ್ಳ ಯುವಕ ಕೊಡಚಾದ್ರಿಯ ಶಿಖರದಲ್ಲಿ ಟ್ರೇಕಿಂಗ್ ಮಾಡುವಾಗ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ ಎನ್ನುವುದನ್ನು ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಇದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಭಾ.ಮಾ. ಹರೀಶ್ ಅವರ ಕುಟುಂಬ ಇಡೀ ಸ್ಯಾಂಡಲ್‌ವುಡ್‌ನ ಕಣ್ಣನ್ನು ಒದ್ದೆ ಮಾಡಿದೆ.

ನಿನ್ನೆ ಮಧ್ಯಾಹ್ನ ಕೊನೆಯುಸಿರು ಎಳೆದ ಉಲ್ಲಾಸ್ ಪಾರ್ಥಿವ ಶರೀರ ಇಂದು ಮಧ್ಯಾಹ್ನ ವಿಜಯನಗರದ ನಿವಾಸಕ್ಕೆ ತರಲಾಗಿತ್ತು. ಉಲ್ಲಾಸ್ ಗೌಡರ ಪಾರ್ಥಿವ ಶರೀರವನ್ನು ಕಂಡು ಜೋಗಿ ಪ್ರೇಮ್, ರಕ್ಷಿತಾ, ನಟಿ ಜಯಮಾಲ ಹಾಗೂ ಹಿರಿಯ ನಿರ್ಮಾಪಕ ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ನೂರಾರು ಗಣ್ಯರು ಭಾವುಕರಾಗಿ ಅಂತಿಮ ದರ್ಶನ ಪಡೆದರು.

ಉಲ್ಲಾಸ್‌ನ ಸೌಮ್ಯ ಸ್ವಭಾವ ಹಾಗೂ ಉತ್ತಮ ನಡತೆಯನ್ನು ನೆನೆದು ಕಣ್ಣೀರಿಟ್ಟರು. ನಂತರ ಸುಮನಹಳ್ಳಿ ಚಿತಾಗಾರದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಉಲ್ಲಾಸ್ ಗೌಡರ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಪ್ರವಾಸಕ್ಕೆಂದು ನಗುನಗುತ್ತಾ ಹೋದ ಮಗ ಹೀಗೆ ಹೆಣವಾಗಿ ಮರಳಿದ್ದು ನಿಜಕ್ಕೂ ಸ್ಯಾಂಡಲ್‌ವುಡ್‌ನ ಕಡು ಕಪ್ಪು ದಿನಗಳಲ್ಲಿ ಒಂದಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version