ಭೋಪಾಲ್: ಮಾಜಿ ಮಿಸ್ ಪುಣೆ ಹಾಗೂ ಮಾಡೆಲ್ ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ 636 ಪುಟಗಳ ಚಾರ್ಜ್ಶೀಟ್ನಲ್ಲಿ ಹಲವು ಮಹತ್ವದ ವಿವರಗಳು ಬಹಿರಂಗವಾಗಿವೆ. ಸಾವಿಗೂ ಕೆಲವೇ ನಿಮಿಷಗಳ ಮುನ್ನ ತ್ವಿಶಾ ತನ್ನ ಅತ್ತಿಗೆಗೆ ಕಳುಹಿಸಿದ್ದ ಸಂದೇಶ ಮತ್ತು ಬಳಿಕ ನಡೆದ ಘಟನೆಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಚಾರ್ಜ್ಶೀಟ್ ಪ್ರಕಾರ, ತ್ವಿಶಾ ರಾತ್ರಿ 9:36ಕ್ಕೆ ತನ್ನ ಅತ್ತಿಗೆಗೆ ‘ನನ್ನನ್ನು ಈಗ ನೆಮ್ಮದಿಯಿಂದ ಸಾಯಲು ಬಿಡಿ’ ಎಂದು ಸಂದೇಶ ಕಳುಹಿಸಿದ್ದಳು. ಇದಾದ ಕೆಲವೇ ನಿಮಿಷಗಳ ಬಳಿಕ, ಸುಮಾರು 9:40ಕ್ಕೆ ತ್ವಿಶಾ ಒಬ್ಬಳೇ ಟೆರೇಸ್ ಕಡೆಗೆ ತೆರಳುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.
ಇದಕ್ಕೂ ಮುನ್ನ ತ್ವಿಶಾ ತನ್ನ ತಂದೆಗೆ ಕರೆ ಮಾಡಿ, ಪತಿ ಸಮರ್ಥ್ ಸಿಂಗ್ ಕ್ರೂರವಾಗಿ ವರ್ತಿಸುತ್ತಿದ್ದಾರೆ. ತನಗೆ ಭಯವಾಗುತ್ತಿದೆ ಹಾಗೂ ತನ್ನನ್ನು ಅಲ್ಲಿಂದ ಕರೆದುಕೊಂಡು ಹೋಗುವಂತೆ ಅಳುತ್ತಾ ಮನವಿ ಮಾಡಿದ್ದಳು ಎಂದು ಸಿಬಿಐ ಹೇಳಿದೆ. ಬಳಿಕ ರಾತ್ರಿ 10:05ರ ಸುಮಾರಿಗೆ ತಾಯಿಗೆ ಪದೇಪದೇ ಕರೆ ಮಾಡಲು ಆಕೆ ಪ್ರಯತ್ನಿಸಿದ್ದಳು ಎನ್ನಲಾಗಿದೆ.
ಸಿಬಿಐ ಆರೋಪದ ಪ್ರಕಾರ, ತ್ವಿಶಾ ಮತ್ತು ಸಮರ್ಥ್ ಸಿಂಗ್ 2025ರ ಡಿಸೆಂಬರ್ 9ರಂದು ವಿವಾಹವಾಗಿದ್ದರು. ಮದುವೆಯ ಬಳಿಕ ತ್ವಿಶಾಗೆ ಮಾನಸಿಕ ಕಿರುಕುಳ, ಅವಹೇಳನಕಾರಿ ಮಾತುಗಳು ಹಾಗೂ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಿರುಕುಳ ನೀಡಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಪತಿ ಸಮರ್ಥ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ನಿರಂತರ ಮಾನಸಿಕ ಹಿಂಸೆ ನೀಡಿದ್ದರಿಂದ ತ್ವಿಶಾ ಆತ್ಮಹತ್ಯೆಗೆ ಪ್ರಚೋದಿತಳಾದಳು ಎಂಬುದು ಸಿಬಿಐನ ವಾದವಾಗಿದೆ.
ಹಣದ ವಿಚಾರವೂ ದಾಂಪತ್ಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ತ್ವಿಶಾ ಷೇರುಗಳಲ್ಲಿ ಸುಮಾರು ₹20 ಲಕ್ಷ ಹೂಡಿಕೆ ಮಾಡಿದ್ದಳು. ಈ ಹಣವನ್ನು ಜಂಟಿ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಒತ್ತಡ ಹೇರಲಾಗಿತ್ತು. ಆದರೆ, ಹಣ ತನ್ನ ತಂದೆಗೆ ಸೇರಿದ್ದು ಎಂದು ಹೇಳಿ ತ್ವಿಶಾ ಅದಕ್ಕೆ ನಿರಾಕರಿಸಿದ್ದಳು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದರ ನಡುವೆ ಏಪ್ರಿಲ್ನಲ್ಲಿ ತ್ವಿಶಾ ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ಗರ್ಭಧಾರಣೆಯನ್ನು ಮುಂದುವರಿಸುವ ವಿಚಾರದಲ್ಲೂ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಮೇ 6ರಂದು ಗರ್ಭಧಾರಣೆ ಅಂತ್ಯಗೊಳಿಸಲು ಔಷಧದ ಮೊದಲ ಡೋಸ್ ತೆಗೆದುಕೊಂಡ ಬಳಿಕ ಮೇ 7 ಮತ್ತು 8ರಂದು ಮುಂದುವರಿದ ಔಷಧ ಸೇವನೆಯಿಂದ ರಕ್ತಸ್ರಾವವಾಗಿತ್ತು ಎನ್ನಲಾಗಿದೆ.
ಈ ಬೆಳವಣಿಗೆಗಳ ಬಳಿಕ ತ್ವಿಶಾ ತನ್ನ ಕುಟುಂಬದವರ ಬಳಿ ಮರಳಲು ನಿರ್ಧರಿಸಿದ್ದಳು. ರೈಲು ಟಿಕೆಟ್ಗಾಗಿ ತಂದೆಯಿಂದ ಹಣ ಪಡೆದು ಪ್ರಯಾಣಕ್ಕೂ ಸಿದ್ಧತೆ ಮಾಡಿಕೊಂಡಿದ್ದಳು. ಆದರೆ, ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯಲ್ಲಿ ಹೇಳಲಾಗಿದೆ.
ರಾತ್ರಿ 10:16ರ ಸುಮಾರಿಗೆ ಗಿರಿಬಾಲಾ ತ್ವಿಶಾಳನ್ನು ಹುಡುಕಲು ತೆರಳಿದ್ದು, 10:23ರ ವೇಳೆಗೆ ಗಿರಿಬಾಲಾ ಮತ್ತು ಸಮರ್ಥ್ ಟೆರೇಸ್ ಕಡೆಗೆ ತೆರಳುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳಿಕ ತ್ವಿಶಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ರಾತ್ರಿ 10:55ರ ಸುಮಾರಿಗೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಎರಡನೇ ಮರಣೋತ್ತರ ಪರೀಕ್ಷೆಯಲ್ಲೂ ನೇಣು ಬಿಗಿದ ಪರಿಣಾಮ ಉಸಿರುಗಟ್ಟುವಿಕೆಯೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ದೈಹಿಕ ಹಲ್ಲೆಯನ್ನು ಸೂಚಿಸುವ ಮಹತ್ವದ ಗಾಯಗಳು ಪತ್ತೆಯಾಗಿಲ್ಲ. ಸಿಬಿಐ ಪ್ರಕಾರ, ದೈಹಿಕ ಹಲ್ಲೆಗಿಂತ ನಿರಂತರ ಮಾನಸಿಕ ಕ್ರೌರ್ಯವೇ ತ್ವಿಶಾ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಕಾರಣವಾಗಿದೆ ಎಂಬ ಆರೋಪವಿದೆ.
ಆದರೆ ತನಿಖೆ ಇನ್ನೂ ಮುಂದುವರಿದಿದೆ. ತ್ವಿಶಾಳ ಐಫೋನ್ನ ವಿಧಿವಿಜ್ಞಾನ ಪರೀಕ್ಷೆ, ಮನೆಯ DVR ಹಾಗೂ ಆರೋಪಿಗಳ ಧ್ವನಿ ಮಾದರಿಗಳ ವರದಿಗಾಗಿ ಸಿಬಿಐ ಕಾಯುತ್ತಿದೆ. ವರದಕ್ಷಿಣೆ ಬೇಡಿಕೆ ಮತ್ತು ವರದಕ್ಷಿಣೆ ಸಾವಿನ ಆರೋಪಗಳ ಕುರಿತ ತನಿಖೆಯನ್ನೂ ಮುಂದುವರಿಸಲು ಅನುಮತಿ ಕೋರಲಾಗಿದೆ.
