‘ಮಲೇಷ್ಯಾ ಬುಕ್ ಆಫ್ ರೆಕಾರ್ಡ್‌’ನಲ್ಲಿ ‘ಜನನಾಯಗನ್’

ದಳಪತಿ ವಿಜಯ್ ಕೊನೆ ಚಿತ್ರ..ಕನ್ನಡದ KVN ನಿರ್ಮಾಣ

Untitled design 2025 12 28T143014.024

ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಜನ ನಾಯಗನ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಹಗಲು ದರೋಡೆಗೆ ಇಳಿದಿದೆ ತಮಿಳು ಮೂವಿ. ಟಿಕೆಟ್ ಪ್ರೈಸ್ ಕೇಳಿದ್ರೆ ನೀವು ಶಾಕ್ ಆಗ್ತೀರಾ..? ಹಾಗಾದ್ರೆ 11 ದಿನಕ್ಕೂ ಮೊದಲೇ ಆನ್‌ಲೈಟ್ ಟಿಕೆಟ್ ಬುಕಿಂಗ್ ಬಿಟ್ಟಿರೋ ಡಿಸ್ಟ್ರಿಬ್ಯೂಟರ್, ಟಿಕೆಟ್ ದರ ಎಷ್ಟು ಇಟ್ಟಿದ್ದಾರೆ..? ಮಲೇಷ್ಯಾದಲ್ಲಿ ನಡೆದ ಆಡಿಯೋ ಲಾಂಚ್ ಇವೆಂಟ್ ಹೈಲೈಟ್ಸ್ ಇಲ್ಲಿದೆ..

ಜನ ನಾಯಗನ್.. ಪೊಂಗಲ್ ವಿಶೇಷ ಜನವರಿ 9ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸೋಕೆ ಸಜ್ಜಾಗಿರೋ ತಮಿಳು ಸಿನಿಮಾ. ತಮಿಳು ವೆಟ್ರಿ ಕಳಗಂ ಅನ್ನೋ ಪಕ್ಷ ಕಟ್ಟಿ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗುವ ಕನಸು ಕಂಡಿರೋ ನಟ ದಳಪತಿ ವಿಜಯ್ ಲೀಡ್‌‌ನಲ್ಲಿ ನಟಿಸಿರೋ ಸಿನಿಮಾ ಇದು. ಅಂದಹಾಗೆ ಇದೇ ಅವರ ಕಟ್ಟಕಡೆಯ ಸಿನಿಮಾ ಕೂಡ ಹೌದು. ಇದಾದ ಬಳಿಕ ಕಂಪ್ಲೀಟ್ ಆಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿರೋ ವಿಜಯ್, ಬಣ್ಣದ ಲೋಕಕ್ಕೆ ಪರ್ಮನೆಂಟ್ ಆಗಿ ಗುಡ್ ಬೈ ಹೇಳಲಿದ್ದಾರೆ.

ಕರೂರ್ ಕಾಲ್ತುಳಿತ ಪ್ರಕರಣದ ನಂತ್ರ ನಟ ವಿಜಯ್‌ಗೆ ಸಾರ್ವಜನಿಕವಾಗಿ ಱಲಿ ಅಥ್ವಾ ಸಮಾವೇಷಗಳನ್ನ ಮಾಡೋಕೆ ತಮಿಳುನಾಡು ಸರ್ಕಾರ ತುಂಬಾ ಕಷ್ಟಕರ ಕಾನೂನು ತಂದಿದೆ. ಹಾಗಾಗಿ ಚಿತ್ರತಂಡ ಈ ಜನನಾಯಗನ್ ಸಿನಿಮಾದ ಆಡಿಯೋ ಲಾಂಚ್ ಫಂಕ್ಷನ್‌‌ನ ಮಲೇಷ್ಯಾದಲ್ಲಿ ನಡೆಸಿತು. ಆ ಸ್ಟೇಡಿಯಂನಲ್ಲಿ 80 ಸಾವಿರ ಆಸನಗಳಿದ್ದು, ಒಂದು ಲಕ್ಷ 25 ಸಾವಿರದ 813 ಮಂದಿ ಭಾಗಿಯಾಗಿ, ವಿಜಯ್ ಸಿನಿಮಾ ಹಾಗೂ ರಾಜಕೀಯ ವಿಜಯಕ್ಕೆ ನಾಂದಿ ಹಾಡಿದ್ರು. ವಿದೇಶದಲ್ಲಿ ನಡೆದ ಭಾರತದ ಬಹುದೊಡ್ಡ ಇವೆಂಟ್ ಇದಾಗಿದ್ದು, ಲಕ್ಷಾಂತರ ಜನರ ಆಗಮನ ಮಲೇಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದೆ.

ಇದು ವಿಜಯ್ ಕೊನೆಯ ಸಿನಿಮಾ ಆಗಿರೋದ್ರಿಂದ ಅಲ್ಲಿ ವಿಜಯ್ ಕೊನೆಯದಾಗಿ ಹಾಡು ಹಾಡಿದ್ರು. ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. 2026 ನಮ್ಮದೇ ಎಂದ ಅಭಿಮಾನಿಯ ಕೈ ಕುಲುಕಿದ ವಿಜಯ್ ಆ ಅಭಿಮಾನಕ್ಕೆ ಮನಸೋತರು. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾನ ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ನಿರ್ಮಾಪಕ ಕೆ ವೆಂಕಟ್ ನಾರಾಯಣ್, ನಾಯಕನಟಿ ಪೂಜಾ ಹೆಗ್ಡೆ ಹಾಗೂ ಸಂಗೀತ ಸಂಯೋಜಕ ಅನಿರುದ್ದ್ ರವಿಚಂದರ್ ಕೂಡ ಉಪಸ್ಥಿತರಿದ್ದರು.

ಅಂದಹಾಗೆ ಜನ ನಾಯಗನ್ ಇವೆಂಟ್, ಪ್ರಭಾಸ್ ಸಾಹೋಗೆ ಜಮಾಯಿಸಿದ್ದ 88 ಸಾವಿರದ 157 ಮಂದಿಯ ರೆಕಾರ್ಡ್‌ ಹಾಗೂ ಅಲ್ಲು ಅರ್ಜುನ್‌ರ ಪುಷ್ಪ-2 ಇವೆಂಟ್‌ಗೆ ಆಗಮಿಸಿದ್ದ 79 ಸಾವಿರದ 138 ಮಂದಿ ದಾಖಲೆಯನ್ನ ಸರಿಗಟ್ಟಿದೆ. ಇದು ದಳಪತಿ ವಿಜಯ್ ಸ್ಟಾರ್‌‌ಡಮ್‌ ಪ್ರತೀಕವಾಗಿದ್ದು, ಸಿನಿಮಾದ ರಿಲೀಸ್ ಇನ್ನೂ 11 ದಿನಗಳಿರುವಂತೆಯೇ ಆನ್ ಲೈನ್ ಟಿಕೆಟ್ ಬುಕಿಂಗ್ ಶುರುವಾಗಿದೆ.

ಹೌದು.. ಈ ಬಾರಿ ಕೂಡ ಕರ್ನಾಟಕದಲ್ಲಿ ತಮಿಳು ಸಿನಿಮಾ ಅಕ್ಷರಶಃ ಹಗಲು ದರೋಡೆಗೆ ಇಳಿದಿದೆ. ಯಾಕಂದ್ರೆ ಟಿಕೆಟ್ ದರ ಬರೋಬ್ಬರಿ ಒಂದೂವರೆ ಸಾವಿರ, ಸಾವಿರ ರೂಪಾಯಿಗಳ ಗಡಿ ದಾಟಿದೆ. ಕರ್ನಾಟಕ ಸರ್ಕಾರ ಇತ್ತೀಚೆಗೆ ಏಕರೂಪ ಟಿಕೆಟ್ ದರ ನೀತಿ ತಂದಿತ್ತು. ಅದನ್ನ ಪ್ರಶ್ನಿಸಿ, ಮಲ್ಟಿಪ್ಲೆಕ್ಸ್‌ ಹಾಗೂ ಕೆಲ ನಿರ್ಮಾಪಕರು ಕೋರ್ಟ್‌ಗೆ ಹೋಗಿದ್ರು. ಸದ್ಯ ಏಕರೂಪ ಟಿಕೆಟ್ ದರ ನೀತಿಗೆ ಬ್ರೇಕ್ ಬಿದ್ದಿದ್ದು, ಲಂಗು ಲಗಾಮು ಇಲ್ಲದೆ ಪರಭಾಷಿಗರು ನಮ್ಮ ಚಿತ್ರಪ್ರೇಮಿಗಳ ಮೇಲೆ ಟಿಕೆಟ್ ದರದ ದಾಳಿ ಮಾಡ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version